ಈ ಜಗತ್ತಿನಲ್ಲಿ ಸ್ವರ್ಗವೇನಾದರೂ ಇದ್ದರೆ ಅದು ಇಲ್ಲಿಗೇ ಇಳಿದು ಬಂದಿದೆ ಎಂದು ನಾನು ಸುರಿಯುವ ಮಂಜಿಗೆ ಮುಖವೊಡ್ಡಿ ಸುಖಿಸುತ್ತಿದ್ದೆ. ಅರಳೆಯಂತೆ ತೇಲಿ ಬರುವ ಮೋಡಗಳು ಜೊತೆಗೆ ನಮ್ಮನ್ನೂ ಹೊತ್ತು ಸಾಗುತ್ತಿದ್ದವು. ಅಕ್ಕ ಪಕ್ಕ ಒಬ್ಬರ ಕೈಯನ್ನಿಡಿದು ಒಬ್ಬರು ನಿಂತಿದ್ದರೂ ಪರಸ್ಪರ ಮುಖ ಕಾಣದಷ್ಟು ದಟ್ಟ ಮಂಜು. ಬೀಸಿ ಬರುವ ಗಾಳಿಗೆ ಮಂಜು ಹನಿ ಹನಿಯಾಗಿ ಮುಖದ ಮೇಲೆಲ್ಲಾ ಸುರಿದು ಅಪೂರ್ವ ಅನುಭವ ನೀಡುತ್ತಿದ್ದವು. ಹಿಂದೆಲ್ಲೋ ಚಂದಮಾಮ ಕಥೆಯಲ್ಲಿ ಓದಿದ ಮೋಡದ ಕಥೆಗಳು, ಅದರ ನಡುವಿನಿಂದ ಇಳಿದು ಬರುವ ದೇವದೂತರು, ಯಾವುದೋ ಹೊಟೇಲಿನ ಗೋಡೆಯ ಮೇಲೆ ಕಂಡು, ಮನಸ್ಸಿನಲ್ಲಿ ಇಳಿದು ಹೋಗಿರುವ ಮಂಜಿನ ವಾಲ್ಪೋಸ್ಟರ್ ಇದೆಲ್ಲವನ್ನೂ ಪ್ರತ್ಯಕ್ಷ ಕಂಡಂತೆ, ಕಂಡೂ ನಂಬಲಾಗದವನಂತೆ ನಾನು ಮರಗಟ್ಟಿದ ಕೈಯನ್ನು ಮತ್ತೊಂದು ಕೈಯಿಂದ ತಿಕ್ಕಿ ತಿಕ್ಕಿ ಬಿಸಿ ಮಾಡಿಕೊಳ್ಳುತ್ತಾ ಫೋಟೋ ತೆಗೆಯುತ್ತಿದ್ದೆ.
ಮೊನ್ನೆ ರಾತ್ರಿ ಹನ್ನೆರಡರ ಸುಮಾರಿಗೆ ಬೆಂಗಳೂರಿನಿಂದ ಬಂದ ತಂಡವೊಂದು, ಯಾವ ಸೂಚನೆಯೂ ಕೊಡದೆ ಮೈಸೂರಿನಲ್ಲಿ ನನ್ನನ್ನು ಗಾಡಿಯಲ್ಲಿ ಎತ್ತಿ ಹಾಕಿ ಗುಂಡ್ಲುಪೇಟೆಯಲ್ಲಿ ಇಳಿಸಿದಾಗಲೇ ನನಗೆ ನಾವು ಹೋಗುತ್ತಿರುವುದು ಗೋಪಾಲಸ್ವಾಮಿ ಬೆಟ್ಟಕ್ಕೆ ಎನ್ನುವುದು ಗೊತ್ತಾಗಿದ್ದು. ಕಸ್ತೂರಿ ಚಾನೆಲ್ನ ಏಳು ಜನ ಸ್ನೇಹಿತರು ಸ್ಟಿಂಜ್ ಆಪರೇಷನ್ಗೆ ಹೊರಟವರಂತೆ ಪಿಕ್ನಿಕ್ಗೆ ಬಂದಿದ್ದರು. ಏನ್ ಮಗ ಎಲ್ಲಿಗೆ? ಎಂದು ನಾನು ಕೇಳುವ ಮೊದಲೇ ಗಾಡಿಯಲ್ಲಿ ಹತ್ತಿಸಿಕೊಂಡು ನಂಜನಗೂಡಿನ ಬಳಿ ಇಳಿಸಿ, ಮಳೆಯಲ್ಲಿಯೇ ಹ್ಯಾಪಿ ಬರ್ತ್ ಡೆ ಹಾಡಿ ಗೆಳೆಯ ಪ್ರತೀಕ್ನ ಹುಟ್ಟು ಹಬ್ಬ ಆಚರಿಸಿದ್ದರು. ಓಹೋ ಹೀಗಾ ಸಮಾಚಾರ ಎಂದು ನಾನು ಎಲ್ಲವನ್ನೂ ಅರ್ಥಮಾಡಿಕೊಳ್ಳುವ ಹೊತ್ತಿಗೆ, `ಟೆನ್ಷನ್ ತಕೋಬೇಡಿ, ನಾಳೆ ರಾತ್ರಿ ಇದೇ ಹೊತ್ತಿಗೆ ನಿಮ್ಮನ್ನು ತಂದು ಮೈಸೂರಿನಲ್ಲಿ ಓಗೀತೀವಿ ಅಲ್ಲಿಯವರೆಗೆ ಎಂಜಾಯ್` ಎಂದು ಕಸ್ತೂರಿಯ BP ಗಣೇಶ್ ವಾರ್ತೆಗೆ ಚಾಲನೆ ನೀಡಿದ್ದರು.
ಗುಂಡ್ಲುಪೇಟೆಯ ಫಠಾನ್ ಲಾಡ್ಜ್ನಲ್ಲಿ ಮಲಗಿ ಬೆಳಿಗ್ಗೆ ಆರು ಗಂಟೆಗೇ ಗೋಪಾಲ ಸ್ವಾಮಿ ಬೆಟ್ಟಕ್ಕೆ ಹೋಗುವುದೆಂದು ನಿರ್ಧರಿಸಲಾಗಿತ್ತು. ಹಾಗೇನಾದರೂ ನಾವು ಬೆಳಿಗ್ಗೆಯೇ ಹೋಗಿದ್ದರೆ ಆ ಚಳಿಯಲ್ಲಿ ಸತ್ತು ಹೋಗುತ್ತಿದ್ದೆವೋ ಏನೋ? ಆದರೆ ತಿಂಗಳ ಕೊನೆಯಲ್ಲಿ ಸರಿಯಾಗಿ ವೇತನ ಹೊರಡಿಸುವ ಕಸ್ತೂರಿ ಎಚ್ಆರ್ ಯೋಗಾನಂದ್ ಅವರು ತಮ್ಮ ಅತ್ತೆ ಮನೆಗೆ ಹೋಗಿದ್ದರಿಂದ ಬರುವುದು ಲೇಟಾಯಿತು, ಹಾಗಾಗಿ ನಾವು ಬೆಟ್ಟದ ತುದಿ ತಲುಪಿದಾಗ ಮಧ್ಯಾಹ್ನ ಒಂದೂವರೆಯಾಗಿತ್ತು. ಎದುರಿಗೆ ಬರುತ್ತಿದ್ದ ವಾಹನಗಳು ಲೈಟ್ ಹಾಕಿಕೊಂಡು ಇಳಿಯುತ್ತಿದ್ದವು. ಕೆಳಗೆ ಆಳ ಪ್ರತಾಪ. ಮೋಡಗಳು ಕೈಗೆಟುಕುವಂತೆ ಕಿಟಕಿಯ ಪಕ್ಕದಿಂದ ಹಾರಿ ಹೋಗುತ್ತಿದ್ದವು. ಬೆಟ್ಟದಲ್ಲಿ ಅದ್ಭುತವೆನ್ನುವ ವಾತಾವರಣ ಇತ್ತು. ಮಂಜು ಸುರಿಯುತ್ತಿತ್ತು.
ಬೆಟ್ಟದ ತುದಿಯಿಂದ ಹಾಗೆಯೇ ಇಳಿದುಕೊಂಡು ಹೋಗಿ ಬಂಡೆಯೇರಿ ಕುಳಿತೆವು. ಮಾತಿಲ್ಲ, ಕಥೆಯಿಲ್ಲ. ಮಾತನಾಡುವುದಾದರೂ ಏನನ್ನು, ಪಕೃತಿಯ ಸೌಂದರ್ಯವನ್ನೂ, ಸಂತಸವನ್ನೂ ಹನಿ ಹನಿಯಾಗಿ ಬೊಗಸೆಯಲ್ಲಿ ತುಂಬಿಕೊಂಡಂತೆ, ಪ್ರತಿಯೊಬ್ಬರೂ ಖುಷಿಯಲ್ಲಿ ತೇಲಿಹೋಗಿದ್ದರು. ಯಾರಾದರೂ ಭಾವುಕ ಮನಸ್ಸಿನವರು ಇದ್ದರೆ ಅಲ್ಲೇ ಕುಳಿತು ಕವಿತೆಯನ್ನೋ, ಕಥೆಯನ್ನೋ ಬರೆಯುತ್ತಿದ್ದರು. ಯಾರೂ ಎದ್ದು ಬರಲು ತಯಾರಿಲ್ಲ. ಮಂಜುನಾಥ್ ಜೂಟಿ ಎಲ್ಲರ ಒತ್ತಡಕ್ಕೆ ಮಣಿದು ತಂದಿದ್ದ ಬಾಳೆ ಹಣ್ಣು ಆಗಲೇ ಮುಗಿದಿತ್ತು. ಶರತ್ ಗುಂಡ್ಲುಪೇಟೆಯ ಹತ್ತಿರದಲ್ಲೇ ಇರುವ ತನ್ನ ಮನಗೆ ಹೋಗಿ ಬರುವುದಾಗಿ ಹೇಳಿದ. ರಫೀಕ್ಗೆ ಆದಷ್ಟು ಬೇಗ ಮದುವೆಯಾಗಿ, ಹನಿಮೂನ್ಗೆ ಇಲ್ಲಿಗೆ ಬಾ ಎಂದು ಹೇಳಿದೆವು. ಗಣೇಶ್, ಪ್ರತೀಕ್, ಮಸೂದ್ ಮರವೊಂದನ್ನು ಹತ್ತಿ ಇಲ್ಲೇ ಪ್ಲಾಟ್ ಕೊಂಡರೆ ಹೇಗೆ ಅಂತೆಲ್ಲಾ ಲೆಕ್ಕಾಚಾರ ನಡೆಸುತ್ತಿದ್ದರು.
ನಾನು ಇಷ್ಟೆಲ್ಲಾ ಖುಷಿಯನ್ನು ಒಟ್ಟಿಗೆ ಅನುಭವಿಸುವುದು ಹೇಗೆ ದೇವರೆ ಎಂದುಕೊಳ್ಳುತ್ತಾ, ಫೋಟೋ ತೆಗೆದಷ್ಟೂ ಸಾಕಾಗದವನಂತೆ ಸುಮ್ಮನೆ ಕ್ಲಿಕ್ಕಿಸುತ್ತಲೇ ಇದ್ದೆ. ಬೆಟ್ಟದ ತುದಿಯಲ್ಲಿದ್ದ ಗೋಪಾಲಸ್ವಾಮಿ ಚಳಿಯಲ್ಲಿ ನಡುತ್ತಿದ್ದನೋ ಏನೋ? ದೇವಸ್ಥಾನದ ಹಿಂದೆ ತೇಲಿ ಬರುವ ಬಿಳಿಯ ಮೋಡಗಳನ್ನು ನೋಡಿ, ಖುಷಿ ತಡೆಯಲಾಗದೇ ಹುಡುಗಿಯೊಬ್ಬಳು ಮನಸಾರೆ ನರ್ತಿಸುತ್ತಿದ್ದಳು. ಬೆಟ್ಟ ಇಳಿಯಲು ನನಗಂತೂ ಮನಸ್ಸು ಇರಲಿಲ್ಲ. ನಂತರ ಬಂಡೀಪುರಕ್ಕೆ ಬಂದು ಗಾಡಿಯಲ್ಲಿಯೇ ಕುಳಿತು ಸಫಾರಿ ಅನುಭವಿಸಿದರೂ ಯಾಕೋ ಗೋಪಾಲಸ್ವಾಮಿ ಬೆಟ್ಟ ಮನಸ್ಸಿನಿಂದ ಮರೆಯಾಗುತ್ತಿಲ್ಲ. ನನಗೆ ಆನೆ ನೋಡಬೇಕು ಎಂದೆಲ್ಲಾ ಹಠ ಹಿಡಿದಿದ್ದ ಕಸ್ತೂರಿ ಬಿಪಿ ಗಣೇಶ್ ಅವರಿಗೆ ಕೊನೆಗೂ ಬಂಡೀಪುರ ರಸ್ತೆಯಲ್ಲಿ ಆನೆಯ ಲದ್ದಿ ತೋರಿಸಿ ಸಮಾಧಾನ ಮಾಡಿ ಕರೆತಂದೆವು.
ಹಾಗೆ ಸುಮ್ಮನೆ ನಿಮ್ಮ ಮನಸ್ಸಿಗೆ ತುಂಬಾ ಬೇಸರ ಆಗಿದೆ ಅಂತ ಅನಿಸಿದರೆ ಯಾರಿಗೂ ಹೇಳದೇ ಕೇಳದೇ ಒಮ್ಮೆ ಗೋಪಾಲಸ್ವಾಮಿ ಬೆಟ್ಟಕ್ಕೆ ಹೋಗಿಬನ್ನಿ. ವಾಪಾಸ್ಸು ಬರುವಾಗ ನಿಮ್ಮ ಮನಸ್ಸು ಮಗುವಿನಂತಾಗಿರದಿದ್ದರೆ ನನ್ನ ಕೇಳಿ.

