Monday, 15 June, 2009

ಮಂದಣ್ಣ, ಬೋದಿಲೇರ್ ಮತ್ತು ಮಾಧವಿಕುಟ್ಟಿ

ಮನುಷ್ಯ ಸದಾ ಕುಡಿದ ಸ್ಥಿತಿಯಲ್ಲಿರಬೇಕು ಎನ್ನುತ್ತಾನೆ ಪ್ರೆಂಚ್ ಕವಿ ಬೋದಿಲೇರ್. ಬೋದಿಲೇರ್‌ನ ಮಾತು ನಿಜವಾಗುತ್ತಿದ್ದರೆ ಈ ಲೋಕವೆಲ್ಲಾ ಸದಾ ಎಷ್ಟೊಂದು ಅಮಲಿನಲ್ಲಿ ತೇಲುತ್ತಿರುತ್ತಿತ್ತು ಎಂದು ನಾನು ಯೋಚಿಸುತ್ತಿರುತ್ತೇನೆ. ನಮ್ಮಲ್ಲಿ ಕೆಲವೇ ಕೆಲವು ಜನರು ಮಾತ್ರ ಸಂಜೆಯ ಹೊತ್ತಿಗೆ ಬೋದಿಲೇರ್‌ನನ್ನು ನೆನಪಿಸಿಕೊಳ್ಳುತ್ತಾರಲ್ಲಾ ಎಂದು ಬೇಜಾರಾಗುತ್ತದೆ. ಒಮ್ಮೆ ತೇಜಸ್ವಿಯ ’ಕರ್ವಾಲೋ’ ಓದಿ ಲಂಕೇಶ್ "ನಾನೂ ಕೂಡ ಕೆಲವೊಮ್ಮೆ ಈ ಮಂದಣ್ಣನಂತಿದ್ದರೆ ಎಷ್ಟು ಚನ್ನಾಗಿರುತ್ತಿತ್ತು" ಎಂದು ಬರೆದಿದ್ದರು. ನನಗೂ ಕೂಡ ಇತ್ತೀಚೆಗೆ ಯಾಕೋ ಬೋದಿಲೇರ್‌ನಂತೆ ಕುಡಿದ ಸ್ಥಿತಿಯಲ್ಲಿ ಮಂದಣ್ಣನಂತೆ ಆರಾಮವಾಗಿ ತಿರುಗಾಡಿಕೊಂಡು ಇರಬೇಕು ಅನಿಸುತ್ತಿದೆ.

ಹೈದ್ರಾಬಾದ್‌ನಲ್ಲಿ ಲಂಕೇಶರ ಟೀಕೆ- ಟಿಪ್ಪಣಿ ಕುರಿತು ಪಿಎಚ್‌ಡಿ ಮಾಡುತ್ತಿರುವ ನನ್ನ ಸೀನಿಯರ್ ಒಬ್ಬರಿಗೆ ಮೊನ್ನೆ ಹೇಗಿದ್ದೀರಾ? ಎಂದು ಸ್ಕ್ರಾಪ್ ಮಾಡಿದರೆ, ಅವರು ’ಏನೂಂತ ಹೇಳಲಿ ಜೋಮನ್ ಹೊರಗಡೆ ಮಳೆ ಉಯಿತಿದೆ ಒಳಗಡೆ ಝಳ ಆಗ್ತಿದೆ; ನಟ್ಟ ನಡು ಲೈಫಲ್ಲಿ ಬಿಟ್ಟು ಹೋದವಳ ನೆನಪು, ದಟ್ಟ ಕಾಡಲ್ಲಿ ಅಮಾಯಕ ಮೊಲದ ಸ್ಥಿತಿ! ಇನ್ನು ನೀನೆ ಉಹಿಸಿಕೋ! ಎಂದು ತೀವ್ರ ವಿಷಾದಲ್ಲಿ ಪ್ರತಿಕ್ರಿಯಿಸಿದ್ದಾರೆ. ನಾನೂ ಕೂಡ ಅವರಿಗೆ ತೇಜಸ್ವಿ ಶೈಲಿಯಲ್ಲಿ ’ನಿಮ್ಮ ಎದೆಯೊಳಗಿನ ಅದಮ್ಯ ಪ್ರೇಮ ಶರಧಿಯನ್ನೂ, ತ್ಯಾಗಮಯತೆಯನ್ನೂ, ಸಾಹಸ ಪ್ರೀಯತೆಯನ್ನೂ ಅರಿಯುವ ಯೋಗ್ಯತೆ ಅಲ್ಲಿನ (ಹೈದ್ರಾಬಾದಿನ) ಹುಡುಗಿಯರಿಗೆ ಇಲ್ಲ ಎನ್ನುವ ತೀವ್ರ ವಿಷಾದ ನಿಮ್ಮಂತೆ ನನ್ನ ಹೃದಯವನ್ನೂ ಕಾಡುತ್ತಿದೆ ಎಂದು ಬರೆದು ಸಮಾಧಾನ ಮಾಡಿದ್ದೇನೆ.

"ನಾನು ಶ್ರಿಕೃಷ್ಣನನ್ನು ಅಲ್ಲಾಹುವಾಗಿ ಪರಿವರ್ತಿಸಿ ಅವನನ್ನು ಪ್ರವಾದಿಯನ್ನಾಗಿ ಮಾಡಿ, ಮೊಹಮದ್ ಎಂದು ಕರೆಯುತ್ತೇನೆ. ಗುರುವಾಯೂರಿಗೆ ಹೋದರೆ ಅಲ್ಲಿ ಕೃಷ್ಣ ಇರುವುದಿಲ್ಲ" ಎಂದು ನಿರ್ಭಯವಾಗಿ ಹೇಳಿಕೆ ನೀಡಿ, ಹಿಂದುತ್ವವಾದಿಗಳ ಕೆಂಗಣ್ಣಿಗೆ ಗುರಿಯಾದ ಮಾಧವಿಕುಟ್ಟಿ ಎಂಬ ಕಮಲಾ ಸುರಯ್ಯ ತೀರಿಹೋಗಿ ಈವತ್ತಿಗೆ ಹದಿನೇಳು ದಿನಗಳಾದವು. ನಾನು ಇಲ್ಲಿನ ಎಂಜಿ ರಸ್ತೆಯಲ್ಲಿರುವ ಹಲವು ಪುಸ್ತಕದ ಅಂಗಡಿಗೆ ನುಗ್ಗಿ ಅವರ ’ನಷ್ಟಪಟ್ಟ ನೀಲಾಂಬರಿಯೋ, ನೆಯ್ ಪಾಯಸ’ಮೋ ಸಿಗುತ್ತೆದೆಯೇ ಎಂದು ಆಸೆಯಿಂದ ಹುಡುಕಿ ಬಂದೆ. ಎಲ್ಲೂ ಸಿಗಲಿಲ್ಲ. ಸಿಕ್ಕಿದ್ದರೆ ಗೊತ್ತಿರುವ ಅಲ್ಪಸ್ವಲ್ಪ ಮಲಯಾಳದಲ್ಲಿ ಅದನ್ನು ಓದಬಹುದಿತ್ತು ಎಂಬ ಆಸೆ ಹಾಗೆಯೇ ಉಳಿಯಿತು. ಹಾಗೆ ರೂಮಿಗೆ ಬಂದು ಕೈಗೆ ಸಿಕ್ಕಿದ ’ಕರ್ವಾಲೋ’ ಮತ್ತೊಮ್ಮೆ ಓದಿದಾಗ ಈ ಮೇಲಿನ ತಮಾಷೆಗಳೆಲ್ಲಾ ನೆನಪಾದವು.

ಈಗೀಗ ಬ್ಲಾಗಿಗೆ ಬರೆಯಲು ತುಂಬಾ ಹೆದರಿಕೆ ಆಗುತ್ತಿದೆ. ಏಕೆಂದರೆ ನನ್ನ ಬ್ಲಾಗ್ ಆಫ್‌ಡೇಟ್ ಆಗಿ ನಾಲ್ಕು ತಿಂಗಳಾಯಿತು. ಸನ್ಮಾನ್ಯ ಬ್ಲಾಗಿಗರೇ ನಾನು ಮಳೆಹನಿಯ ಜೋಮನ್ ವರ್ಗೀಸ್ ಎಂದು ನನ್ನನ್ನು ನಾನೇ ಪರಿಚಯಿಸಿಕೊಳ್ಳುತ್ತಾ ಮತ್ತೊಮ್ಮೆ ಪ್ರಾರಂಭಿಸಬೇಕಿದೆ. ಮಳೆ ನಿಂತರೂ ಮಳೆಹನಿ ನಿಂತಿಲ್ಲ ಎನ್ನುವಂತೆ ನನ್ನ ಬ್ಲಾಗ್ ಈಗ ಆಪ್‌ಡೇಟ್ ಆಗಿದೆ. ಈ ಮಳೆ ಸುರಿಯುವ ಹೊತ್ತಿನಲ್ಲಾದರೂ ಕನ್ನಡದ ಸಹೃದಯ ಬ್ಲಾಗಿಗರು ಮಳೆಹನಿಯನ್ನು ನೆನಪಿಸಿಕೊಳ್ಳಲಿ ಎನ್ನುವ ಆಸೆಯಾಗುತ್ತಿದೆ.

ಕನ್ನಡದಲ್ಲಿ ಪ್ರತಿದಿನವೂ ಆಪ್‌ಡೇಟ್ ಆಗುವ ಬ್ಲಾಗ್ ಎಂದು ಯಾರಾದರೂ ಪ್ರಶಸ್ತಿ ಕೊಟ್ಟರೆ ಅದು ಪರ್ಯಾಯದ ಉದಯಶಂಕರ ಭಟ್ಟರಿಗೂ, ಅತ್ಯಂತ ನಿಧಾನವಾಗಿ ಅಫ್‌ಡೇಟ್ ಆಗುವ ಬ್ಲಾಗ್ ಎನ್ನುವ ಪ್ರಶಸ್ತಿ ಮಳೆಹನಿಗೂ ಖಂಡಿತ ಬರುತ್ತದೆಯೆಂದು ನಾನೂ ತುಂಬಾ ವಿಶ್ವಾಸ ಇಟ್ಟುಕೊಂಡಿದ್ದೇನೆ. ನನಗೆ ಸಿಗುವ ಈ ಪ್ರಾಮಾಣಿಕ ಪ್ರಶಸ್ತಿಗೆ ಯಾರಾದರೂ ಪ್ರತಿಸ್ಪರ್ಧಿಗಳಿದ್ದರೆ ಮೊದಲೇ ನನಗೆ ತಿಳಿಸತಕ್ಕದ್ದು. ವೀಕ್ ಆಫ್ ಇರುವ ದಿನ ಪ್ರೆಸ್‌ಕ್ಲಬ್‌ನಲ್ಲಿ ರಾಜಿ ಸಂಧಾನಕ್ಕೆ ಅವಕಾಶವಿರುತ್ತದೆ.

Tuesday, 3 February, 2009

ಏಟ್ಸ್, ಎಂಜಿ ರಸ್ತೆ ಮತ್ತು ತರಲೆ ಹುಂಜ

ಬಿಸಿಲು ಚಿನ್ನದ ಬಣ್ಣಕ್ಕೆ ತಿರುಗುವ ಹೊತ್ತಿಗೆ ನಾನು ಇಲ್ಲಿನ ಎಂಜಿ ರಸ್ತೆಯಲ್ಲಿರುವ ಇಂಡಿಯನ್ ಕಾಫಿಹೌಸ್‌ನಲ್ಲಿ ಕುಳಿತು ಬೆಂಗಳೂರನ್ನು ಅಪಾರ ಮೋಹದಿಂದ ನೋಡುತ್ತಿದ್ದೆ. ಮೈಮೇಲೆ ಎಚ್ಚರವಿಲ್ಲದೆ ಧಾವಿಸುವ ಹರೆಯದ ಹುಡುಗ ಹುಡುಗಿಯರು, ಪರಸ್ಪರ ಸೊಂಟ ಬಳಸಿ ನಡೆಯುವ ಪ್ರೇಮಿಗಳು, ಬ್ರಿಗೇಡ್ ರಸ್ತೆಯ ಕೆಂಪು, ಹಸಿರು ನಿಯಾನ್ ದೀಪಗಳಲ್ಲಿ ಯೌವನ ಉಕ್ಕಿಸುವ ತರುಣಿಯರು, ಸಂಜೆಗತ್ತಲಿಗೆ ಅಮಲು ತರಿಸುವಂತೆ ಹಾರುವ ಮುಂಗುರುಳುಗಳು ಎಲ್ಲವನ್ನೂ ತಣ್ಣನೆಯ ಅಸೂಯೆಯಿಂದ ನೋಡುತ್ತಿದ್ದೆ.

‘ಮೂಡಣದಂತೆ ಬೆಚ್ಚಗೆ, ಆದರೆ ಗ್ರೀಷ್ಮದಂತೆ ತಣ್ಣಗಿರಬೇಕು ನನ್ನ ಕಾವ್ಯ’ ಎಂದು ಹೇಳಿದ ಏಟ್ಸ್ ಕವಿ ಈ ಸಂಜೆಯ ಹೊತ್ತಿಗೆ ನೆನಪಾಗುತ್ತಾನೆ. ಏಟ್ಸ್‌ನನ್ನು ನಾನು ಹೆಚ್ಚು ಓದಿಕೊಂಡಿಲ್ಲ. ಆದರೆ ಅವನನ್ನು ಇಷ್ಟಪಡುವವರು ಆತನ ಕುರಿತು ಬರೆದಿದ್ದನ್ನು ಓದಿದ್ದೇನೆ. ‘ಮನುಷ್ಯನ ಮನಸ್ಸು ಯಾವ ಹೆಣ್ಣನ್ನು ಕುರಿತು ಹೆಚ್ಚು ಧ್ಯಾನಿಸುತ್ತದೆ, ಆತನಿಗೆ ಒಲಿದ ಹೆಣ್ಣನ್ನೋ, ಆತನಿಗೆ ಒಲಿಯದೇ ಹೋದ ಹೆಣ್ಣನ್ನೋ?’ ಎಂದು ಕೇಳುತ್ತಾನೆ ಏಟ್ಸ್? ನನಗೆ ನಗು ಬರುತ್ತದೆ. ಏಟ್ಸ್ ಸತ್ತು ಹೋಗಿದ್ದು ಡಿಸೆಂಬರ್‌ನ ಚಳಿಗಾಲದಲ್ಲಂತೆ. ‘ಎಲ್ಲಾ ಹಿಮಚ್ಛಾದಿತ ಗಿರಿಬನಗಳೂ, ಮಂಜು ಕವಿದ ವಿಮಾನ ನಿಲ್ದಾಣಗಳೂ ತಿಳಿಯಲಿ ನನ್ನ ಪ್ರೀತಿಯ ಕವಿ ಈ ಚಳಿಯಲ್ಲಿ ನಿಶ್ಯಬ್ಧನಾಗಿದ್ದಾನೆ ಎಂದು’ ಎಂದು ಏಟ್ಸ್ ತೀರಿಕೊಂಡಾಗ ಆಡೆನ್ ಬರೆದಿದ್ದರು. ಹೀಗೆ ಎನೇನೋ ಯೋಚನೆ ಮಾಡಿಕೊಂಡು ಬಿಎಮ್‌ಟಿಸಿ ಬಸ್ಸು ಹತ್ತಿದ್ದೆ.

ಥಟ್ಟನೆ ಆದಾಗಲೇ ನಾನು ಬೆಂಗಳೂರಿಗೆ ಬಂದು ಒಂದು ತಿಂಗಳು ಕಳೆಯಿತಲ್ಲ ಎನ್ನುವ ಜ್ಞಾನೋದಯವಾಯಿತು. ಮೊನ್ನೆ ಬ್ಲಾಗಿನಲ್ಲಿ ತುಂಬಾ ದಿನಗಳಿಂದ ಏನೂ ಬರೆಯದಿದ್ದಿದಕ್ಕೆ ಚಿತ್ರಾ ಅವರು ಮತ್ತೆಲ್ಲಿ ಕೆಲಸಕ್ಕೆ ರಾಜಿನಾಮೆಕೊಟ್ಟು ಊರಿಗೆ ಹೋಗಿದ್ದೀರಾ ಎಂದು ಕೇಳಿದ್ದರು. ಬ್ಲಾಗ್ ಬರೆಯುವುದು ಹೋಗಲಿ ಮೇಡಂ, ಬೆಂಗಳೂರಿನಲ್ಲಿ ಕೆಲಸ ಮಾಡುವರ ಅರ್ಧ ಆಯಸ್ಸು ಬಿಎಂಟಿಸಿ ಬಸ್ಸುಗಳಲ್ಲೇ ಕಳೆದುಹೋಗುತ್ತಿದೆ ಅಂತ ಅನಿಸುವಾಗ ವಾಪಾಸ್ಸು ಊರಿಗೇ ಹೋಗಿಬಿಡುವ ಅನಿಸುತ್ತದೆ. ಟ್ರಾಫಿಕ್ ಸಿಗ್ನಲ್ ಬಿದ್ದಾಗ ಕಾಲಿನಲ್ಲಿ ತೆವಳುತ್ತಾ ಕೈ ಚಾಚುವ ಮಹಿಳೆಯನ್ನು ನೋಡುತ್ತಾ ನಿಲ್ಲುತ್ತೇನೆ. ‘ಎಲ್ಲಿ ನೋವಿದೆಯೋ ಅಲ್ಲಿ ಸಾಂತ್ವನವನ್ನೂ, ಎಲ್ಲಿ ದು:ಖವಿದೆಯೋ ಅಲ್ಲಿ ಸುಖವನ್ನೂ ಹಂಚೋಣ ’ ಎಂದು ಹೇಳಿದ ಮದರ್ ತೆರೇಸಾ ನೆನಪಾಗುತ್ತಾರೆ. ‘ನೀವು ಒಳ್ಳೆಯವರಾದ್ರೆ ನಿಮ್ಮನ್ನು ಎಲ್ಲರೂ ಪ್ರೀತಿಸುತ್ತಾರೆ’ ಎಂದು ನನ್ನ ಪಿಯುಸಿ ಆಟೋಗ್ರಾಫ್‌ನಲ್ಲಿ ಬರೆದು, ನಾನು ಸುಮ್ಮನೆ ಎನೋನೋ ಕನಸು ಕಾಣುವಂತೆ ಮಾಡಿದ ಹುಡುಗಿಯೂ ಯಾಕೋ ಸುಮ್ಮನೆ ಈಗ ನೆನಪಾಗುತ್ತಿದ್ದಾಳೆ.

ಚೆನೈನ ಕೋಡಂಬಕ್ಕಂನ ವಿಸ್ತರಣೆಯಂತಿರುವ ಬೆಂಗಳೂರಿನ ಈ ಮರಿಯಪ್ಪನಪಾಳ್ಯದಲ್ಲಿ ನಾವು ರೂಮು ಮಾಡಿಕೊಂಡಿದ್ದೇವೆ. ನೈಟ್‌ಶಿಪ್ಟ್ ಮುಗಿಸಿ ಬೆಳಿಗ್ಗೆ ಹನ್ನೊಂದು ಗಂಟೆಗೆ ಎಳುವ ಹವ್ಯಾಸವಿರುವ ನನಗೆ ಬಂದ ದಿನದಿಂದ ಇಲ್ಲಿನ ಹುಂಜವೊಂದು ಕಾಟ ಕೊಡುತ್ತಿದೆ. ಸಾಮಾನ್ಯ ಎಲ್ಲ ಕೋಳಿಗಳು ಬೆಳಗಿನ ಜಾವ ಐದಕ್ಕೆಲ್ಲಾ ಕೂಗಿದರೆ ಈ ಹುಂಜ ರಾತ್ರಿ ಎರಡು ಗಂಟೆಯಿಂದಲೇ ತನ್ನ ಅಲಾರಾಂ ಮೊಳಗಿಸಲು ಪ್ರಾರಂಭಿಸುತ್ತದೆ. ಇನ್ನೇನು ಮಲಗಬೇಕು ಎನ್ನುವಷ್ಟರಲ್ಲಿ ಪಕ್ಕದ ಮೆಜೆಸ್ಟಿಕ್‌ವರೆಗೂ ಕೇಳಿಸುವಂತೆ ಕೋಳಿ ಕೂಗುತ್ತದೆ. ಒಮ್ಮೆ ಕೂಗಿ ನಿಲ್ಲಿಸುವುದಿಲ್ಲ. ಕೋಳಿಯ ನಿಲಯದ ಪ್ರಸಾರ ಬೆಳಗಿನ ಜಾವ ಐದುಗಂಟೆಯವರೆಗೆ ಮುಂದುವರೆಯುತ್ತದೆ. ಈ ಓಣಿಯಿಂದಲೂ ಸುಖವಿಲ್ಲ, ಕೋಳಿಯಿಂದಲೂ ಸಮಾಧಾನವಿಲ್ಲ ಎನ್ನುವಂತಾಗಿದೆ ನಮ್ಮ ಸ್ಥಿತಿ.

‘ಎಲಾ ಮರಿಯಪ್ಪನಪಾಳ್ಯದ ಹುಂಜವೇ, ನೀನು ಮಧ್ಯರಾತ್ರಿ ಕೂಗುವುದು ನಿಲ್ಲಿಸದಿದ್ದರೆ, ನಿನ್ನ ಬಗ್ಗೆ ಬ್ಲಾಗಿನಲ್ಲಿ ಬರೆದು ನಿನ್ನ ಮಾನ ಹರಾಜು ಹಾಕುತ್ತೇನೆ ಎಂದು ಅದಕ್ಕೆ ಹೇಳಿ ಬಂದಿದ್ದೇನೆ. ಅಷ್ಟಕ್ಕೂ ಕೂಗುವುದು ನಿಲ್ಲಿಸದಿದ್ದರೆ ಇಲ್ಲೇ ಪಕ್ಕದ ಓಣಿಯಲ್ಲಿರುವ ಛಾಯಾಕನ್ನಡಿಯ ಶಿವು ಅವರನ್ನು ಕರೆತಂದು ನಿನ್ನ ಚಿತ್ರ ತೆಗೆದು ಪತ್ರಿಕೆಯಲ್ಲಿ ಹಾಕುತ್ತೇನೆ ಎಂದು ಹೆದರಿಸಿದ್ದೇನೆ. ಆದರೂ ಅದು ಕೂಗುವುದನ್ನು ನಿಲ್ಲಿಸುವಂತೆ ಕಾಣಿಸುತ್ತಿಲ್ಲ. ನಿಮಗೆ ಯಾರಿಗಾದರೂ ಈ ಕೋಳಿಯ ಕೂಗನ್ನು ನಿಲ್ಲಿಸುವ ಐಡಿಯಾ ಗೊತ್ತಿದ್ದರೆ ತಿಳಿಸಿ.

Monday, 29 December, 2008

ಕೆಲಸವಿಲ್ಲದೇ ಕಳೆದ ಒಂದು ತಿಂಗಳು

ಆರ್ಥಿಕ ಮುಗ್ಗಟ್ಟಿನಿಂದ ಜಗತ್ತಿನ ದೊಡ್ಡ ದೊಡ್ಡ ಕಂಪನಿಗಳೇ ತಮ್ಮ ಉದ್ಯೋಗಿಗಳನ್ನು ನೋಟೀಸು ಕೂಡ ಕೊಡದೆ ತೆಗೆದುಹಾಕುತ್ತಿರುವಾಗ, ಕೆಲಸದಲ್ಲಿರುವವರು ತಮ್ಮ ಕೆಲಸ ಯಾವಾಗ ಹೋಗುತ್ತದೆಯೋ ಎನ್ನುವ ಸ್ಥಿತಿಯಲ್ಲಿರುವಾಗ, ಈಗ ಹಗಲು ದೀಪ ಹಚ್ಚಿ ಹುಡುಕಿದರೂ ಒಂದೇ ಒಂದು ಕೆಲಸ ಖಾಲಿ ಇಲ್ಲದಿರುವಾಗ, ನಾನೇನು ಮಾಡಿದೆ ಗೊತ್ತೇ? ನನ್ನ ಇದ್ದ ಕೆಲಸಕ್ಕೆ ರಾಜೀನಾಮೆ ಕೊಟ್ಟು ಊರಿಗೆ ಹೋಗಿದ್ದೆ. ನಿನಗೇನು ಹುಚ್ಚು ಹಿಡಿದಿದೆಯಾ? ಅಂತ ನೀವು ಬೈಯಬೇಡಿ. ಈಗಾಗಲೇ ಸಾಕಷ್ಟು ಜನ ಇದಕ್ಕಿಂತಲೂ ಚೆನ್ನಾಗಿಯೇ ನನ್ನನ್ನು ಬೈದಿದ್ದಾರೆ. `ಈಗ ನನಗೆ ಕೆಲಸ ಇಲ್ಲ ಕಣೋ/ಕಣೇ`ಎಂದು ಹೇಳಿ ಎಲ್ಲರಿಂದಲೂ ಒಂದಿಷ್ಟು ಪ್ರೀತಿ, ಅನುಕಂಪ ಪಡೆಯಬಹುದು ಎಂದು ನಿರೀಕ್ಷಿಸಿದ್ದ ನನಗೆ ಎಲ್ಲರಿಂದಲೂ ಸರಿಯಾಗಿ ಬೈಗುಳ ಸಿಕ್ಕಿತ್ತು. ಜೊತೆಗೆ ಹೊಟ್ಟೆ ತುಂಬುವಷ್ಟು ಮಂಗಳಾರತಿ. ನಿನಗೆ ಇನ್ನೊಂದೆರಡು ವರ್ಷ ಕೆಲಸವೇ ಸಿಗುವುದಿಲ್ಲ ಎಂದು ಹೆದರಿಸಿದವರೂ ಇದ್ದಾರೆ.

ನಾನು ಮಾತ್ರ `ದಂಡಿಗೆ ಹೆದರಿಲ್ಲ, ದಾಳಿಗೆ ಹೆದರಿಲ್ಲ, ಇದ್ಯಾವ ಮಹಾ ಕೆಲಸ` ಎನ್ನುವ ರೀತಿಯಲ್ಲಿ ಊರಿನ ದಾರಿ ಹಿಡಿದಿದ್ದೆ. ಒಂದು ತಿಂಗಳು ಯಾರಿಗೂ ಹೇಳದೇ ಕೇಳದೆ ಎಲ್ಲಾದರೂ ಸುತ್ತಲು ಹೋಗಬೇಕೆಂದುಕೊಂಡಿದ್ದೆ. ಒಮ್ಮೆ ಹಿಮಾಲಯಕ್ಕೆ, ಟಿಬೆಟ್ಟಿಗೆ ಹೋಗಿ ಬರಬೇಕು ಎಂದು ಸಹೋದ್ಯೋಗಿ ಜಿತೇಂದ್ರನಿಗೂ ಹೇಳಿದ್ದೆ. ಮನೆಯಲ್ಲಿ ಯಾರಿಗೂ ನಾನು ಕೆಲಸಕ್ಕೆ ರಾಜೀನಾಮೆ ಸಲ್ಲಿಸಿರುವ ವಿಷಯ ಹೇಳಲಿಲ್ಲ. ಒಂದು ತಿಂಗಳು ರಜೆ ಹಾಕಿದ್ದೇನೆ ಎಂದಿದ್ದೆ. ಆದರೂ ತಿಂಗಳು ಮುಗಿಯುವುದರೊಳಗೆ ಹೊಸ ಕೆಲಸ ಹುಡುಕಿಕೊಳ್ಳಬೇಕಲ್ಲಪ್ಪಾ ಎನ್ನುವ ಭೀತಿ ಒಳಗೊಳಗೇ ಇಣುಕುತಿತ್ತು. ನಮ್ಮಪ್ಪನಿಗೆ ಮಾತ್ರ ಇವ ಇಷ್ಟು ದಿವಸ ಯಾವತ್ತೂ ರಜೆ ಹಾಕಿ ಊರಿಗೆ ಬಂದವನಲ್ಲ, ಏನಾದರೂ ಆಗಿರಬೇಕು ಎನ್ನುವ ಸಂಶಯ ಮೊದಲ ದಿನವೇ ಹಟ್ಟಿತ್ತು. ಕೇಳಿದಾಗೊಮ್ಮೆ ನಾನು ವಿಷಯ ಮರೆಸುತ್ತಿದ್ದೆ. ಆದರೆ ದೇಶ ಸುತ್ತಲು ಹೋಗುವ ನನ್ನ ಆಸೆ ಕೈಕೊಟ್ಟಿತ್ತು. ಮನೆಯಲ್ಲಿ ಒಂದಿಷ್ಟು ಕೆಲಸ ಇತ್ತು.

ಒಂದು ತಿಂಗಳು ನಾನು ಹುಟ್ಟಿ ಬೆಳೆದ ನಮ್ಮೂರನ್ನು ಹತ್ತಿರದಿಂದ ನೋಡಿದೆ. ನಮ್ಮೂರ ಅಡಿಕೆ ತೋಟದಲ್ಲಿ, ಹಸಿರು ತುಂಬಿದ ಗದ್ದೆಗಳಲ್ಲಿ, ಬೈಗಿನ ಬೆಳಗಿನಲ್ಲಿ, ಮುತ್ತುಗ ಅರಳಿದ ಕಾಡಿನ ದಾರಿಯಲ್ಲಿ ಕಳೆದುಹೋದ ಯಾವುದೋ ವಸ್ತುವನ್ನು ಹುಡುಕುವಂತೆ ನಾನು ಖುಷಿ ಖುಷಿಯಿಂದ ದಿನಗಳು ಕಳೆದೆ. ಒಂದು ತಿಂಗಳು ನನಗೆ ಅಪ್ಯಾಯಮಾನವಾಗಿತ್ತು. ನನ್ನ ಮನಸ್ಸಿನ ಹುಲ್ಲುಗಾವಲಿನಲ್ಲಿ ಬೆಳಕಿನ ಬೀಜಗಳು ಅರಳಿದ್ದವು. ಕಳೆದ ಏಳೆಂಟು ವರ್ಷದಿಂದ ನಾನು ಊರಲ್ಲಿರುವುದು ವರ್ಷದಲ್ಲಿ ಹದಿನೈದೋ, ಇಪ್ಪತ್ತೋ ದಿನ. ನಮ್ಮನೆಯ ಹಿತ್ತಲಿನ ಮಾವಿನ ಗಿಡದಲ್ಲಿ ಕಾಯಿ ಬಿಟ್ಟಿದೆಯಾ ಎನ್ನುವ ವಿಷಯವೇ ನನಗೆ ತಿಳಿಯುವುದಿಲ್ಲ, ಹೀಗಿರುವಲ್ಲಿ ಊರಿನ ಸಮಾಚಾರ ಹೇಗೆ ತಿಳಿಯಬೇಕು? ಆದರೆ ಈ ಒಂದು ತಿಂಗಳು, ನನಗೆ ಅಪರಿಚಿತ ಎನಿಸತೊಡಗಿದ್ದ ನನ್ನೂರು ನನಗೆ ಇನ್ನಷ್ಟು ಹತ್ತಿರವಾಯಿತು. ಜಗತ್ತಿನ ಯಾವುದೇ ಕೆಲಸ ಕೊಡುವ ತೃಪ್ತಿಗಿಂತ ಹೆಚ್ಚಿನ ಖುಷಿಯನ್ನೂ, ಸಂತೃಪ್ತಿಯನ್ನೂ ಅದು ನನಗೆ ನೀಡಿತ್ತು. ಅಸಲಿಗೆ ನಾನು ಕೆಲಸಕ್ಕೆ ರಾಜೀನಾಮೆ ಸಲ್ಲಿಸಿ ಊರಿಗೆ ಬಂದಿದ್ದೇನೆ ಎನ್ನುವುದು ನನಗೆ ಮರತೇ ಹೋದಂತಿತ್ತು.

ಕೆಲಸದ ವಿಷಯಕ್ಕೆ ಬರೋಣ. ಕಳೆದ ಒಂದು ವರ್ಷ ನಾನು ನೀವೆಲ್ಲರೂ ಓದಿರಬಹುದಾದ ಕೆಂಡಸಂಪಿಗೆಯಲ್ಲಿ ಉಪಸಂಪಾದಕನಾಗಿದ್ದೆ. ಕಳೆದ ವರ್ಷ ಹೀಗೆಯೇ ಚಳಿಯಿದ್ದ ಡಿಸೆಂಬರಿನ ಒಂದು ದಿನ ನಾನು ಮೈಸೂರಿಗೆ ಬಂದು ಈ ಕೆಲಸಕ್ಕೆ ಸೇರಿಕೊಂಡಿದ್ದೆ. ಮೈಸೂರಿನ ರಸ್ತೆಗಳನ್ನು ಸುತ್ತುತ್ತಾ ಹಾಯಾಗಿದ್ದೆ. ಇದ್ದಕ್ಕಿದಂತೆ ಒಂದು ದಿನ ನನಗೆ ಈ ಕೆಲಸ ಇನ್ನು ಸಾಕು ಅಂತ ಅನಿಸತೊಡಗಿತು. ಕಾರಣವೇನೂ ಇಲ್ಲ, ಹಾಗೆ ಸುಮ್ಮನೆ. ಇನ್ನು ಸಾಕು ಎಂಬ ಅನಿಸಿಕೆ ಗಟ್ಟಿಯಾಗತೊಡಗಿದಾಗ ಕೆಲಸಕ್ಕೆ ರಾಜೀನಾಮೆ ಸಲ್ಲಿಸಿ ಹೊರಟು ಹೋಗಿದ್ದೆ.

ಒಂದು ತಿಂಗಳು ಊರಿನಲ್ಲಿ ಕಳೆದು ಬಂದಿದ್ದೇನೆ. ಬ್ಲಾಗ್ ಕೂಡ ಅಪ್ ಡೇಟ್ ಮಾಡಲಾಗಲಿಲ್ಲ. ಮೇಲ್ ಗಳ ರಾಶಿಯೇ ತುಂಬಿದೆ. ಅಂದಹಾಗೆ ಒಂದು ಖುಷಿಯ ವಿಷಯವಿದೆ. ನಾನೀಗ ನಿರುದ್ಯೋಗಿಯಲ್ಲ, ಒಂದು ಹೊಸ ಕೆಲಸ ಸಿಕ್ಕಿದೆ. ಬೆಂಗಳೂರಿನಲ್ಲಿ. ಉಪಸಂಪಾದಕ. ಹೊಸ ವರ್ಷದ ಮೊದಲ ದಿನ ಹೊಸ ಕೆಲಸಕ್ಕೆ ಸೇರಿಕೊಳ್ಳಲಿದ್ದೇನೆ. ನಿಮ್ಮ ಪ್ರೀತಿ, ವಿಶ್ವಾಸ, ಜೊತೆಗೊಂದಿಷ್ಟು ಅನುಕಂಪವೂ ಇರಲಿ ಎನ್ನುವ ಆಸೆ.

Friday, 28 November, 2008

ಮಂಜು ಸುರಿಯುವ ಈ ಮುಂಜಾವಿನಲ್ಲಿ...

ಈವತ್ತು ಬೆಳಿಗ್ಗೆ ಮೈಸೂರಿನಲ್ಲಿ ಸೋನೆಮಳೆಯಂತೆ ಮಂಜು ಸುರಿಯುತ್ತಿತ್ತು. ಸಹಿಸಲಸಾಧ್ಯ ಚಳಿ ಬೇರೆ. ಈಗಿನ್ನೂ ಏಳು ಗಂಟೆಯಾಗಿರಬಹುದು ಎಂದು ಎದ್ದು ನೋಡಿದರೆ ಹನ್ನೊಂದಾಗಿತ್ತು. ನಾನು ಎಲ್ಲಿದ್ದೇನೆ ಎಂದು ನನಗೇ ಗುರುತು ಸಿಗದ ಹಾಗೆ ಮಂಜು ಆವರಿಸಿಕೊಂಡಿತ್ತು. ನನ್ನ ರೂಮಿನ ಹಿಂದಿನ ಎಲೆಕ್ಟ್ರಿಕ್ ತಂತಿಯ ಮೇಲೆ ಕುಳಿತು ದಿನಾಲೂ ರೊಮಾನ್ಸ್ ಮಾಡುತ್ತಿದ್ದ ಗುಬ್ಬಚ್ಚಿಗಳು ಈವತ್ತು ಯಾಕೋ ಮಂಜಿನಲ್ಲಿ ತೊಯ್ದು ಹೋಗಿ ಈ ಚಳಿಯಲ್ಲಿ ನಡುಗುತ್ತಾ ಒಂದಕ್ಕೊಂದು ಅಂಟಿಕೊಂಡು ಕುಳಿತಿದ್ದವು. ನನಗೆ ಏಕೋ ಪಾಪ ಅನಿಸತೊಡಿಗಿತು. ನಾವು ಚಿಕ್ಕವರಿದ್ದಾಗ ಮಳೆಗಾಲದಲ್ಲಿ ಈ ರೀತಿ ತೋಯಿಸಿಕೊಂಡು ಹಾರಲಾಗದೆ ಶಾಲೆಯ ಹಂಚಿನ ಮಾಡಿನ ಕೆಳಗೆ ಕೂರುತ್ತಿದ್ದ ಗುಬ್ಬಚ್ಚಿಗಳನ್ನು ಹಿಡಿದು, ಅದನ್ನು ರಟ್ಟಿನ ಬಾಕ್ಸ್‌ನಲ್ಲಿ ಬಂಧಿಸಿಡುತ್ತಿದ್ದೆವು. ನಂತರ ಅದರ ಕಾಲಿಗೊಂದು ದಾರ ಕಟ್ಟಿ, ಆ ದಾರದ ತುದಿಯಲ್ಲಿ ಪೇಪರ್‌ ಒಂದನ್ನು ಕಟ್ಟಿ, ಅದರಲ್ಲಿ ನಮ್ಮ ನಮ್ಮ ತರಗತಿಯ ವಿದ್ಯಾರ್ಥಿಗಳೆಲ್ಲರ ಹೆಸರು ಬರೆದು ಹಾರಿ ಬಿಡುತ್ತಿದ್ದೆವು. ಆ ಗುಬ್ಬಚ್ಚಿ ಹಾರಿ ಅಮೆರಿಕಕ್ಕೆ ಹೋಗುತ್ತದೆಂದೂ, ಅಲ್ಲಿ ನಮ್ಮೆಲ್ಲರ ಹೆಸರನ್ನು ನೋಡಿ, ಇದು ಭಾರತದಿಂದ ಹಾರಿ ಬಂದ ಗುಬ್ಬಚ್ಚಿಯೆಂದೂ ಪತ್ತೆ ಹಚ್ಚುತ್ತಾರೆಂದೂ ಮಾತನಾಡಿಕೊಂಡು ಸಂಭ್ರಮಿಸುತ್ತಿದ್ದೆವು.

ಈವತ್ತು ನೋಡಿದರೆ ಮಳೆಯಲ್ಲಿ ತೋಯಿಸಿಕೊಂಡು ಹಾರಲಾಗದೆ ಕುಳಿತ ಗುಬ್ಬಚ್ಚಿಗಳ ಮೇಲೆ ಯಾವನೋ ಕಿಲಾಡಿ ಹುಡುಗನೊಬ್ಬ ಕ್ಯಾಟರ್‌ ಬಿಲ್ಲಿನಿಂದ ಕಲ್ಲು ಬೀಸುತ್ತಿದ್ದ. ನನಗೆ ರೋಸಿ ಹೋಗಿ ಆತನನ್ನು ಕರೆದು ಸರಿಯಾಗಿ ಬೈದು ಕಳುಹಿಸಿದೆ. ಯಾಕೋ ಮನಸ್ಸೆಲ್ಲಾ ಮುದುಡಿ ಹೋದಂತೆನಿಸಿ ಏನು ಮಾಡಲಾಗದೆ ಕೈ ಕೈ ತಿಕ್ಕಿಕೊಳ್ಳುತ್ತಾ ಅದರ ಬಿಸುಪಿನಲ್ಲಿ ಬೆಚ್ಚಗಾಗಲು ಯತ್ನಿಸುತ್ತಿದ್ದೆ. ನಮ್ಮ ಪಕ್ಕದ ಮನೆಯ ಆಂಟಿ - ಅಂಕಲ್ ಇಂತಹ ಚಳಿಯಲ್ಲಿಯೂ ಮನಗೇ ಬೆಂಕಿ ಬಿದ್ದವರಂತೆ ಭಯಂಕರವಾಗಿ ಜಗಳವಾಡುತ್ತಿದ್ದರು. ಮಾಜಿ ಪ್ರಧಾನಿ ವಿ.ಪಿ ಸಿಂಗ್ ತೀರಿಹೋಗಿದ್ದರಿಂದ, ಅವರ ಮಕ್ಕಳೂ ಕೂಡ ರಜೆಯಿಂದ ಮನೆಯಲ್ಲೇ ಇದ್ದು ಅಪ್ಪ ಅಮ್ಮನ ಜಗಳವನ್ನು ನೋಡುತ್ತಿದ್ದರು. ಮಕ್ಕಳ ಮುಂದೆ ಜಗಳವಾಡಬಾರದು ಎಂದು ಈ ತಂದೆತಾಯಿಗಳಿಗೆ ಹೇಳಿಕೊಡುವರು ಯಾರು ಎನ್ನುತ್ತಾ ಪೇಪರ್ ಓದೋಣವೆಂದರೆ ಅದು ಮಂಜಿನಲ್ಲಿ ಬಿದ್ದು ಕರಗಿ ಹೋಗಿತ್ತು. `ವೀರಮರಣ ಹೊಂದಿದ ಅಧಿಕಾರಿಗಳಿಗೆ ನಮ್ಮ ನಮನ`, `ಮಾಲೇಂಗಾವ್ ಸ್ಫೋಟದ ದೇಶಭಕ್ತರನ್ನು ರಕ್ಷಿಸಿ`, `ಶಿವರಾಜ್ ಪಾಟೀಲರನ್ನು ದೇಶದಿಂದ ಹೊರಹಾಕಿ` ಇಂತಹ ತರಹೇವಾರಿ ಮಸೇಜುಗಳಿಂದ ನನ್ನ ಇನ್‌ಬಾಕ್ಸ್ ತುಂಬಿ ಹೋಗಿ ಎಲ್ಲವನ್ನೂ ಒಂದೆಡೆಯಿಂದ ಡಿಲೀಟ್ ಮಾಡುತ್ತಾ ಕುಳಿತುಕೊಂಡೆ. ಇದ್ಯಾಕೋ ರೇಜಿಗೆ ಹುಟ್ಟಿಸಿದಂತೆನಿಸಿ ಸುಮ್ಮನೆ ಹೊರಬಂದು ತಿರುಗಾಡೋಣವೆಂದು ಹೊರಟೆ.

ನಾನಿರುವ ಹಿನ್‌ಕಲ್ ತುಂಬಾ ವಿಶೇಷತೆಗಳಿಂದ ಕೂಡಿದ ಊರು. ಇಲ್ಲೊಬ್ಬ ದಿನಾಲೂ ಪಲ್ಸರ್ ಗಾಡಿಯಲ್ಲಿ ಕುಳಿತು ಎಮ್ಮೆ ಮೇಯಿಸಿಕೊಂಡು ಬರುತ್ತಾನೆ. ಈವತ್ತು ಯಾಕೋ ಅವನು ಕಾಣಿಸದೆ ಹೋಗಿ, ಅವನ ಎಮ್ಮೆಗಳೆಲ್ಲಾ ಎಲ್ಲಿ ಮೇಯಲು ಹೋಗಿರಬೇಕೆಂದು ಪೆದ್ದು ಪೆದ್ದಾಗಿ ಯೋಚಿಸತೊಡಗಿದೆ. ದೂರದಲ್ಲಿ ನೋಡಿದರೆ ಕಟ್ಟಾ ಸುಬ್ರಮಣ್ಯ ನಾಯ್ಡುವಿನಂತೆ ಟೋಪಿ ಹಾಕಿಕೊಂಡು ಒಬ್ಬರು ನಡೆದುಕೊಂಡು ಹೋಗುತ್ತಿದ್ದರು. ಹತ್ತಿರ ಹೋಗಿ ನಮಸ್ಕಾರ ತಾತಾ ಎಲ್ಲಿಗೆ ಹೊರಟಿದ್ದೀರಾ ಎಂದರೆ ಅವರು ಏನೂ ಕೇಳಿಸಿಕೊಳ್ಳದಂತೆ ನಡೆಯುತ್ತಿದ್ದರು. ನೋಡಿದರೆ ಅವರು ಕಿವಿಗೆ ಶ್ರವಣ ಸಾಧನ ಹಾಕಿಕೊಂಡಿದ್ದರು:) ಇಲ್ಲಿರುವ ಒಂದು ಹೊಟೇಲ್‌ನಲ್ಲಿ ಎಕಾಮಿಕ್ಸ್ ಟೈಮ್ಸ್ ಪೇಪರನ್ನು ತರಿಸುತ್ತಾರೆ. ಸಾಮಾನ್ಯವಾಗಿ ಇಂತಹ ಹೊಟೇಲ್‌ಗಳಲ್ಲಿ ಸ್ಥಳೀಯ ನ್ಯೂಸ್ ಪೇಪರ್‌ಗಳನ್ನು ತರಿಸುವುದೂ, ಅದು ಒಂಭತ್ತು ಗಂಟೆಯಾಗುತ್ತಿದ್ದಂತೆ ಹರಿದು ಹಂಚಿ ಹೋಗುವುದೂ ಸಾಮಾನ್ಯ. ನೋಡಿದರೆ ಈ ಹೊಟೇಲ್ ಮಾಲಿಕ ಎಕನಾಮಿಕ್ಸ್ ಟೈಮ್ಸ್ ಪೇಪರನ್ನು ಜತನದಿಂದ ಎತ್ತಿಟ್ಟಿದ್ದ. ಕುತೂಹಲಕ್ಕೆ ವಿಚಾರಿಸಿದರೆ ಆತನದೂ ಒಂದು ಷೇರಿದ್ದು, ಮಂಗಳೂರಿನಲ್ಲಿ ಎಂಬಿಎ ಓದುತ್ತಿರುವ ಮಗನ ಆಸೆಯಂತೆ ಷೇರು ಪೇಟೆಯ ತಲ್ಲಣಗಳನ್ನು ತಿಳಿಯಲು ಆತ ಎಕನಾಮಿಕ್ಸ್ ಟೈಮ್ಸ್ ತರಿಸುತ್ತಿದ್ದಾನೆಂದೂ ತಿಳಿಯಿತು. ಸದ್ಯ ಆತನ ಷೇರುಗಳೆಲ್ಲಾ ಮುಳುಗಿ ಹೋಗಿರುವುದರಿಂದ ಆತನ ಹೊಟೇಲಿನ ತಿಂಡಿಯ ವಿಷಯದಲ್ಲೂ ಅದರ ಮುಗ್ಗಟ್ಟು ಕಾಣಿಸಿಕೊಂಡಿದೆ. ರೈಸ್‌ಬಾತ್‌‌ನಲ್ಲಿ ಟಮೋಟೊ, ಬೀನ್ಸ್, ಬಟಾಣಿ ಕಾಳುಗಳು ಮರೆಯಾಗಿರುವುದರ ಹಿಂದೆ ಈ ಆರ್ಥಿಕ ಮುಗ್ಗಟ್ಟು ಮತ್ತು ಏಕನಾಮಿಕ್ಸ್ ಟೈಮ್ಸ್‌ನ ಪ್ರಭಾವ ಇರುವುದನ್ನು ನಾನು ಪತ್ತೆಹಚ್ಚಿದೆ.

ಹನ್ನೆರಡು ಗಂಟೆಯಾದರೂ ಬಿಸಿಲು ಮೂಡದಿದ್ದರಿಂದ ಸುರಿಯುತ್ತಿರುವ ಮಂಜನ್ನು ಶಫಿಸುತ್ತಾ ನಾಯಿಗಳೆರಡು ನನ್ನ ಮನೆಯ ಮುಂದಿನ ಅಂಗಳದಲ್ಲಿದ್ದ ಮರಳಿನಲ್ಲಿ ಗುಂಡಿ ತೋಡಿ ಮಲಗಿಕೊಂಡು ಸೂರ್ಯನ ಆಗಮನಕ್ಕಾಗಿ ಕಾಯುತ್ತಿದ್ದವು. ಹಳ್ಳಿಯಿಂದ ಬಂದ ಅಜ್ಜನನೊಬ್ಬ ತಲೆಯ ಮೇಲೆ ಕೊತ್ತಂಬರಿ, ಬಸಳೆ, ಪಾಲಕ್, ಸಬ್ಬಸಿಗೆ, ಮೆಂತ್ಯ, ಕಿಲ್‌ಕಿರೆ ಸೊಪ್ಪನ್ನು ಹೊತ್ತುಕೊಂಡು ಇಲ್ಲಿನ ಅಪಾರ್ಟ್‌ಮೆಂಟ್‌ಗಳ ಮುಂದೆ ಮಾರುತ್ತಿದ್ದ. ಆತ ಕಾಲಿಗೆ ಚಪ್ಪಲಿಯನ್ನೂ ಹಾಕಿರಲಿಲ್ಲ. ದುಡಿಯುವವರಿಗೆ ಮಳೆಯಾದರೆನು, ಚಳಿಯಾದರೇನು ಎಂದುಕೊಂಡೆ. ಈ ಅಜ್ಜನಿಂದ ಸ್ಫೂರ್ತಿ ಪಡೆದವನಂತೆ ಹುರುಪಿನಿಂದ ಎದ್ದು ರೆಡಿಯಾಗಿ ಆಫೀಸಿಗೆ ಬಂದರೆ, ಟಿವಿ ಒಂಭತ್ತರಲ್ಲಿ ಮುಂಬಯಿ ಭಯೋತ್ಪಾದನೆ ಕಾರ್ಯಾಚರಣೆ ಬರುತ್ತಿತ್ತು. ರಾಧಿಕಾ ರಾಣಿಯರು ಫುಲ್ ಖುಷಿಯೊಳಗೆ ವಾರ್ತೆ ಓದುತ್ತಿದ್ದರು. ` ಎಕೆ 47 ನಿಂದ ಹಾರಿದ ಗುಂಡುಗಳು ಎಷ್ಟು ವೇಗವಾಗಿತ್ತೆಂದರೆ ಅದು ನಮ್ಮ ದೆಹಲಿ ಪ್ರತಿನಿಧಿಯ ಕಣ್ಣಿಗೂ ಬೀಳಲಿಲ್ಲ` ಎನ್ನುವ ಅರ್ಥ ಬರುವಂತೆ ಏನೋನೋ ಮನೋರಂಜನೆ ನೀಡುತ್ತಿದ್ದರು. ಈ ಲೈವ್ ನ್ಯೂಸ್ ಕೇಳಿ ಕೇಳಿ ನನ್ನ ಕಿವಿಗಳು ಪಾವನವಾಗುವ ಅಪಾಯ ಇದ್ದಿದ್ದರಿಂದ, ಟಿವಿ ಮ್ಯೂಟ್ ಮಾಡಿ ಚಿತ್ರ ನೋಡುತ್ತಾ ಕುಳಿತುಕೊಂಡೆ. ನಿನ್ನೆ ಇದೇ ಟಿವಿಯ ವರದಿಗಾರರೊಬ್ಬರು ಬೆಂಗಳೂರಿನಲ್ಲಿ ನಿಂತುಕೊಂಡು ದೆಹಲಿಯ ತಾಜ್ ಹೊಟೇಲಿನೊಳಗೆ ಏನಾಗುತ್ತಿದೆ ಎನ್ನುವುದನ್ನು ಲೈವ್ ಕೊಡುತ್ತಿದ್ದರು. ಅಬ್ಬಾ! ಹೀಗೆಲ್ಲಾ ಲೈವ್ ಕೊಡಲು ಈ ಉತ್ತಮ ಸಮಾಜದವರಿಂದ ಮಾತ್ರ ಸಾಧ್ಯ ಎಂದುಕೊಂಡು ಟಿವಿ ಆಫ್‌ ಮಾಡಿ, ನನ್ನ ಕೆಲಸಕ್ಕೆ ಲಾಗಿನ್ ಆದೆ.

ಹೊರಗೆ ಮಂಜು ಸುರಿಯುತ್ತಲೇ ಇದೆ.

Sunday, 16 November, 2008

ಅನಾಮಿಕ ಹುಡುಗಿಯೊಬ್ಬಳಿಗೆ...

`ನನಗೆ ತುಂಬಾ ಬೇಜಾರಾಗಿದೆ, ಸಮಾಧಾನ ಮಾಡಿ ಪ್ಲೀಸ್`
ಆ ಕಡೆಯಿಂದ ಪೋನಿನಲ್ಲಿ ಬರುತ್ತಿತ್ತು ಹೆಣ್ಣು ಧ್ವನಿ`

ನಾನು ಆಗ ತಾನೇ ಆಫೀಸು ಕೆಲಸ ಮುಗಿಸಿಕೊಂಡು, ದಾರಿಯಲ್ಲಿ ಯಾವುದೋ ಹೊಟೇಲಿಗೆ ನುಗ್ಗಿ ಊಟ ಮಾಡಿ, ಉಸ್ಸಪ್ಪಾ ಅಂತ ನನ್ನ ರೂಮಿನತ್ತ ಹೆಜ್ಜೆ ಹಾಕುತ್ತಿದ್ದೆ. ರಾತ್ರಿ ಹತ್ತು ಗಂಟೆ ಆಗಿತ್ತು. ಆವತ್ತು ನನಗೂ ಯಾಕೋ ತುಂಬಾ ಬೇಜಾರಾಗಿತ್ತು. ಇಲ್ಲಿ ನನ್ನ ಬಳಿಯೂ ಯಾರಾದರೂ ಇದ್ದಿದ್ದರೆ ನನ್ನ ದುಃಖವನ್ನೆಲ್ಲಾ ಅವರ ಬಳಿ ಹೇಳಿಕೊಂಡು ಒಂದಿಷ್ಟು ಅನುಕಂಪವನ್ನೂ, ಪ್ರೀತಿಯನ್ನೂ ಪಡೆದುಕೊಳ್ಳಬಹುದಿತ್ತಲ್ಲಾ ಅನಿಸಿ, ಸುಮ್ಮನೆ ಮೊಬೈಲು ಒತ್ತುತ್ತಾ ನಡೆಯುತ್ತಿದ್ದೆ. ರೂಮು ತಲುಪಿದರೂ ರೂಮಿನೊಳಕ್ಕೆ ಹೋಗಲು ಇಷ್ಟವಾಗದೆ ಟೇರಸ್ ಮೇಲೆ ಆಕಾಶ ನೋಡುತ್ತಾ ಕುಳಿತು ಬಿಟ್ಟಿದ್ದೆ. ಹೀಗೆ ಬೇಜಾರಾದಾಗ ಯಾರಾದರೂ ಫೋನ್ ಮಾಡಿದರೆ, ನಾನೀಗ ಭಾವಸಮಾಧಿ ಸ್ಥಿತಿಯಲ್ಲಿದ್ದೇನೆ, ಸ್ವಲ್ಪ ಹೊತ್ತು ಬಿಟ್ಟು ಫೋನ್ ಮಾಡಿ ಎಂದು ತಮಾಷೆ ಮಾಡುತ್ತಿರುತ್ತೇನೆ.

ಹೀಗೆ ಕೂತಿರುವಾಗ ಬಂದಿತ್ತು ಈ ಫೋನ್.

`ನಾನು ತುಂಬಾ ಕೆಟ್ಟವಳು, ನನಗೆ ಯಾರೂ ಫ್ರೆಂಡ್ಸ್ ಇಲ್ಲ.
`ದೇವರಿಗೆ ಕೂಡ ನನ್ನನ್ನು ಕಂಡರೆ ಇಷ್ಟ ಇಲ್ಲ
`ನನ್ನ ಹಣೆಬರವೇ ಸರಿ ಇಲ್ಲ, ನಾನೂ ಸರಿ ಇಲ್ಲ`
ಫೋನ್ ಮಾಡಿದ ಹುಡುಗಿ ಇನ್ನೇನು ಅತ್ತೇ ಬಿಡುವಳು ಎನ್ನುವ ಹಾಗಿತ್ತು ಧ್ವನಿ. ನನಗೇಕೋ ಇದು ದಾರಿ ತಪ್ಪಿ ಬಂದ ಕೇಸ್ ಅಂತ ಅನಿಸತೊಡಗಿತು. ನೋಡಮ್ಮ, ನಾನು ಜೋಮನ್, ನೀವು ಯಾರಂತ ಗೊತ್ತಾಗಲಿಲ್ಲ, ಬೇರೆ ಯಾರಿಗೋ ಫೋನ್ ಮಾಡಲು ಹೋಗಿ ನನಗೆ ಮಾಡಿರುವ ಹಾಗಿದೆ, ದಯವಿಟ್ಟು ನಂಬರು ಪರೀಕ್ಷಿಸಿಕೊಳ್ಳಿ ಅಂದೆ.

`ಇಲ್ಲ, ನಾನು ನಿಮಗೇ ಫೋನ್ ಮಾಡಿದ್ದು, ನೀವು ನನ್ನ ಜೊತೆ ಮಾತನಾಡಬೇಕು, ನನಗೆ ತುಂಬಾ ಬೇಜಾರಾಗಿದೆ` ಎಂದಳು. `ಅಯ್ಯೋ, ಇದೊಳ್ಳೆ ಕಥೆ ಆಯಿತಲ್ಲಾ, ನಾನು ಬೇಜಾರನ್ನು ತೆಗೆದುಕೊಂಡು ಖುಷಿ ಕೊಡುವ ಯಾವುದೇ ಕನ್ಸಲ್ಟೆನ್ಸಿ ಕಂಪನಿ ನಡೆಸುತ್ತಿಲ್ಲ, ಸುಮ್ಮನೆ ಹೋಗಿ ಮಾರಾಯ್ರೆ, ಇಲ್ಲಿ ನನ್ನ ದುಃಖವನ್ನು ಯಾರ ಬಳಿ ಹೇಳಲಿ ಅಂತ ನಾನು ಕೂತಿದ್ದೇನೆ` ಎಂದೆ. ನನ್ನ ಸ್ವಭಾವವೇ ಹೀಗೆ.

ಹುಡುಗಿ ಅಳಲು ಶುರು ಮಾಡಿದಳು. `ನಾನು ನಿಮ್ಮನ್ನೇ ನಂಬಿಕೊಂಡು ಫೋನ್ ಮಾಡಿದ್ದೇನೆ, ನೀವು ಈ ಥರ ಎಲ್ಲ ಮಾತನಾಡಿ ನನ್ನನ್ನು ಇನ್ನಷ್ಟು ಬೇಜಾರು ಮಾಡಬೇಡಿ, ನನಗೆ ಸಮಾಧಾನ ಮಾಡಿ, ಬದುಕುವ ಆಸೆ ತೋರಿಸಿ, ಇಲ್ಲದಿದ್ದರೆ ನಾನು ಏನು ಮಾಡಿಕೊಳ್ಳುತ್ತೇನೋ ನನಗೇ ಗೊತ್ತಿಲ್ಲ`.

ಈ ಸಲ ನಾನು ಏನಾದರೂ ಮಾಡಬೇಕಿತ್ತು. ನಿಜವಾಗಿಯೂ ಆ ಹುಡುಗಿ ತುಂಬಾ ಬೇಜಾರಿನಲ್ಲಿದ್ದಳು. ನನಗೆ ತಣ್ಣಗೆ ಹೆದರಿಕೆ ಪ್ರಾರಂಭವಾಯಿತು. ಏನು ಮಾಡುವುದು? `ಸರಿ, ನಿಮ್ಮ ಹೆಸರು ಹೇಳದಿದ್ದರೂ ಪರವಾಗಿಲ್ಲ. ಈಗ ನೋಡಿ, ನಿಮ್ಮಂತೆ, ನನಗೂ ತುಂಬಾ ಬೇಜಾರಾಗಿದೆ, ಒಂದರ್ಥದಲ್ಲಿ ನಾವಿಬ್ಬರೂ ಸಮಾನ ದುಃಖಿಗಳು, ನಾನು ನನ್ನ ದುಃಖವನ್ನು ನಿಮಗೆ ಕೊಡುತ್ತೇನೆ, ನೀವು ನಿಮ್ಮ ದುಃಖವನ್ನು ನನಗೆ ಕೊಡಿ, ಇಬ್ಬರೂ ಷೇರ್ ಮಾಡಿಕೊಳ್ಳೋಣ. ಮುಂದೆ ನಿಮಗೆ ತುಂಬಾ ಖುಷಿ ಸಿಕ್ಕಿದಾಗ ಅದರಲ್ಲಿ ಸ್ವಲ್ಪ ನನಗೆ ಕೊಟ್ಟು, ನಿಮ್ಮ ದುಃಖವನ್ನು ಇಲ್ಲಿಂದ ಬಿಡಿಸಿಕೊಂಡು ಹೋಗಬಹುದು` ಎಂದೆ.

`ಜೋಮನ್ ಪ್ಲೀಸ್, ನನ್ನನ್ನು ಅರ್ಥ ಮಾಡಿಕೊಳ್ಳಿ, ನಾನು ಒಬ್ಬೊಂಟಿ ಎನಿಸಿಬಿಟ್ಟಿದೆ, ನನಗೆ ಯಾರೂ ಫ್ರೆಂಡ್ಸ್ ಇಲ್ಲ, ಇರುವವರೆಲ್ಲಾ ನನ್ನನ್ನು ತುಂಬಾ ಭಾವುಕಳು ಅಂತ ದೂರ ಮಾಡಿದ್ದಾರೆ. ನಾನು ಬದುಕಿ ಏನೂ ಪ್ರಯೋಜನವಿಲ್ಲ ಅಂತ ಅನಿಸಿಬಿಟ್ಟಿದೆ, ನನಗೆ ಮಾತ್ರ ಯಾಕೆ ಇಷ್ಟೊಂದು ಬೇಜಾರಾಗುತ್ತದೆ, ತುಂಬಾ ಬೇಜಾರಾದಾಗ ಏನು ಮಾಡಬೇಕು? ಎಂದು ಮುದ್ದಾಗಿ ಕೇಳಿದಳು. `ನೀವು ಯಾರನ್ನೂ ಪ್ರೀತಿಸಿಲ್ಲವಾ? ನಿಮ್ಮ ಎದುರು ನಿಂತು, ಹುಡುಗಿ ನಿನ್ನ ದುಃಖವನ್ನೆಲ್ಲಾ ನನಗೆ ಕೊಟ್ಟು ಬಿಡು, ನಾನು ನಿನ್ನ ಹೃದಯವನ್ನು ಖುಷಿಯಿಂದ ತುಂಬುತ್ತೇನೆ` ಎನ್ನುವ ಗೆಳೆಯ ಯಾರೂ ಇಲ್ಲವಾ? ಅಂತ ಬಾಯಿಗೆ ಬಂದಿದನ್ನು ನೇರವಾಗಿ ಕೇಳಿಯೇ ಬಿಟ್ಟೆ.

`ನನಗೆ ಅಂತಹ ಯಾರೂ ಒಳ್ಳೆ ಫ್ರೆಂಡ್ಸ್ ಇಲ್ಲ, ಹುಡುಗರೆಲ್ಲಾ ತುಂಬಾ ಕೆಟ್ಟವರು,` ಎಂದಳು. `ಹುಡುಗರ ಬಗ್ಗೆ ಎಲ್ಲಾ ಈ ರೀತಿ ಪೂರ್ವಗ್ರಹ ಪೀಡಿತರಾಗಿ ಮಾತನಾಡಬಾರದು, ನಿಮ್ಮ ನಂಬಿಕೆಯನ್ನು ಬದಲಿಸಿಕೊಳ್ಳಬೇಕು ಎಂದೆ`` ಛೇ.. ಹಾಗಲ್ಲ, ನೀವು ಒಳ್ಳೆಯವರ ಥರ ಕಾಣುತ್ತೀರಿ, ತಪ್ಪು ತಿಳಿಯದಿದ್ದರೆ ನೀವೇಕೆ ನನ್ನ ಫ್ರೆಂಡ್ ಆಗಬಾರದು? ಎಂದಳು.

`ಅಯ್ಯೋ! ಹುಚ್ಚು ಹುಡುಗಿ, ನನ್ನ ಕಥೆ ನಿಮಗಿನ್ನೂ ಗೊತ್ತಿಲ್ಲ, ನನ್ನನ್ನೇ ನನಗೆ ಅರ್ಥ ಮಾಡಿಕೊಳ್ಳಲು ಇದುವರೆಗೆ ಸಾಧ್ಯವಾಗಿಲ್ಲ, ಒಮ್ಮೆ ಕಾಶಿಗೋ, ಹಿಮಾಲಯಕ್ಕೂ, ಜೆರುಸಲೇಂಗೋ, ಮೆಕ್ಕಾಗೋ ಕೊನೆಗೆ ಇಲ್ಲೇ ಹತ್ತಿರವಿರುವ ಯಲ್ಲಮ್ಮನ ಗುಡ್ಡಕ್ಕಾದರೂ ಹೋಗಿ ಬರಬೇಕೆಂದಿದ್ದೇನೆ, ಜೊತೆಗೆ ಇತ್ತೀಚೆಗೆ ನಾನು ಏಳುವ ಮತ್ತು ಮಲಗುವ ಗಳಿಗೆ ಕೂಡ ಸರಿ ಇಲ್ಲ. ಇಂತಹ ನಾನು ನಿನ್ನ ಗೆಳೆಯನಾದರೆ ಅಷ್ಟೇ, ಸುಮ್ಮನೆ ಏನೇನೋ ಹುಚ್ಚರ ಥರ ವಿಚಾರ ಮಾಡಬೇಡ`, ಅಂತ ಹೇಳಿ ಫೋನ್ ಕಟ್ ಮಾಡಲು ಹೋದವನು, ಯಾಕೋ ತಡೆದು ಹೇಳಿದೆ...

`ನೋಡು, ಮನುಷ್ಯ ಮೂಲಭೂತವಾಗಿ ತುಂಬಾ ಸ್ವಾರ್ಥಿ, ಪ್ರತಿಯೊಬ್ಬರೂ ಇನ್ನೊಬ್ಬರ ಮಾತು, ಸ್ವರ್ಶ, ಮತ್ತು ಕಾಳಜಿಗಾಗಿ ಹಂಬಲಿಸುತ್ತಲೇ ಇರುತ್ತಾರೆ. ಆದರೆ ನಮ್ಮ ಖಾಸಗಿ ಖುಷಿಯನ್ನೂ, ಪ್ರೀತಿ ವಿಶ್ವಾಸದ ಗೂಡುಗಳನ್ನೂ ನಾವೇ ಜತನದಿಂದ ಕಟ್ಟಿಕೊಳ್ಳಬೇಕು, ನಮ್ಮ ಸುಖವನ್ನು ನಮ್ಮ ಅಂತರಾಳದಲ್ಲಿ ಕಾಣುವ ಕಲೆಯನ್ನು ಬೆಳೆಸಿಕೊಳ್ಳಬೇಕು, ಎಷ್ಟೇ ಬೇಜಾರಿದ್ದರೂ, ಒಂಟಿತನವಿದ್ದರೂ ಈ ಲೋಕದಲ್ಲಿ ಖುಷಿ ಪಡಲು ಸಾಕಷ್ಟು ವಿಷಯಗಳಿವೆ. ಅದನ್ನು ನಾವು ಹುಡುಕಿಕೊಳ್ಳಬೇಕು`
ಹುಡುಗಿ ಕೇಳಿಸಿಕೊಳ್ಳುತ್ತಿದ್ದಳು. `ನೀವು ತುಂಬಾ ಒಳ್ಳೆಯವರ ಥರ ಕಾಣುತ್ತೀರಿ, ನನಗೆ ಬೇಜಾರು ಕಡಿಮೆಯಾಗುತ್ತಿದೆ, ನನ್ನೊಂದಿಗೆ ಇನ್ನಷ್ಟು ಮಾತನಾಡಿ` ಎಂದಳು. `ನೀವು ರೂಮಿನಲ್ಲಿದ್ದರೆ ಹೊರಗೆ ಬನ್ನಿ, ಈ ಆಕಾಶವನ್ನೊಮ್ಮೆ ನೋಡಿ, ಎಷ್ಟೊಂದು ನಕ್ಷತ್ರಗಳಿವೆ, ದೂರದಲ್ಲಿ ಮಿಂಚು ಹುಳುಗಳಂತೆ ಚಿಮ್ಮುತ್ತಾ ಹೋಗುವ ಜೆಟ್ ವಿಮಾನವಿದೆ, ಬೀಸುವ ತಂಗಾಳಿಯಿದೆ, ಈ ಖುಷಿಯನ್ನೆಲ್ಲಾ ನೀವು ಒಂದು ನಯಾಪೈಸೆ ಕೂಡ ಖರ್ಚು ಮಾಡದೆ ಪಡೆಯಬಹುದು ಎಂದೆ.

ಹುಡುಗಿ ಖುಷಿಯಿಂದ ನಕ್ಕಳು. ಲಂಕೇಶರು ಟೀಕೆ ಟಿಪ್ಪಣಿಯಲ್ಲಿ ಬರೆದ, ನಾನು ಓದಿ ಎಂದೋ ಮರೆತಿದ್ದ ಸಾಲೊಂದು ನೆನಪಾಯಿತು.

`ಈ ಬದುಕಿನಲ್ಲಿ ನೀವು ತುಂಬಾ ಪುಣ್ಯವಂತೆಯಾಗಿದ್ದರೆ ನಿಮಗೊಂದು ಅಪರೂದ ವಸ್ತು ಸಿಗುತ್ತದೆ. ಅದು ನಿಮ್ಮ ಇಡೀ ವ್ಯಕ್ತಿತ್ವವನ್ನು ತೊಡಗಿಸಿಕೊಂಡು ಮಾಡಬಹುದಾದ ಒಂದು ಸುಂದರ ಕೆಲಸ. ಆ ಕೆಲಸ ನಿಮಗೆ ಕೊಡುವ ಖುಷಿಯ ಮುಂದೆ ಇನ್ಯಾವುದೂ ಇಲ್ಲ. ಆ ಖುಷಿಗೆ ಪ್ರತಿಯಾಗಿ ನಿಮ್ಮೊಳಗೆ ಇಡಿ ಬದುಕಿನ ಬಗ್ಗೆ ಕೃತಜ್ಞತೆ ಮೂಡುತ್ತದೆ. ಅದು ಈ ಬದುಕಿನ ಪುಟ್ಟ ಪುಟ್ಟ ಸಂತೋಷಗಳನ್ನೂ ನಿಮಗೆ ಅನುಭವಿಸಲು ಸಾಧ್ಯವಾಗುವಂತೆ ಮಾಡುತ್ತದೆ. ಬದುಕಿನ ಬಗ್ಗೆ ಹೆಮ್ಮೆ, ಪ್ರೀತಿ ಮೂಡುತ್ತದೆ. ಬೇಜಾರಾಗುವ ಪ್ರಶ್ನೆಯೇ ಇಲ್ಲ` ಹೌದಲ್ಲವೇ ಎಂದೆ.

ಹೌದೆಂದು ತಲೆಯಾಡಿಸಿದ ಹಾಗಾಯಿತು.

ಹೀಗೆ ಆರು ತಿಂಗಳ ಹಿಂದೆ ಪರಿಚಯವಾದ ಈ ಅನಾಮಿಕ ಹುಡುಗಿ, ತನ್ನ ನಿಷ್ಕಲ್ಮಶ ಪ್ರೀತಿಯಿಂದ ನನ್ನ ಮನಸ್ಸಿನ ಒಳಗೊಳಗೇ ಸೇರಿಕೊಂಡು ಬಿಟ್ಟಿದ್ದಾಳೆ. `ನಿನ್ನ ಪ್ರೀತಿಗೆ ಯೋಗ್ಯವಾದವರು, ನಿನ್ನ ಥರಾನೇ ಯಾವಾಗಲೂ ಬೇಜಾರು ಮಾಡಿಕೊಂಡು ಇದನ್ನೆಲ್ಲಾ ಯಾರ ಬಳಿ ಹೇಳಲಿ ಎಂದು ತಲೆಕೆಡಿಸಿಕೊಂಡಿರುವ ಸಾಕಷ್ಟು ಹುಡುಗರೂ ಈ ರಾಜ್ಯದಲ್ಲಿದ್ದಾರೆ.` ಅವರನ್ನೆಲ್ಲಾ ಜಾಸ್ತಿ ದಿನ ಕಾಯಿಸಬಾರದು. ಯಾರನ್ನಾದರೂ ಹುಡುಕಿಕೊಂಡು ಮದುವೆಯಾಗಿ, ನನ್ನ ಬಳಿ ಅಡ ಇಟ್ಟಿರುವ ನಿನ್ನ ದುಃಖಗಳನ್ನು ಬಿಡಿಸಿಕೊಂಡು ಹೋಗು ಎಂದು ತಮಾಷೆ ಮಾಡುತ್ತಿರುತ್ತೇನೆ.

ಇಂದಿಗೂ ತನ್ನ ನಿಜ ಹೆಸರು ಹೇಳದೆ ನನ್ನ ತಲೆ ತಿನ್ನುತ್ತಿರುವ ಆ ಅನಾಮಿಕ ಹುಡುಗಿಯ ಪ್ರೀತಿಗೆ ಈ ಲೇಖನ.

Saturday, 1 November, 2008

ಎಲ್ಲರೂ ಮಲಗಿರಲು ಇವನೊಬ್ಬನೆದ್ದ...!


ಕುಟ್ಟಿ ಕುಂದಾಪುರಕ್ಕೆ ಹೋದ ಕಥೆ ನಿಮಗೆ ಗೊತ್ತಿರಬೇಕಲ್ಲಾ? ಹೀಗೆ ಮೊನ್ನೆ ನಾನೂ ಕೂಡ ದಾವಣಗರೆಗೆ ಹೋಗಿದ್ದೆ. ಕಾರಣಗಳೇನೂ ಇರಲಿಲ್ಲ. ಸುಮ್ಮನೆ ಕುಳಿತಿರುವಾಗ ನನಗೆ ಇಂತಹ ಅತೀಂದ್ರಿಯ ಪ್ರೇರೇಪಣೆಗಳಾಗುವುದಿದೆ. ಮೈಸೂರಿನಿಂದ ಅರಸೀಕರೆಗೆ ಹೋಗಿ, ಅಲ್ಲಿಂದ ಶಿವಮೊಗ್ಗಕ್ಕೆ ಬಂದು, ಶಿವಮೊಗ್ಗದಿಂದ ಹರಿಹರಕ್ಕೆ ಬಂದಿಳಿದು, ದಾವಣಗರೆ ತಲುಪುವುದರೊಳಗೆ ಮಧ್ಯರಾತ್ರಿ ಒಂದಾಗಿತ್ತು. ಹತ್ತಿರ ಹತ್ತಿರ ಹತ್ತು ತಾಸು ಹಿಡಿದಿತ್ತು. ಮುಂದೆ ನನಗೆ ಇಂತಹ ಪ್ರೇರೇಪಣೆಗಳಾಗದಿರಲಿ ದೇವರೆ ಎಂದು ಮಲಗಿದ್ದ ಗೆಳೆಯನನ್ನು ಎಬ್ಬಿಸಿ, ಆ ಹೊತ್ತಿನಲ್ಲಿ ಅವನ ರೂಮು ಹುಡುಕಿ, ಕಷ್ಟ ಸುಖ ಮಾತಾಡುತ್ತಾ ಕುಳಿತೆವು. ಹೊರಗೆ ದೀಪಾವಳಿಯ ಪಟಾಕಿಯ ಹೂಬಾಣಗಳು ಆಗಸಕ್ಕೆ ಚಿಮ್ಮಿ ಚಿತ್ತಾರ ಬಿಡಿಸುತ್ತಿದ್ದವು.

ದಾವಣಗರೆಯ ರಾತ್ರಿಗೆ ಒಂದು ವಿಶೇಷತೆಯಿದೆ. ನಿಮ್ಮ ಗಮನಕ್ಕೂ ಬಂದಿರಬಹುದು. ಅಲ್ಲಿ ಹಾವೇರಿ, ಚಿತ್ರದುರ್ಗ, ಹರಪನಹಳ್ಳಿ, ಜಗಳೂರು, ಬಳ್ಳಾರಿ ಸೇರಿದಂತೆ ಸುತ್ತಲಿನ ಹಳ್ಳಿಗಳಿಂದ ಬರುವ ಸಹಸ್ರಾರು ಹೂವುಗಳು, ಮಾಲೆಗಳಾಗಿ, ಗುಚ್ಚಗಳಾಗಿ, ಮೊಗ್ಗರಳಿ ಹೂವಾಗಿ ಬೆಳಗಾಗುವ ಹೊತ್ತಿಗೆ ಆಂಧ್ರ, ಮಹಾರಾಷ್ಟ್ರ, ಗೋವಾ ಅಂತೆಲ್ಲಾ ಹೋಗಿಬಿಡುತ್ತದೆ. ರಾತ್ರಿಯಿಡಿ ದಾವಣಗೆರೆಯ ಕತ್ತಲಿನಲ್ಲಿ ಈ ಹೂವಿನ ಘಮಲು ತೇಲುತ್ತಿರುತ್ತದೆ. ಮರ್ಕುರಿ ದೀಪದ ಕೆಳಗೆ ಕುಳಿತು ನೂರಾರು ಜನರು ಈ ಹೂವಿನ ದೊಡ್ಡ ಪೆಂಡಿಗಳನ್ನು ಕಟ್ಟುವುದರಲ್ಲಿ, ಎತ್ತಿಡುವುದರಲ್ಲಿ ನಿರತರಾಗಿರುತ್ತಾರೆ. ಮಲ್ಲಿಗೆ, ಕಾಕಡ, ಸೂಜಿ, ಸೇವಂತಿಗೆ, ಗುಲಾಬಿ, ಚೆಂಡು ಹೀಗೆ ಹೂವೆಲ್ಲಾ ಈ ಚೆಲುವೆಲ್ಲಾ ತಮ್ಮದೆನ್ನುತ್ತಾ, ಬುಟ್ಟಿಯಿಂದ ಇಣುಕಿ ನೋಡುತ್ತಾ, ಕುಲುಕುಲು ನಗುತ್ತಿರುತ್ತವೆ. ಎಲಾ! ರಾತ್ರಿರಾಣಿಯರೇ ಎಂದು ನಾನೂ ಕೂಡ ಇದನ್ನು ನೋಡುತ್ತಾ ನಿಂತಿದ್ದೆ. ಕೈಯಲ್ಲಿ ಕ್ಯಾಮರಾ ಇರಲಿಲ್ಲ. ಕೈ ಕೈ ಹಿಸುಕಿಕೊಂಡೆ. ಕ್ಯಾಮರಾ ಇಲ್ಲದೆ ಸಂಚರಿಸುವ ನೀನಾವ ಸೀಮೆಯ ಪತ್ರಕರ್ತ ಕಣಯ್ಯಾ ಎಂದು ನನ್ನನ್ನು ನಾನೇ ಬೈದುಕೊಂಡೆ. ಉದುರಿಬಿದ್ದ ಹೂವಿನ ಪಕಳೆಗಳನ್ನು ಎತ್ತಿ, ಮೈದಡುವುತ್ತಾ, ನೀನು ಹೂವಿನಡಗಲಿಯ ಮಲ್ಲಿಗೆಯಾ? ದುರ್ಗದ ಸೂಜಿಯಾ? ದಾವಣಗೆರೆಯ ಗುಲಾಬಿಯಾ? ಅಂತೆಲ್ಲಾ ಕೇಳುವ ಆಸೆಯಾಯಿತು.

ಬೆಳಿಗ್ಗೆ ಎದ್ದು ನೋಡಿದರೆ ದಾವಣಗೆರೆಯ ಜನ ಗೋಪೂಜೆ ಮಾಡುತ್ತಿದ್ದರು. ಸಿಡಿದ ಪಟಾಕಿಗಳ ಶೇಷ ಭಾಗಗಳು ನಮ್ಮತ್ತ ನೋಡಿ, `ಲೇ ಪತ್ರಕರ್ತರೇ ನಿಮಗೆ ಯಾವುದೇ ಹಬ್ಬವಿಲ್ಲವೇ, ಹೋಗಿ ನಿಮ್ಮ ಹೆಂಡತಿ ಮಕ್ಕಳೊಂದಿಗೆ ಹಬ್ಬ ಆಚರಿಸಿ ಎನ್ನುವಂತಿತ್ತು. `feeling less paper tigers` ಅನ್ನುವ ವಿಶೇಷಣ ಹೊತ್ತಿರುವ ನಾವು ಇದಕ್ಕೆಲ್ಲಾ ತಲೆಕೆಡಿಸಿಕೊಳ್ಳದವರಂತೆ ನಿರ್ಭಾವುಕರಾಗಿ ರಸ್ತೆ ಸುತ್ತುತ್ತಿದ್ದೆವು. ಒಳ್ಳೆಯ ಬಿರಿಯಾಣಿ ಕೊಡಿಸುತ್ತೇನೆ ಬಾ ಎಂದು ನನ್ನ ಗೆಳೆಯ ಸುವರ್ಣದ ವರದಿಗಾರ ಧನಲಿಂಗೇಶ, ನನ್ನನ್ನೂ ಹಾಗೂ ಕಸ್ತೂರಿಯ ವರದಿಗಾರ ಕೆರಿಬಸಪ್ಪನವರನ್ನೂ ಕರೆದುಕೊಂಡು ವೀರಶೈವ ಖಾನಾವಳಿ ಹೊಕ್ಕು ಹೂಳಿಗೆ ಊಟ ಮಾಡಿಸಿದ್ದ. ನಂತರ ಟಿವಿ 9 ಆಫೀಸಿಗೆ ಹೋಗಿ ನಮ್ಮ ಹಿರಿಯರಾದ ಬಸವರಾಜ ದೊಡ್ಡಮನಿ ಅವರಿಗೆ ನಮಸ್ಕಾರ ಮಾಡಿದೆವು. ಅವರು ಚಿತ್ರದುರ್ಗದಿಂದ ಪ್ರಾರಂಭವಾಗುವ ರಾಷ್ಟ್ರೀಯ ಹೆದ್ದಾರಿ (3) ದಾವಣಗರೆಯ ಮೂಲಕ ಹಾದು ಎಲ್ಲಿಯವರೆಗೆ ಹೋಗುತ್ತದೆ ಎಂದು ತಲೆಕೆಡಿಸಿಕೊಂಡಿದ್ದರು. ಅದರ ಉಗಮ ಚಿತ್ರದುರ್ಗವೆಂದೂ, ಸೊಲ್ಲಾಪುರದಲ್ಲಿ ಕೊನೆಗಳೊಳ್ಳಲಿದೆಯೆಂದೂ ತಿಳಿದ ನಂತರ ನಿರಮ್ಮಳರಾಗಿ ನನ್ನತ್ತ ನೋಡಿ, ಪ್ರೀತಿಯಿಂದ ಯೋಗಕ್ಷೇಮ ವಿಚಾರಿಸಿಕೊಂಡರು. ನಾನು ಮೈಸೂರಿನಿಂದ ಬಂದಿದ್ದ ದಣಿವನ್ನೆಲ್ಲಾ ಮುಖದಲ್ಲಿ ಪ್ರದರ್ಶಿಸಿ ಅವರಿಂದ ಒಂದಿಷ್ಟು ಪ್ರೀತಿಯನ್ನೂ, ಅನುಕಂಪವನ್ನೂ ಹೆಚ್ಚು ಪಡೆದುಕೊಳ್ಳಲು ಶ್ರಮಿಸುತ್ತಿದ್ದೆ.

ವಾಪಾಸ್ಸು ದಾವಣಗೆರೆ ಬಿಡುವಾಗ ರಾತ್ರಿ ಹತ್ತಾಗಿತ್ತು. ಹರಿಹರದಿಂದ ಅರಸೀಕೆರೆಗೆ ಹತ್ತಿದ ಬಸ್ ಕಡೂರಿನ ಬಳಿ ಪಂಕ್ಚರ್ ಆಯಿತು. ಬಸ್ಸು ಬಳ್ಳಾರಿ ಡಿಪೋಗೆ ಸೇರಿದ್ದರಿಂದ ಕಡೂರು ಡಿಪೋದವರು ಈ ರಾತ್ರಿ ನಿದ್ರೆಯಿಂದ ಎಚ್ಚೆತ್ತು ಟಯರ್ ಚೇಂಜ್ ಮಾಡಲು ನಮ್ಮಿಂದ ಆಗುವುದಿಲ್ಲ ಎಂದರು. ಸರಿ, ಡ್ರೈವರ್ ಕಂಡೆಕ್ಟರ್ ಬಸ್ಸಿನ ಕೆಳಗೆ ನುಸುಳಿ ಟಯರು ಬದಲಿಸಲು ಪ್ರಾರಂಭಿಸಿದರು. ಮೈಕೊರೆಯುವ ಚಳಿ ಬೇರೆ. ನಾನು ಇಳಿದು, ಅವರ ಪಕ್ಕವೇ ನಿಂತು, ಈ ರೀತಿ ಕೆಲಸ ಮಾಡುವುದಕ್ಕೆ ನಿಮಗೆ ಎಕ್ಟ್ರಾ ದುಡ್ಡು ಕೊಡುತ್ತಾರೆ ಅಂತೆಲ್ಲಾ ಪೆದ್ದು ಪೆದ್ದಾಗಿ ಪ್ರಶ್ನೆ ಕೇಳುತ್ತಿದ್ದೆ. ಕತ್ತಲೆಯಲ್ಲಿ ಅವರು ಕಷ್ಟಪಟ್ಟು ಪೆನ್ ಟಾರ್ಚ್ ಬೆಳಕಿನಲ್ಲಿ ಬೋಲ್ಟ್ ಬಿಚ್ಚುತ್ತಿದ್ದರು. `ನಿಮಗೆ MRF ಟಯರ್ ಕಂಪನಿ ಗೊತ್ತಾ, ಅದರ ಲೋಗೋ ಇದೆಯಲ್ಲಾ, ಒಬ್ಬ ಪೈಲ್ವಾನ ತನ್ನ ಎರಡೂ ಕೈಗಳಲ್ಲಿ ಟಯರನ್ನು ಎತ್ತಿ ಹಿಡಿದು ನಿಂತ ಚಿತ್ರ, ಆ ಲೋಗೋಗೆ ಐಡಿಯಾ ಕೊಟ್ಟವನು ದಾರಿಯಲ್ಲಿ ಪಂಕ್ಚರ್ ಅಂಗಡಿ ಇಟ್ಟುಕೊಂಡ ಒಬ್ಬ ಸಾಮಾನ್ಯ ವ್ಯಕ್ತಿ` ಈಗ ಅವರಿಗೆ ಆ ಲೋಗೋದಿಂದ ಕೋಟ್ಯಾಂತರ ರೂಪಾಯಿ ಬರುತ್ತಿದೆ, ಈ ಕಥೆ ನಿಮಗೆ ಗೊತ್ತಿದೆಯಾ ಅಂತ ಡ್ರೈವರನ್ನು ಕೇಳುವ ಆಸೆಯಾದರೂ, ಆತ `ಮಧ್ಯರಾತ್ರಿ ಈ ಟಯರು ಬಿಚ್ಚುವ ಕೆಲಸ ಈಗ ನಾನು ನಿನಗೆ ಕಲಿಸಿಕೊಡುತ್ತೇನೆ ಬಾ` ಅಂತ ಹೇಳುವ ಸಾಧ್ಯತೆ ಇದ್ದಿದ್ದರಿಂದ ನಾನು ಅದನ್ನು ನುಂಗಿಕೊಂಡು ನಿಂತಿದ್ದೆ.

ಕಡೂರಿನ ಆ ಮೈಕೊರೆಯುವ ಚಳಿಯಲ್ಲಿ ಒಂದು ಹುಲ್ಲು ಕಡ್ಡಿ ಕೂಡ ಅಲುಗಾಡದಂತೆ ನಿಂತಿದ್ದರೆ ಒಬ್ಬನು ಮಾತ್ರ ಸ್ಟೌವ್ ಉರಿಸಿ ಚಹಾ, ಕಾಫಿ ಮಾರುತ್ತಿದ್ದ. ಎಲ್ಲರೂ ಮಲಗಿರಲು ಇವನೊಬ್ಬನೆದ್ದ ಎಂದು ಹತ್ತಿರ ಹೋದರೆ ಅವನು ಚಾಯೆ.. ಕಾಫೀ.. ಅಂತ ಜೋರು ವ್ಯಾಪಾರ ಮಾಡುತ್ತಿದ್ದ. ಚಳಿಯಿಂದ ನಡುಗಿದವರೆಲ್ಲಾ ಬಾಯಲ್ಲಿ ಹೊಗೆ ಬಿಡುತ್ತಾ, ಚಹಾ, ಕಾಫಿಯನ್ನು ಊದಿ ಊದಿ ಕುಡಿದು ನಾಲಿಗೆ ಸುಟ್ಟುಕೊಳ್ಳುತ್ತಿದ್ದರು. ಈ ರೀತಿ ವ್ಯಾಪಾರ ಮಾಡುವ ನೀನೊಬ್ಬ ಮಲೆಯಾಳಿಯೇ ಇರಬೇಕು ಎಂದು ಅವನನ್ನು ಕೇಳಿದರೆ ಅವನು ಮಲೆಯಾಳಿಯೇ ಆಗಿದ್ದ. ಮಲ್ಲುಬಾಯ್ ನಿಮ್ಮ ಬಳಿ ಕಟ್ಟಂಚಾಯ, ಕಪ್ಪ (ಮರಗೆಣಸು) ಸಿಗುತ್ತದೆಯಾ ಅಂತ ಕೇಳಿದರೆ, ಕೂತುಕೊಳ್ಳಿ ಸಾರ್, ಇನ್ನೇನು ಬೆಳಗಾಗುತ್ತದೆ, ತರಿಸಿಕೊಡುತ್ತೇನೆ ಎನ್ನಬೇಕೇ. `ಈ ಬಾರಿಯ ಚಂದ್ರಯಾನ ಉಪಗ್ರಹದಲ್ಲಿ ಇಬ್ಬರು ಮಲಯಾಳಿಗಳೂ ಹೋಗಿದ್ದಾರೆ, ನಿನ್ನ ಟೆಂಟನ್ನು ಅವರ ಹತ್ತಿರ ಕೊಟ್ಟು ಕಳುಹಿಸಿದ್ದರೆ, ನೀನೂ ಕೂಡ ಬೇಗ ಅಲ್ಲಿಗೇ ಶಿಪ್ಟ್ ಆಗಬಹುದಿತ್ತು` ಎಂದಿದ್ದಕ್ಕೆ ಆತ ನಕ್ಕ. ಚಹಾ ಅಂಗಡಿ ನಡೆಸಿಯೇ ನಾನು ಇಡಿ ಬ್ರಹ್ಮಾಂಡವನ್ನೇ ಸುತ್ತಬಲ್ಲೆ ಎನ್ನುವಂತಿತ್ತು ಅವನ ಮಾತಿನ ಧಾಟಿ.

ಅರಸಿಕೆರೆಯಲ್ಲಿ ಇಳಿದಾಗ ಬೆಳಗಿನ ಜಾವ ಐದಾಗಿತ್ತು. `ಬಡವರ ಬಂಧು ರೈಲಿದೆ ಸಾರ್, ಇಪ್ಪತ್ತೈದು ರೂಪಾಯಲ್ಲಿ ಮೈಸೂರಿಗೆ ಕರ್‌ಕೊಂಡು ಹೋಗ್ತಾನೆ, ಯಾಕೆ ನೂರೈವತ್ತು ರೂಪಾಯಿ ಕೊಟ್ಟು ಬಸ್ಸಿಗೆ ಹೋಗ್ತೀರಾ?` ಎಂದು ಸಹ ಪ್ರಯಾಣಿಕರೊಬ್ಬರು ಮದುವೆಯಾಗದ ನನಗೆ ದುಡ್ಡು ಉಳಿಸುವ ಅಗತ್ಯವನ್ನೂ, ಐಡಿಯಾವನ್ನೂ ಹೇಳಿ ಒತ್ತಾಯಪೂರ್ವಕ ಎನ್ನುವಂತೆ ರೈಲು ಹತ್ತಿಸಿದರು. ಅಯ್ಯೋ! ಲಾಲುವೇ ಎಂದು ನಾನು ರೈಲು ಹತ್ತಿದರೆ ಅದು ಹೊರಡಬೇಕೋ ಬೇಡವೂ, ಮೈಸೂರು ತಲುಪಬೇಕೋ ಬೇಡವೋ ಎನ್ನುವ ಸ್ಥಿತಿಯಲ್ಲಿತ್ತು. ಬರ್ತ್ ಮೇಲೆ ಬ್ಯಾಗಿಟ್ಟು ತಲೆಯಾನಿಸಿದರೆ ಮೈಸೂರು ಹತ್ತಿರ ಡೋರನಹಳ್ಳಿ ಬಂದಾಗ ಎಚ್ಚರವಾಯಿತು. `ಎಲ್ಲರೂ ಎದ್ದಿರಲು ಇವನೊಬ್ಬ ಮಲಗಿದ` ಎಂದು ಕೆಳಗೆ ಸೀಟಿನಲ್ಲಿ ಕುಳಿತ ಪ್ರಯಾಣಿಕರು ನನ್ನನ್ನೇ ಕೆಕ್ಕರಿಸಿಕೊಂಡು ನೋಡುವ ಹಾಗಿತ್ತು. ಹೇಮಾವತಿ ನದಿಯನ್ನು ನೋಡಬೇಕು, ಅಲ್ಲಿ ತೇಜಸ್ವಿ ಮೀನು ಹಿಡಿದ ಸ್ಥಳವನ್ನು ನೋಡಬೇಕು ಎಂದೆಲ್ಲಾ ಮಲಗಿದ್ದ ನಾನು ಹನ್ನೊಂದು ಗಂಟೆಗೆ ಎಚ್ಚರಗೊಂಡಿದ್ದೆ. ಮೈಸೂರಿನಲ್ಲಿ ರೈಲಿಳಿದಾಗ ಸುಡುಸುಡು ಬಿಸಿಲು.

ಈ ಸಲದ ದೀಪಾವಳಿಗೆ ಪಟಾಕಿ ಸುಡಲಿಲ್ಲ, ಎಣ್ಣೆ ಸ್ನಾನ ಮಾಡಲಿಲ್ಲ. ಬದಲಿಗೆ ಗಳೆಯ ಧನುವಿನ ಪ್ರೀತಿ, ಕರಿಬಸಪ್ಪನವರ ಆತ್ಮೀಯತೆಯನ್ನು ಮನಸ್ಸಿನಲ್ಲಿ ತುಂಬಿಕೊಂಡು ದಾವಣಗರೆಯಿಂದ ಮೈಸೂರಿಗೆ ಮರಳಿ ಬಂದಿದ್ದೆ. ಮುಂದಿನ ದೀಪಾವಳಿಗೂ ನನಗೆ ದಾವಣಗೆರೆಗೆ ಹೋಗುವ ಪ್ರೇರಣೆಯಾಗಲಿ ಎಂದು ಈಗ ಪ್ರಾರ್ಥಿಸುತ್ತಿರುವೆ.

[ಚಿತ್ರ - ಅಂತರ್ಜಾಲದಿಂದ ಕದ್ದಿದ್ದು]


ಕದ್ದ ತಪ್ಪಿಗೆ...

ಜಗತ್ತಿನ ಕೋಟ್ಯಾನುಕೋಟಿ ವೆಬ್‌ಸೈಟ್‌ಗಳಿಂದ ಜನರು ಎನೆಲ್ಲಾ ಕದಿಯುತ್ತಿರುವಾಗ, ಒಬ್ಬ ಬಡ ಪತ್ರಕರ್ತನಾದ ನಾನು ಯಾವುದೋ ಒಂದು ತಾಣದಿಂದ ಒಂದು ಫೋಟೋವನ್ನು ಕದ್ದು ಹಾಕಿದರೆ ಅದು ದೊಡ್ಡ ತಪ್ಪೇನಲ್ಲ ಅಂತ ಭಾವಿಸಿ, ಸುಮ್ಮನಾದರೆ ನಮ್ಮ ಭಾಗವತರು `ಸ್ವಾಮಿ ನಿಮ್ಮ ಪಾಪ ಪರಿಹಾರಕ್ಕೆ ಅದರ ಲಿಂಕ್ ಕೊಡಿ` ಎನ್ನಬೇಕೆ. ಕದ್ದ ತಪ್ಪಿಗೆ ಈ ಚಿತ್ರವನ್ನು ಅಂತರ್ಜಾಲದಿಂದ ಕದ್ದಿದ್ದು ಎಂದು ಕ್ರೆಡಿಟ್ ಕೊಟ್ಟು ನಾನೊಬ್ಬ ಪ್ರಾಮಾಣಿಕ ಕಳ್ಳ ಎಂದು ನಿವೇದಿಸಿಕೊಂಡರೂ ಭಾಗವತರು ನನ್ನ ಬೆನ್ನು ಬಿಡಲಿಲ್ಲ. ಅವರೊಂದಿಗೆ ಈಗ ನಮ್ಮ ಟೀನಾ ಮೇಡಂಮ್ಮೂ ಸೇರಿಕೊಂಡು, ಸೋರ್ಸ್ ಲಿಂಕನ್ನು ವೆಬ್ ಪತ್ರಕರ್ತರಾದ ನೀವು ಜವಾಬ್ದಾರಿಯಿಂದ ಕೊಡಬೇಕು. ಎಂದೆಲ್ಲಾ ಕ್ಲಾಸ್ ತೆಗೆದುಕೊಂಡ ಮೇಲೆ, ಎಲ್ಲಿಂದ ಕದ್ದಿದ್ದು ಎಂದು ನನಗೇ ಮರೆತುಹೋಗಿದ್ದ ಈ ಚಿತ್ರದ ಮೂಲವನ್ನು ಹುಡುಕಿಕೊಂಡು ಅಂತರ್ಜಾಲವೆಲ್ಲಾ ಅಡ್ಡಾಗಿ ಸುಸ್ತಾಗಿ ಹೋಗಿದ್ದೇನೆ. ಆದರೂ ಚಿತ್ರದ ಪಕ್ಕಾ ಮೂಲ ಸಿಕ್ಕಿಲ್ಲ. ಇದನ್ನು ಫ್ಲಿಕ್ಕರ್ ತಾಣದಿಂದ ಎಗರಿಸಿದ್ದು. ಈ ಚಿತ್ರ ಇನ್ನೇನು ಕೈಗೆ ಸಿಗಬಹುದು ಎನ್ನುವಷ್ಟು ಹತ್ತಿರದ ಕೊಂಡಿ ಕೊಟ್ಟಿದ್ದೇನೆ. ಟೀನಾ ಮತ್ತು ಭಾಗವತರು ಇಲ್ಲಿ ಕ್ಲಿಕ್ಕಿಸಿ ಇದರ ಅಕ್ಕ ಪಕ್ಕ ಹುಡುಕಿ ನನಗೂ ತಿಳಿಸಬೇಕೆಂದು ಕೋರಿಕೆ. ನನಗಂತೂ ಸಾಕಾಗಿದೆ. ನೀವು ಬೇಕಾದರೆ ನನ್ನ ಮೇಲೆ ಕಾಪಿರೈಟ್ ಉಲ್ಲಂಘನೆಯಡಿ ಕೇಸು ಹಾಕಿ, ಬ್ಲಾಗ್ ಲೋಕದಿಂದ ಒದ್ದು ಓಡಿಸಬಹುದು.

Wednesday, 15 October, 2008

ಮುಗಿದು ಹೋದ ಮೈಸೂರು ದಸರಾ


ಈ ಬಾರಿಯ ಮೈಸೂರು ದಸರಾ ಭರ್ಜರಿಯಾಗಿಯೇ ಮುಗಿಯಿತು. ದಸರಾ ದಿನಗಳಲ್ಲಿ ನಾನು ಸುಮ್ಮನೆ ಮೈಸೂರಿನ ರಸ್ತೆಗಳನ್ನು ಸುತ್ತುತ್ತಿದ್ದೆ. ಎಲ್ಲೆಡೆ ಶೋಭಾ ಕರಂದ್ಲಾಜೆ ಮತ್ತು ಯಡಿಯೂರಪ್ಪನವರ ಕಟೌಟ್‌ಗಳೇ ಕಾಣಿಸಿ ನಾಡ ಹಬ್ಬ ಯಾಕೋ ಇವರಿಬ್ಬರದೇ ಹಬ್ಬವಾಗಿದೆ ಎಂದು ಅನಿಸಿ ದಿವ್ಯ ವಿಷಾದದಲ್ಲಿ ನಿಂತಿದ್ದೆ. ಮೈಸೂರಿನ ಬಸ್‌ಸ್ಟಾಂಡಿನಲ್ಲಿ ಹಳ್ಳಿಗಳಿಂದ ಬಂದ ಜನ ಎಳೆ ಸೌತೆಕಾಯಿ ತಿನ್ನುತ್ತಾ ದೇವನೂರು ಮಹಾದೇವರ ಶೈಲಿಯಲ್ಲಿ, ಹಳೆ ಮೈಸೂರಿನ ಸುಂದರ ಬೈಗುಳಗಳನ್ನು ತೇಲಿಬಿಡುತ್ತಿದ್ದರು. ದಸರಾ ವಿಶೇಷವಾಗಿ ವೋಲ್ವೋ ಬಸ್ಸುಗಳಿಗೆ ಒಂದು ರೂಪಾಯಿ ದರ ಇದ್ದಿದ್ದರಿಂದ ಮಳೆ ಸುರಿಯುತ್ತಿದ್ದರೂ, ಚಳಿ ಇದ್ದರೂ ಸಮಾನ್ಯ ಜನರು ಎಸಿ ಬಸ್ಸಿನಲ್ಲಿಯೇ ನಿಂತುಕೊಂಡು ಪ್ರಯಾಣಿಸುತ್ತಿದ್ದರು. ವರ್ಷಕ್ಕೊಮ್ಮೆ ಸಿಗುವ ಇಂತಹ ಪುಕ್ಕಟೆ ಖುಷಿಗಳನ್ನು ಜನರು ಖಂಡಿತವಾಗಿಯೂ ಮಿಸ್ ಮಾಡಿಕೊಳ್ಳಬಾರದು ಎನ್ನುತ್ತಾ ನಾನೂ ಅವರ ಮಾತುಗಳನ್ನು ಕೇಳಿಸಿಕೊಳ್ಳಲು ಅವರ ನಡುವೆ ನುಸುಳಿಕೊಂಡು ನಿಂತಿದ್ದೆ.

ನೀವು ಮೈಸೂರು ಅರಮನೆಯನ್ನು ನೋಡಿರಬಹುದು. ಈ ಅರಮನೆಯ ಅಂಗಳದಲ್ಲಿ ಇಪ್ಪತ್ತು ವರ್ಷಗಳಿಂದ ಕಸ ಗುಡಿಸುವ ತಾಯಿಯೊಬ್ಬರಿದ್ದಾರೆ. ಒಂಟಿಕೊಪ್ಪಲಿನ ರಾಜಮ್ಮ ಎನ್ನುವುದು ಅವರ ಹೆಸರು. ನಾನು ಅರಮನೆ ಅಂಗಳದಲ್ಲಿ ಎಲ್ಲಿಗೆ ಹೋಗುವುದು ಎಂದು ಗೊತ್ತಾಗದೆ ನಿಂತಿದ್ದಾಗ ಇವರು ಸಿಕ್ಕಿದರು. ಸುಮ್ಮನೆ ಮುಗಳ್ನಕ್ಕಿದ್ದಕ್ಕೆ ಒಂದು ಗಂಟೆ ಪ್ರೀತಿಯಿಂದ ಮಾತನಾಡಿದರು. ತನ್ನಪ್ಪ ತಾನು ಚಿಕ್ಕವಳಿದ್ದಾಗ ಹೆಗಲು ಮೇಲೆ ಕೂರಿಸಿಕೊಂಡು ಜಂಬೂ ಸವಾರಿ ತೋರಿಸುತ್ತಿದ್ದನೆಂದೂ, ಈಗ ಅಪ್ಪ ತೀರಿ ಹೋಗಿ ನಾಲ್ಕು ವರ್ಷವಾಗಿದೆಯೆಂದೂ, ನಾನಿಲ್ಲಿ ದಿನಕ್ಕೆ ಎಪ್ಪತ್ತು ರೂಪಾಯಿಗಳಿಗೆ ದಿನಗೂಲಿ ಮಾಡುತ್ತಿರುವುದಾಗಿ ಹೇಳಿದಳು. ನಾಲ್ವಡಿ ಕೃಷ್ಣರಾಜರು ಒಡೆಯರು ಮೈಸೂರಿನ ರಾಜರಾಗಿದ್ದಾಗ ನನ್ನ ಚಿಕ್ಕಪ್ಪನೊಬ್ಬರು ಸೈನ್ಯದಲ್ಲಿದ್ದರೆಂದೂ ಆಗ ಅವರ ಬಳಿ ಇದ್ದ ಖಡ್ಗವೊಂದು ಈಗಲೂ ಮನೆಯಲ್ಲಿ ಇದೆಯೆಂದು ಹೇಳಿದಳು. ನಂತರ ನೀವು ಇಷ್ಟು ಚೆನ್ನಾಗಿ ಕನ್ನಡ ಮಾತಾಡುತ್ತೀರಲ್ಲಾ ನನಗೆ ತುಂಬಾ ಖುಷಿಯಾಯಿತು ಎಂದು ಹೇಳಿ ತನಗೆ ತರಿಸಿದ್ದ ಚಹಾದಲ್ಲಿ ಅರ್ಧ ಲೋಟ ನನಗೆ ಕೊಟ್ಟಳು. ಆವತ್ತು ನನಗೆ ಎಷ್ಟು ಖುಷಿಯಾಗಿತ್ತು ಎಂದರೆ ಶ್ರೀಕಂಠ ದತ್ತ ಒಡೆಯರೇ ಚಹಾಕ್ಕೆ ಕರೆದಿದ್ದರೂ ಇಷ್ಟು ಸಂತೋಷ ಪಡುತ್ತಿರಲಿಲ್ಲ.

ರಾಜಮ್ಮನ ಕಥೆಯನ್ನು ಕೇಳಿಸಿಕೊಂಡು ಅರಮನೆಯ ಮುಂಬಾಗಕ್ಕೆ ಬಂದರೆ ನಾಲ್ವರು ಬೌದ್ಧ ಬಿಕ್ಷುಗಳು ಬಿಸಿಲು ಕಾಯಿಸಿಕೊಳ್ಳುತ್ತಾ, ಪಪ್ಪಾಯಿ ಹಣ್ಣು ತಿನ್ನುತ್ತಿದ್ದರು. ಬೈಲುಕುಪ್ಪೆಯ ಟಿಬೆಟಿಯನ್ ಕ್ಯಾಂಪಿನಿಂದ ದಸರಾ ನೋಡಲು ಮೈಸೂರಿಗೆ ಬಂದಿದ್ದ ಅವರ ಸುತ್ತ ಒಂದಿಷ್ಟು ಜನ ಸೇರಿ ಪೊಟೋ ತೆಗೆಸಿಕೊಳ್ಳಲು ಪೀಡಿಸುತ್ತಿದ್ದರು. ಬುದ್ದನ ಶಾಂತಿಯನ್ನೂ, ಪ್ರೀತಿಯನ್ನೂ ಮನಸ್ಸಿನಲ್ಲಿ ತುಂಬಿಕೊಂಡಿದ್ದ ಅವರು ಸ್ವಲ್ಪವೂ ಬೇಸರಿಸಿಕೊಳ್ಳದೆ ಎಲ್ಲರೊಂದಿಗೆ ಫೊಟೋ ಹೊಡಿಸಿಕೊಳ್ಳುತ್ತಿದ್ದರು. ಅವರೆಲ್ಲರೂ ಹೊರಟು ಹೋದ ನಂತರ, ಕಲಸಾಂಗ್, ಕುಂಡಮ್, ನವಾಂಗ್, ಗೊಬಾ ಎನ್ನುವುದು ತಮ್ಮ ಹೆಸರೆಂದೂ ಆ ಹೆಸರಿನ ಅರ್ಥ ಏಕಾಗ್ರತೆ, ಐಶ್ವರ್ಯ, ಪ್ರೀತಿ ಮತ್ತು ಧನಾತ್ಮಕತೆ ಎಂದೂ ಹೇಳಿದರು. ನೋಡಲೂ ಹಾಗೆಯೇ ಇದ್ದರು. ಈ ಮೈಸೂರನ್ನು ಆಳಿದ ಒಡೆಯರು ಯಾರೆಂದು ನಿಮಗೆ ಗೊತ್ತಾ ಎಂದು ಕೇಳಿದರೆ ಅವರು ನಕ್ಕು, ಅದೆಲ್ಲಾ ತಮಗೇನೂ ಗೊತ್ತಿಲ್ಲವೆಂದೂ, ದಲಾಯಿಲಾಮ ನಮ್ಮ ಗುರುವೆಂದೂ ಹೇಳಿದರು. ಟಿಬೆಟನ್ನರ ಮೇಲೆ ಚೀನಾ ನಡೆಸುತ್ತಿರುವ ಆಕ್ರಮಣದ ಕುರಿತು ಕೇಳೋಣವೆಂದರೆ, ಅವರು ಅದನ್ನೆಲ್ಲಾ ಆಗಲೇ ಮರೆತವರಂತೆ ಪಪ್ಪಾಯಿ ಹಣ್ಣು ತಿನ್ನುತ್ತಿದ್ದರು.

ಸರಿ, ಚಾಮುಂಡಿ ಬೆಟ್ಟವನ್ನೂ ಹತ್ತಿ ಬಿಡೋಣವೆಂದು ಅಲ್ಲಿಗೆ ಹೊರಟರೆ, ಚಾಮುಂಡಿದೇವಿಯ ಸನ್ನಿಧಾನದಲ್ಲಿ ಚೀನಾದ ಫಾಲೂನ್ ದಾಫಾ ಕಾರ್ಯಕರ್ತರು ಶಾಂತವಾಗಿ ಹಾಡುತ್ತಿದ್ದರು. ಆ ಹಾಡು ಅಲೆ ಅಲೆಯಾಗಿ ತೇಲಿ ಬಂದು ಬೆಟ್ಟದ ತಪ್ಪಲಿನವರೆಗೂ ಹೋಗಿ ಲೀನವಾಗುವಂತಿತ್ತು. ಒಂದು ಕಾಲದಲ್ಲಿ ಚೀನಾ ಸರಕಾರವನ್ನೇ ಉರುಳಿಸುವಂತೆ ಮಾಡಿದ್ದ ಈ ಕಾರ್ಯಕರ್ತರಿಗೆ ಇಲ್ಲೇನು ಕೆಲಸ ಎಂದು ಗುಂಪಿನೊಳಗೆ ನುಸುಳಿಕೊಂಡು ನೋಡಿದರೆ, ತೈವಾನ್, ಹಾಂಗ್‌ಕಾಂಗ್, ಚೀನಾದ ಇನ್ನಿತರ ಭಾಗಗಳಿಂದ ಆಗಮಿಸಿದ್ದ ಅವರು ಸತ್ಯ, ಕರುಣೆ, ಸಹನೆಯ ಬಗ್ಗೆ ಹೇಳುತ್ತಿದ್ದರು. ಅಲ್ಲದೆ ಮೈಸೂರಿನ ದೊಡ್ಡಕೆರೆ ಮೈದಾನದಲ್ಲಿ ದಸರಾ ಪ್ರದರ್ಶನ ನಡೆಯುವಲ್ಲಿ ತಮ್ಮ ಸಭೆ ನಡೆಯುತ್ತಿದೆಯೆಂದೂ ಅಲ್ಲಿಗೆ ಬಂದರೆ, ದೇಹ ಮತ್ತು ಮನಸ್ಸನ್ನು ದಂಡಿಸಲು ಐದು ವ್ಯಾಯಾಮಗಳನ್ನು ಕಲಿಸುವುದಾಗಿ ಹೇಳುತ್ತಿದ್ದರು. ಸುನೈನಾ ಎನ್ನುವ ಬೆಂಗಳೂರಿನ ಪಿಯುಸಿ ವಿದ್ಯಾರ್ಥಿನಿ ಈ ತಂಡದ ಮುಂಭಾಗದಲ್ಲಿ ನಿಂತು ಬ್ಯಾಂಡ್ ನುಡಿಸುವವರಿಗೆ ಸನ್ನೆಗಳನ್ನು ನೀಡುತ್ತಿದ್ದಳು. ಜೊತೆಗೆ ಫಾಲೂನ್ ದಾಫಾದ ಕಾರ್ಯಕ್ರಮಗಳ ಬಗ್ಗೆ ಕನ್ನಡದಲ್ಲಿ ವಿವರಿಸುತ್ತಿದ್ದಳು.

`ಇಷ್ಟು ಚಿಕ್ಕ ವಯಸ್ಸಿನಲ್ಲಿ ನಿಮಗೇಕೆ ಈ ಆಧ್ಯಾತ್ಮದ ಗೊಡವೆ` ಎಂದು ಸುನೈನಾಳನ್ನು ಕೇಳಿದರೆ, ಆಕೆ , ದೇಹ, ಮನಸ್ಸು ಆತ್ಮದ ಕುರಿತು ಪುಟ್ಟದೊಂದು ಪ್ರವಚನ ಕೊಟ್ಟು ನಿಮ್ಮಂತ ಯುವಕರು ದೇಹವನ್ನೂ, ಮನಸ್ಸನ್ನೂ ಶುದ್ಧೀಕರಿಸಲು ದೊಡ್ಡಕೆರೆ ಮೈದಾನಕ್ಕೆ ಬರಬೇಕೆಂದಳು. ಜೊತೆಗೆ ಫಾಲೂನ್ ದಾಫಾದ ಕುರಿತು ಒಂದಿಷ್ಟು ಪಾಂಪ್ಲೆಟ್ ಕೊಟ್ಟು ಓದಿಕೊಳ್ಳುವಂತೆ ಹೇಳಿದಳು. ನಾನು ಅಲ್ಲೇ ಪಕ್ಕದಲ್ಲೇ ನಿಂತಿದ್ದ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಒಬ್ಬರಿಗೆ ಇವೆರಲ್ಲಾ ಯಾರು ಎಂದು ಏನೂ ಗೊತ್ತಾಗವನಂತೆ ಕೇಳಿದರೆ, ಅವರು `ನೋಡು ಮಗು, ಇವರು ಟಿಬೆಟನ್ನರು, ಚೀನಾದವರು, ಧ್ಯಾನ ಕಲಿಸಲು ಮೈಸೂರಿಗೆ ಬಂದಿದ್ದಾರೆ, ಪಾಂಪ್ಲೆಟ್ ಕೊಟ್ಟಿದ್ದಾರಲ್ಲಾ ಓದಿಕೋ` ಎಂದು ನನ್ನನ್ನು ಓಡಿಸಿದರು.

ನನಗೆ ಎಲ್ಲಿ ಹೋದರು ಇಂತಹ ಒಳ್ಳೆಯ ಜನರೇ ಸಿಗುತ್ತಾರಲ್ಲಾ ಎಂದುಕೊಳ್ಳುತ್ತಾ, ಮೈಸೂರಿನ ರಸ್ತೆಗಳನ್ನು ಅಡ್ಡಾದಿಡ್ಡಿ ಸುತ್ತಿ ಆಫೀಸಿಗೆ ತಡವಾಗಿ ಬಂದು ಸಂಪಾದಕರಿಂದ ಸಣ್ಣಗೆ ಬೈಯಿಸಿಕೊಂಡು ಎರಡು ದಸರಾ ವಿಶೇಷ ಸುದ್ದಿಗಳನ್ನು ಟೈಪಿಸಿ ಕೆಂಡಸಂಪಿಗೆಯಲ್ಲಿ ಹಾಕಿದ್ದೆ.