Tuesday, 29 July, 2008

ಗೋಪಾಲಸ್ವಾಮಿ ಬೆಟ್ಟದಲ್ಲಿ ಒಂದು ಮಂಜು ಕವಿದ ಮಧ್ಯಾಹ್ನ


ಈ ಜಗತ್ತಿನಲ್ಲಿ ಸ್ವರ್ಗವೇನಾದರೂ ಇದ್ದರೆ ಅದು ಇಲ್ಲಿಗೇ ಇಳಿದು ಬಂದಿದೆ ಎಂದು ನಾನು ಸುರಿಯುವ ಮಂಜಿಗೆ ಮುಖವೊಡ್ಡಿ ಸುಖಿಸುತ್ತಿದ್ದೆ. ಅರಳೆಯಂತೆ ತೇಲಿ ಬರುವ ಮೋಡಗಳು ಜೊತೆಗೆ ನಮ್ಮನ್ನೂ ಹೊತ್ತು ಸಾಗುತ್ತಿದ್ದವು. ಅಕ್ಕ ಪಕ್ಕ ಒಬ್ಬರ ಕೈಯನ್ನಿಡಿದು ಒಬ್ಬರು ನಿಂತಿದ್ದರೂ ಪರಸ್ಪರ ಮುಖ ಕಾಣದಷ್ಟು ದಟ್ಟ ಮಂಜು. ಬೀಸಿ ಬರುವ ಗಾಳಿಗೆ ಮಂಜು ಹನಿ ಹನಿಯಾಗಿ ಮುಖದ ಮೇಲೆಲ್ಲಾ ಸುರಿದು ಅಪೂರ್ವ ಅನುಭವ ನೀಡುತ್ತಿದ್ದವು. ಹಿಂದೆಲ್ಲೋ ಚಂದಮಾಮ ಕಥೆಯಲ್ಲಿ ಓದಿದ ಮೋಡದ ಕಥೆಗಳು, ಅದರ ನಡುವಿನಿಂದ ಇಳಿದು ಬರುವ ದೇವದೂತರು, ಯಾವುದೋ ಹೊಟೇಲಿನ ಗೋಡೆಯ ಮೇಲೆ ಕಂಡು, ಮನಸ್ಸಿನಲ್ಲಿ ಇಳಿದು ಹೋಗಿರುವ ಮಂಜಿನ ವಾಲ್‌ಪೋಸ್ಟರ್‌ ಇದೆಲ್ಲವನ್ನೂ ಪ್ರತ್ಯಕ್ಷ ಕಂಡಂತೆ, ಕಂಡೂ ನಂಬಲಾಗದವನಂತೆ ನಾನು ಮರಗಟ್ಟಿದ ಕೈಯನ್ನು ಮತ್ತೊಂದು ಕೈಯಿಂದ ತಿಕ್ಕಿ ತಿಕ್ಕಿ ಬಿಸಿ ಮಾಡಿಕೊಳ್ಳುತ್ತಾ ಫೋಟೋ ತೆಗೆಯುತ್ತಿದ್ದೆ.

ಮೊನ್ನೆ ರಾತ್ರಿ ಹನ್ನೆರಡರ ಸುಮಾರಿಗೆ ಬೆಂಗಳೂರಿನಿಂದ ಬಂದ ತಂಡವೊಂದು, ಯಾವ ಸೂಚನೆಯೂ ಕೊಡದೆ ಮೈಸೂರಿನಲ್ಲಿ ನನ್ನನ್ನು ಗಾಡಿಯಲ್ಲಿ ಎತ್ತಿ ಹಾಕಿ ಗುಂಡ್ಲುಪೇಟೆಯಲ್ಲಿ ಇಳಿಸಿದಾಗಲೇ ನನಗೆ ನಾವು ಹೋಗುತ್ತಿರುವುದು ಗೋಪಾಲಸ್ವಾಮಿ ಬೆಟ್ಟಕ್ಕೆ ಎನ್ನುವುದು ಗೊತ್ತಾಗಿದ್ದು. ಕಸ್ತೂರಿ ಚಾನೆಲ್‌ನ ಏಳು ಜನ ಸ್ನೇಹಿತರು ಸ್ಟಿಂಜ್ ಆಪರೇಷನ್‌ಗೆ ಹೊರಟವರಂತೆ ಪಿಕ್‌ನಿಕ್‌ಗೆ ಬಂದಿದ್ದರು. ಏನ್ ಮಗ ಎಲ್ಲಿಗೆ? ಎಂದು ನಾನು ಕೇಳುವ ಮೊದಲೇ ಗಾಡಿಯಲ್ಲಿ ಹತ್ತಿಸಿಕೊಂಡು ನಂಜನಗೂಡಿನ ಬಳಿ ಇಳಿಸಿ, ಮಳೆಯಲ್ಲಿಯೇ ಹ್ಯಾಪಿ ಬರ್ತ್‌ ಡೆ ಹಾಡಿ ಗೆಳೆಯ ಪ್ರತೀಕ್‌ನ ಹುಟ್ಟು ಹಬ್ಬ ಆಚರಿಸಿದ್ದರು. ಓಹೋ ಹೀಗಾ ಸಮಾಚಾರ ಎಂದು ನಾನು ಎಲ್ಲವನ್ನೂ ಅರ್ಥಮಾಡಿಕೊಳ್ಳುವ ಹೊತ್ತಿಗೆ, `ಟೆನ್ಷನ್ ತಕೋಬೇಡಿ, ನಾಳೆ ರಾತ್ರಿ ಇದೇ ಹೊತ್ತಿಗೆ ನಿಮ್ಮನ್ನು ತಂದು ಮೈಸೂರಿನಲ್ಲಿ ಓಗೀತೀವಿ ಅಲ್ಲಿಯವರೆಗೆ ಎಂಜಾಯ್‌` ಎಂದು ಕಸ್ತೂರಿಯ BP ಗಣೇಶ್ ವಾರ್ತೆಗೆ ಚಾಲನೆ ನೀಡಿದ್ದರು.

ಗುಂಡ್ಲುಪೇಟೆಯ ಫಠಾನ್ ಲಾಡ್ಜ್‌ನಲ್ಲಿ ಮಲಗಿ ಬೆಳಿಗ್ಗೆ ಆರು ಗಂಟೆಗೇ ಗೋಪಾಲ ಸ್ವಾಮಿ ಬೆಟ್ಟಕ್ಕೆ ಹೋಗುವುದೆಂದು ನಿರ್ಧರಿಸಲಾಗಿತ್ತು. ಹಾಗೇನಾದರೂ ನಾವು ಬೆಳಿಗ್ಗೆಯೇ ಹೋಗಿದ್ದರೆ ಆ ಚಳಿಯಲ್ಲಿ ಸತ್ತು ಹೋಗುತ್ತಿದ್ದೆವೋ ಏನೋ? ಆದರೆ ತಿಂಗಳ ಕೊನೆಯಲ್ಲಿ ಸರಿಯಾಗಿ ವೇತನ ಹೊರಡಿಸುವ ಕಸ್ತೂರಿ ಎಚ್‌ಆರ್ ಯೋಗಾನಂದ್ ಅವರು ತಮ್ಮ ಅತ್ತೆ ಮನೆಗೆ ಹೋಗಿದ್ದರಿಂದ ಬರುವುದು ಲೇಟಾಯಿತು, ಹಾಗಾಗಿ ನಾವು ಬೆಟ್ಟದ ತುದಿ ತಲುಪಿದಾಗ ಮಧ್ಯಾಹ್ನ ಒಂದೂವರೆಯಾಗಿತ್ತು. ಎದುರಿಗೆ ಬರುತ್ತಿದ್ದ ವಾಹನಗಳು ಲೈಟ್ ಹಾಕಿಕೊಂಡು ಇಳಿಯುತ್ತಿದ್ದವು. ಕೆಳಗೆ ಆಳ ಪ್ರತಾಪ. ಮೋಡಗಳು ಕೈಗೆಟುಕುವಂತೆ ಕಿಟಕಿಯ ಪಕ್ಕದಿಂದ ಹಾರಿ ಹೋಗುತ್ತಿದ್ದವು. ಬೆಟ್ಟದಲ್ಲಿ ಅದ್ಭುತವೆನ್ನುವ ವಾತಾವರಣ ಇತ್ತು. ಮಂಜು ಸುರಿಯುತ್ತಿತ್ತು.


ಬೆಟ್ಟದ ತುದಿಯಿಂದ ಹಾಗೆಯೇ ಇಳಿದುಕೊಂಡು ಹೋಗಿ ಬಂಡೆಯೇರಿ ಕುಳಿತೆವು. ಮಾತಿಲ್ಲ, ಕಥೆಯಿಲ್ಲ. ಮಾತನಾಡುವುದಾದರೂ ಏನನ್ನು, ಪಕೃತಿಯ ಸೌಂದರ್ಯವನ್ನೂ, ಸಂತಸವನ್ನೂ ಹನಿ ಹನಿಯಾಗಿ ಬೊಗಸೆಯಲ್ಲಿ ತುಂಬಿಕೊಂಡಂತೆ, ಪ್ರತಿಯೊಬ್ಬರೂ ಖುಷಿಯಲ್ಲಿ ತೇಲಿಹೋಗಿದ್ದರು. ಯಾರಾದರೂ ಭಾವುಕ ಮನಸ್ಸಿನವರು ಇದ್ದರೆ ಅಲ್ಲೇ ಕುಳಿತು ಕವಿತೆಯನ್ನೋ, ಕಥೆಯನ್ನೋ ಬರೆಯುತ್ತಿದ್ದರು. ಯಾರೂ ಎದ್ದು ಬರಲು ತಯಾರಿಲ್ಲ. ಮಂಜುನಾಥ್ ಜೂಟಿ ಎಲ್ಲರ ಒತ್ತಡಕ್ಕೆ ಮಣಿದು ತಂದಿದ್ದ ಬಾಳೆ ಹಣ್ಣು ಆಗಲೇ ಮುಗಿದಿತ್ತು. ಶರತ್ ಗುಂಡ್ಲುಪೇಟೆಯ ಹತ್ತಿರದಲ್ಲೇ ಇರುವ ತನ್ನ ಮನಗೆ ಹೋಗಿ ಬರುವುದಾಗಿ ಹೇಳಿದ. ರಫೀಕ್‌ಗೆ ಆದಷ್ಟು ಬೇಗ ಮದುವೆಯಾಗಿ, ಹನಿಮೂನ್‌ಗೆ ಇಲ್ಲಿಗೆ ಬಾ ಎಂದು ಹೇಳಿದೆವು. ಗಣೇಶ್, ಪ್ರತೀಕ್, ಮಸೂದ್ ಮರವೊಂದನ್ನು ಹತ್ತಿ ಇಲ್ಲೇ ಪ್ಲಾಟ್ ಕೊಂಡರೆ ಹೇಗೆ ಅಂತೆಲ್ಲಾ ಲೆಕ್ಕಾಚಾರ ನಡೆಸುತ್ತಿದ್ದರು.

ನಾನು ಇಷ್ಟೆಲ್ಲಾ ಖುಷಿಯನ್ನು ಒಟ್ಟಿಗೆ ಅನುಭವಿಸುವುದು ಹೇಗೆ ದೇವರೆ ಎಂದುಕೊಳ್ಳುತ್ತಾ, ಫೋಟೋ ತೆಗೆದಷ್ಟೂ ಸಾಕಾಗದವನಂತೆ ಸುಮ್ಮನೆ ಕ್ಲಿಕ್ಕಿಸುತ್ತಲೇ ಇದ್ದೆ. ಬೆಟ್ಟದ ತುದಿಯಲ್ಲಿದ್ದ ಗೋಪಾಲಸ್ವಾಮಿ ಚಳಿಯಲ್ಲಿ ನಡುತ್ತಿದ್ದನೋ ಏನೋ? ದೇವಸ್ಥಾನದ ಹಿಂದೆ ತೇಲಿ ಬರುವ ಬಿಳಿಯ ಮೋಡಗಳನ್ನು ನೋಡಿ, ಖುಷಿ ತಡೆಯಲಾಗದೇ ಹುಡುಗಿಯೊಬ್ಬಳು ಮನಸಾರೆ ನರ್ತಿಸುತ್ತಿದ್ದಳು. ಬೆಟ್ಟ ಇಳಿಯಲು ನನಗಂತೂ ಮನಸ್ಸು ಇರಲಿಲ್ಲ. ನಂತರ ಬಂಡೀಪುರಕ್ಕೆ ಬಂದು ಗಾಡಿಯಲ್ಲಿಯೇ ಕುಳಿತು ಸಫಾರಿ ಅನುಭವಿಸಿದರೂ ಯಾಕೋ ಗೋಪಾಲಸ್ವಾಮಿ ಬೆಟ್ಟ ಮನಸ್ಸಿನಿಂದ ಮರೆಯಾಗುತ್ತಿಲ್ಲ. ನನಗೆ ಆನೆ ನೋಡಬೇಕು ಎಂದೆಲ್ಲಾ ಹಠ ಹಿಡಿದಿದ್ದ ಕಸ್ತೂರಿ ಬಿಪಿ ಗಣೇಶ್ ಅವರಿಗೆ ಕೊನೆಗೂ ಬಂಡೀಪುರ ರಸ್ತೆಯಲ್ಲಿ ಆನೆಯ ಲದ್ದಿ ತೋರಿಸಿ ಸಮಾಧಾನ ಮಾಡಿ ಕರೆತಂದೆವು.

ಹಾಗೆ ಸುಮ್ಮನೆ ನಿಮ್ಮ ಮನಸ್ಸಿಗೆ ತುಂಬಾ ಬೇಸರ ಆಗಿದೆ ಅಂತ ಅನಿಸಿದರೆ ಯಾರಿಗೂ ಹೇಳದೇ ಕೇಳದೇ ಒಮ್ಮೆ ಗೋಪಾಲಸ್ವಾಮಿ ಬೆಟ್ಟಕ್ಕೆ ಹೋಗಿಬನ್ನಿ. ವಾಪಾಸ್ಸು ಬರುವಾಗ ನಿಮ್ಮ ಮನಸ್ಸು ಮಗುವಿನಂತಾಗಿರದಿದ್ದರೆ ನನ್ನ ಕೇಳಿ.





Monday, 7 July, 2008

ಮಳೆ ನಿಂತು ಹೋದ ಮೇಲೆ ಒಂದು ಸೀರಿಯಸ್ ಬರಹ

ಮೊನ್ನೆ ಭೇಟಿಯಾದ ಸ್ನೇಹಿತರೊಬ್ಬರು ನೀನು ಬ್ಲಾಗಿನಲ್ಲಿ ಇನ್ನು ಮಳೆ, ಭಾವುಕತೆ ಅಂತೆಲ್ಲಾ ಬಿಟ್ಟು ಸ್ವಲ್ಪ ಸೀರಿಯಸ್ ಆಗಿ ಬೇರೆ ಏನಾದರೂ ಬರಿ ಅಂತ ಹೇಳಿದ್ದರು. ಜೊತೆಗೆ `ಮಳೆ ನಿಂತು ಹೋದ ಮೇಲೆ` ಅಂತಿರುವ ನಿನ್ನ ಕಾಲರ್ ಟೂನ್ ಕೂಡ ಚೇಂಜ್ ಮಾಡಿಸು ಎಂದು ಉಪದೇಶ ನೀಡಿದ್ದರು. ಬ್ಲಾಗು - ಮಳೆ - ಕಾಲರ್ ಟೂನ್ ಇದು ಮೂರಕ್ಕೂ ಇರುವ ಸಂಬಂಧವನ್ನು ಹುಡುಕುತ್ತಾ ನಾನು ಹೊಸದಾಗಿ ಏನು ಬರೆಯಲಿ ಎಂದು ಸ್ವಲ್ಪ ಸೀರಿಯಸ್ ಆಗಿಯೇ ವಿಚಾರ ಮಾಡಿದ್ದೆ. ಹಾಗಿರುವಾಗಲೇ ಮತ್ತೊಬ್ಬ ಬ್ಲಾಗಿಗರು ತುಂಬಾ ಖುಷಿಯಿಂದ ಧಾರವಾಡದಿಂದ ಒಂದು ಹುಡುಗಿ ಬ್ಲಾಗಿನಲ್ಲಿ ಬರೆಯುತ್ತಾಳೆ, ನೀನು ನೋಡಬೇಕು ಜೋಮನ್, ಅವಳು ಬೆಳ್ಳಂಬೆಳಗ್ಗೆ ನಾಲ್ಕು ಗಂಟೆಗೆ ಎದ್ದು ಲೇಖನ ಬರೆಯುತ್ತಾಳೆ ಎಂದಿದ್ದರು.

ಹೌದಾ? ಹಾಗಾದರೆ ನಿಜವಾಗಿಯೂ ಆಕೆಗೇನಾದರೂ ತೊಂದರೆ ಇರಬೇಕು ಎಂದು ತಮಾಷೆ ಮಾಡಿದ್ದೆ. ನಾಲ್ಕು ಗಂಟೆಗೆ ಎದ್ದು ಬಿಸಿ ನೀರಿನಲ್ಲಿ ಸ್ನಾನ ಮಾಡಿ, ದೇವರನ್ನು ಮನಸ್ಸಿನಲ್ಲಿ ಧ್ಯಾನಿಸಿ, ಲ್ಯಾಪ್ ಟಾಪ್ ತೆಗೆದು, ಅದರಲ್ಲಿರುವ ಗಣಪತಿಯ ಫೋಟೋಗೆ ನಮಿಸಿ, ಕಿಟಕಿಯ ಪಕ್ಕದಲ್ಲಿ ಕುಳಿತು, ಬೀಸಿ ಬರುವ ತಂಗಾಳಿಗೆ ಮುಂಗುರುಳು ಸರಿಸುತ್ತಾ, ಮೃದು ಬೆರಳುಗಳ ತುದಿಯಿಂದ ಆಕೆ ಕಿ ಬೋರ್ಡ್ ಶಬ್ದ ಕೂಡ ಮಾಡದೆ ಒಂದೊಂದೇ ಅಕ್ಷರ ಬರೆಯುತ್ತಿದ್ದರೆ.. ನಾನಿಲ್ಲಿ ಮೈಮೇಲೆ ಆನೆ ಹತ್ತಿ ಇಳಿದರೂ ಎಚ್ಚರವಾಗದಷ್ಟು ಸುಖವಾಗಿ ಮಲಗಿ ನಿದ್ರಿಸುತ್ತಿದ್ದೇನಲ್ಲಾ ಅಂತ ನಗು ಬಂದಿತ್ತು. ನಿದ್ರೆಯನ್ನು ಬಲಿಗೊಟ್ಟು ಮಾಡುವ ಯಾವುದೇ ಕೆಲಸಗಳು ಒಳ್ಳೆಯದಲ್ಲ ಹುಡುಗಿ ಎಂದು ಆಕೆಗೆ ಹೇಳಬೇಕೆನಿಸಿತು.

ಸ್ನೇಹಿತರ ಒತ್ತಾಯವೂ ಅಥವಾ ಹಾಗೆ ಸುಮ್ಮನೆಯೋ ಅಂತೂ ಇಂತೂ ಈ ಬಾರಿ ಸ್ವಲ್ಪ ಸೀರಿಯಸ್ ಆದ ವಿಷಯವೊಂದನ್ನು ಬರೆಯುತ್ತಿದ್ದೇನೆ. ಏನೇ ಬರೆದರೂ ಓದುಗರು ಅಷ್ಟೊಂದು ಸೀರಿಯಸ್ ಆಗಿ ತೆಗೆದುಕೊಳ್ಳುವುದಿಲ್ಲ ಎಂಬ ಭರವಸೆ ಇದೆ.

ನಿಮಗೆ ಅಪ್ಘಾನಿಸ್ತಾನ ಗೊತ್ತಲ್ಲ. ಅಲ್ಲಿನ ಒಬ್ಬ ಬ್ಲಾಗರ್ ಕುರಿತು ಈ ಕಥೆ. ಈ ಬ್ಲಾಗರ್ ಹೆಸರು ನಸೀಮ್ ಫೆಕ್ರತ್. ಪೆಕ್ರತ್‌ಗೆ ಈಗ ಇಪ್ಪತ್ತೈದು ವರ್ಷ. ಸ್ವಯಂ ತರಬೇತಿ ಪಡೆದ ಪತ್ರಕರ್ತ. ಅಪ್ಘನ್ ಮಾಧ್ಯಮಗಳು ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿರುವಾಗ ಆತ ತನ್ನ ದೇಶದ ನಿಜವಾದ ಅವಸ್ಥೆಯನ್ನು ಬ್ಲಾಗಿನ ಮೂಲಕ ಜಗತ್ತಿಗೆ ತೆರೆದಿಡುತ್ತಿದ್ದಾನೆ. ನಮ್ಮ ನಿಮ್ಮ ಹಾಗೆ ಆತನದು ಸಾಮಾನ್ಯ ಬ್ಲಾಗ್ ಅಲ್ಲ. ಅದೊಂದು ಪ್ರತಿಭಟನೆಯ ಅಸ್ತ್ರ. ಒಂದು ಪತ್ರಿಕೆ, ಒಂದು ಚಾನೆಲ್ ಮಾಡದ ಕೆಲಸವನ್ನು ಪೆಕ್ರತ್ ಮಾಡುತ್ತಿದ್ದಾನೆ. ವಿದ್ಯುತ್ ಇಲ್ಲದ ರಾತ್ರಿಗಳಲ್ಲಿ ತನ್ನ ಕಾರಿನ ಬ್ಯಾಟರಿಯಿಂದ ಲಾಪ್‌ಟಾಪ್‌ಗೆ ವಿದ್ಯುತ್ ಪೂರೈಸಿಕೊಂಡು ಆತ ಪ್ರಖರ ಬರಹಗಳನ್ನು ಬರೆಯುತ್ತಿದ್ದಾನೆ. ಆತನ ಬ್ಲಾಗ್ ಬರಹಗಳು ಎಷ್ಟೊಂದು ಪರಿಣಾಮಕಾರಿಯಾಗಿವೆಯೆಂದರೆ ಅದು ಅಲ್ಲಿನ ಅಧ್ಯಕ್ಷ ಹಮೀದ್ ಕರ್ಜಾಯಿಗೂ, ಮೂಲಭೂತವಾದಿ ಮುಲ್ಲಾಗಳಿಗೂ ಬಿಸಿ ಮುಟ್ಟಿಸಿದೆ. ಇಷ್ಟೇ ಆಗಿದ್ದರೆ ಅಲ್ಲಿನವರು ಸುಮ್ಮನಿರುತ್ತಿದ್ದರು, ಆದರೆ ಪೆಕ್ರತ್ ಅಫ್ಘನ್ ಬ್ಲಾಗ್ ರೈಟರ್ಸ್ ಅಸೋಸಿಯೇಷನ್ ಪ್ರಾರಂಭಿಸಿದ್ದಾನೆ. ದಕ್ಷಿಣ ಕಾಬೂಲ್‌ನಲ್ಲಿ ಒಂದು ಕಚೇರಿ ಸ್ಥಾಪಿಸಿ ಅಲ್ಲಿ ಯುವಕ ಯುವತಿಯರಿಗೆ ಬ್ಲಾಗ್ ಬರಹಗಳನ್ನು ಹೇಗೆ ಬರೆಯಬೇಕೆಂದು ತರಬೇತಿ ನೀಡುತ್ತಿದ್ದಾನೆ. ಪೆಕ್ರತ್‌ನ ಕುರಿತು ಸ್ಲೇಟ್.ಕಾಂನಲ್ಲಿ Meet Afghanistan's Most Fearless Blogger ಅಂತ ಒಂದು ಸುದ್ದಿ ಪ್ರಕಟವಾಗಿತ್ತು.

ಅಫ್ಘಾನಿಸ್ತಾನವನ್ನೂ, ಪೆಕ್ರತ್‌ನನ್ನು ಇಲ್ಲಿಗೆ ಬಿಡೋಣ. ಒಂದು ಬ್ಲಾಗ್‌ನಿಂದ ಏನೆಲ್ಲಾ ಕೆಲಸ ಮಾಡಬಹುದು ಎನ್ನುವುದಕ್ಕೆ ಇದೊಂದು ಸಣ್ಣ ಉದಾಹರಣೆಯಷ್ಟೇ. ಇದೀಗ ಅಂತರ್ಜಾಲದಲ್ಲಿ ಕನ್ನಡ ತೀವ್ರಗಾಗಿ ಬೆಳೆಯುತ್ತಿರುವುದು, ದಿನವೂ ಮೂರರಿಂದ ನಾಲ್ಕು ಹೊಸ ಕನ್ನಡ ಬ್ಲಾಗುಗಳು ಹುಟ್ಟಿಕೊಳ್ಳುತ್ತಿರುವುದು, ಜನರು ಹೊಸ ಹೊಸ ವಿಷಯಗಳ ಕುರಿತು ಚರ್ಚೆ ನಡೆಸುತ್ತಿರುವುದು, ಪ್ರತಿಕ್ರಿಯಿಸಿಕೊಳ್ಳುತ್ತಿರುವುದು ಎಲ್ಲಾ ಎಷ್ಟು ಒಳ್ಳೆಯ ಬೆಳವಣಿಗೆ ಎಂದೆನಿಸುತ್ತಿದೆ. ಅಂದಹಾಗೆ ಮತ್ತೊಂದು ಸುದ್ದಿಯೂ ಇದೆ ಕೆಳೆದೆರಡು ವರ್ಷಗಳ ಹಿಂದಿನವರೆಗೆ ಒಟ್ಟು ಬಂಧಿತರಾಗಿರುವ ಬ್ಲಾಗಿರರ ಸಂಖ್ಯೆ ಅರವತ್ಮೂರು. ಹೆಚ್ಚಿನ ಸಂಖ್ಯೆಯ ಬ್ಲಾಗಿಗರು ಬಂಧನಕ್ಕೊಳಗಾಗಿರುವುದು ಚೀನಾ, ಈಜಿಪ್ಟ್, ಮತ್ತು ಇರಾನ್‌ನಲ್ಲಿ. ಇವರಲ್ಲಿ ಹೆಚ್ಚಿನವರು ಸರಕಾರದ ಭ್ರಷ್ಟಾಚಾರದ ವಿರುದ್ಧ ಬರೆದವರು. ಸಾರ್ವಜನಿಕ ನೀತಿಗಳ ವೈಫಲ್ಯವನ್ನು ಖಂಡಿಸಿದವರು. ಮಾನವಹಕ್ಕುಗಳ ಉಲ್ಲಂಘನೆಯ ವಿರುದ್ಧ ಅಕ್ಷರ ಸಮರ ನಡೆಸಿದವರು.

ಬಂಧನಕ್ಕೊಳಗಾಗುವಂತೆ ಬರೆಯುವ ಬ್ಲಾಗಿಗರು ಯಾರೂ ನಮ್ಮ ಕನ್ನಡದಲ್ಲಿ ಇಲ್ಲ ಎನ್ನುವುದೇ ಸದ್ಯದ ಸಮಾಧಾನ. ಇಲ್ಲದಿದ್ದರೆ ಅದಕ್ಕೊಂದು ಕಾನೂನು ರಚಿಸುವುದು ನಮ್ಮ ಸರಕಾರಕ್ಕೆ ದೊಡ್ಡ ತಲೆನೋವಾಗುತ್ತಿತ್ತು. ಬ್ಲಾಗಿನಲ್ಲಿ ಬರೆದುದ್ದಕ್ಕೆ ಇದುವರೆಗೆ ನೀಡಲಾಗಿರುವ ದೊಡ್ಡ ಶಿಕ್ಷೆಯೆಂದರೆ ಎಂಟು ವರ್ಷಗಳ ಜೈಲು ವಾಸ. ಇದನ್ನೆಲ್ಲಾ ಓದಿದ ಮೇಲೆ ನಿಮಗೂ ಸೀರಿಯಸ್ ಆಗಿ ಏನನ್ನಾದರೂ ಬರೆಯಬೇಕು ಎನಿಸಿದರೆ ಖಂಡಿತ ಬರೆಯಿರಿ.

Monday, 23 June, 2008

ಮಳೆ ಮತ್ತು ನಾನು


ಕಳೆದವಾರ ಊರಿಗೆ ಹೋಗಿದ್ದೆ. ಊರಲ್ಲಿ ಸಿಕ್ಕಾಪಟ್ಟೆ ಮಳೆ. ಹೊರಗೆ ಮಳೆ ಸುರಿಯುತ್ತಿದ್ದರೆ ಒಳಗೆ ಕುಳಿತುಕೊಂಡು ಅಮ್ಮ ಹಳೆಯ ಕಥೆಗಳನ್ನು ಹೇಳುತ್ತಿದ್ದರು. ಈ ಎಲ್ಲಾ ಕಥೆಗಳ ಅಲ್ಪಸ್ವಲ್ಪ ಭಾಗಗಳು ನನಗೆ ಗೊತ್ತಿದ್ದರೂ ಅದನ್ನು ಅಮ್ಮನ ಬಾಯಿಯಿಂದ ಕೇಳುವುದೇ ಬೇರೆಯ ತರನಾದ ಅನುಭವ. ಅಮ್ಮ ಮಾತಿಗೆ ಭಾವ ತುಂಬುತ್ತಾಳೆ. ಪಾತ್ರಕ್ಕೆ ಜೀವ ತುಂಬುತ್ತಾಳೆ. ಹಾಗಾಗಿ ಕೆಲವು ಘಟನೆಗಳು ನನಗೆ ಗೊತ್ತಿದ್ದರೂ ನಾನು ಏನೂ ಗೊತ್ತಿಲ್ಲದವನಂತೆ ಹೌದಾ? ಯಾವಾಗ ಆಯಿತು? ಮುಂದೆ? ಎಂದೆಲ್ಲಾ ಮತ್ತೆ ಮತ್ತೆ ಕೇಳುತ್ತಾ ಒಳಗೊಳಗೇ ಖುಷಿಪಡುತ್ತಿರುತ್ತೇನೆ. ನನ್ನ ತಂಗಿ ಮಾತ್ರ ಅಮ್ಮಾ, ಇದೆಲ್ಲಾ ಅಣ್ಣನಿಗೆ ಗೊತ್ತಿರುವ ಕಥೆಗಳೇ, ನೀನೇ ಎಷ್ಟು ಬಾರಿ ಹೇಳಿದ್ದೀಯಾ ಎನ್ನುತ್ತಾಳೆ. ಅಮ್ಮ ಮಾತ್ರ ಸ್ವಲ್ಪವೂ ಬೇಸರಿಸಿಕೊಳ್ಳದೆ, ತನ್ನ ಬಾಲ್ಯಕಾಲ, ತಾನು ಶಾಲೆಗೆ ಹೋಗಿದ್ದು, ಭಯಂಕರ ಮಳೆಗಾಲದಲ್ಲಿ ಅಪ್ಪನನ್ನು ಮದುವೆಯಾಗಿ ಈ ಊರಿಗೆ ಬಂದದ್ದು, ಆಗಿದ್ದ ಬಡತನ ಎಲ್ಲವನ್ನೂ ಹೇಳಿ ಹಗುರಾಗುತ್ತಾಳೆ.

ನಾನು ಓದಿದ್ದು ಒಂದು ಪುಟ್ಟ ಸರಕಾರಿ ಶಾಲೆಯಲ್ಲಿ. ಶಾಲೆ ಅನ್ನುವುದಕ್ಕೆ ಅಲ್ಲಿ ಏನೂ ಇರಲಿಲ್ಲ, ಮಣ್ಣಿನ ಇಟ್ಟಿಗೆಯಿಂದ ಕಟ್ಟಿದ ಎರಡು ಕೋಣೆಗಳು. ಮಳೆ ಬಂದಾಗ ಮೇಲಿದ್ದ ಮಂಗಳೂರು ಹಂಚು ಸೋರುತ್ತಿತ್ತು. ನಾವು ಮಣ್ಣಿನ ನೆಲದ ಮೇಲೆ ಹಲಗೆಮಣೆಯ ಮೇಲೆ ಕೂರುತ್ತಿದ್ದೆವು. ಮಳೆ ಜೋರಾದಂತೆ ನೀರು ತರಗತಿ ಕೋಣೆಯೊಳಕ್ಕೆ ಬರುತ್ತಿತ್ತು. ಹೆಚ್ಚೂ ಕಡಿಮೆ ಮಳೆಗಾಲದಲ್ಲಿ ಶಾಲೆಗೆ ರಜೆ. ಒಮ್ಮೊಮ್ಮೆ ಇರುವ ಸರಕಾರಿ ಬಸ್ಸು ರಸ್ತೆ ಪಕ್ಕ ಕೆಟ್ಟು ನಿಂತೋ, ಅಥವಾ ನಾವು ಹೊಳೆ ದಾಟಲು ಬಳಸುತ್ತಿದ್ದ ಮರದ ಶಂಖ ತೇಲಿಹೋಗಿಯೋ ಹೆಚ್ಚೂ ಕಡಿಮೆ ಮಳೆಗಾಲದಲ್ಲಿ ನಾವು ಮನೆಯಲ್ಲಿಯೇ ಉಳಿಯುವಂತಾಗುತ್ತಿತ್ತು. ಇಂತಹ ಮಳೆಗಾಲದ ದಿನಗಳಲ್ಲಿ ಅಡಿಕೆಗೆ ತಟ್ಟಿಯ ಕೆಳೆಗೆ ಬೆಂಕಿ ಹಚ್ಚಿ ಅಪ್ಪನೋ, ಅಮ್ಮನೋ ನನಗೆ ಅವರ ಬಾಲ್ಯದ ಕಥೆಗಳನ್ನು ಹೇಳುತ್ತಿದ್ದರು. ಇಂತಹ ಕಥೆಗಳು ಕೇವಲ ಕಥೆಗಳಾಗಿ ಉಳಿಯದೇ, ಅದರಲ್ಲಿನ ಪಾತ್ರಗಳು ತುಂಬಾ ಜೀವನಾನುಭವನ್ನು ಹೊಂದಿರುತ್ತಿದ್ದರಿಂದ ಅವುಗಳು ಈಗಲೂ ನನ್ನ ಮನಸ್ಸಿನಲ್ಲಿ ಅಚ್ಚೊತ್ತಿವೆ.

ಪ್ರತಿ ಮಳೆಗಾಲ ಬಂದಾಗಲೂ ನನಗೆ ಇಂತಹ ಹಲವು ಕಥೆಗಳು, ಘಟನೆಗಳು ನನೆಪಿಗೆ ಬರುತ್ತದೆ. ನಮ್ಮೂರಿನದೇ ಕೆಲವು ಪಾತ್ರಗಳು ಅವರ ಹಾವಭಾವಗಳು, ನಾನು ಪ್ರಯಾಣಿಸುತ್ತಿದ್ದ ಸರಕಾರಿ ಬಸ್ಸು, ಅದರ ಕಲಾಲ್ ಎಂಬ ಕೆಂಡೆಕ್ಟರ್, ಮಳೆಗಾಲದಲ್ಲಿ ಸೀರೆ ಮೇಲೆತ್ತಿ ಕಷ್ಟ ಪಟ್ಟು ಗದ್ದೆ ಬದುವಿನ ಮೇಲೆ ನಡೆದು ಬರುತ್ತಿದ್ದ ಕಾವೇರಿ ಟೀಚರ್, ಎಷ್ಟು ತೆಳ್ಳನೆಯ ಎಷ್ಟು ಉದ್ದನೆಯ ಅಡಿಕೆ ಮರವಾದರೂ ಅದರ ತುತ್ತತುದಿಗೆ ಹತ್ತಿ ಗೊನೆ ಇಳಿಸುತ್ತಿದ್ದ ಸಣಕಲು ಕೇಶವ ಭಟ್ಟರು, ಒಂದು ರೂಪಾಯಿಗೆ ಇಪ್ಪತೈದು ನಿಂಬೆಹುಳಿ ಪೆಪರ್‌ಮಿಂಟ್ ಎಣಿಸಿ ಕೊಡುತ್ತಿದ್ದ ಕುಲಕರ್ಣಿ ಅಂಗಡಿಯ ಸೀತಜ್ಜಿ, ಒಮ್ಮೊಮ್ಮೆ ಶಾಲೆ ಬಿಟ್ಟು ಮನೆಗೆ ಹೊರಡುವುದು ಲೇಟಾಯಿತೆಂದರೆ, ಹಸಿವಾಗಿದೆಯಾ ಕಂದಾ ಎಂದು ಅಂಗಡಿಯೊಳಗೆ ಕರೆದು ಬೊಂಡಾ ಹಾಗೂ ಚಹಾ ಕೊಟ್ಟು ಪ್ರೀತಿಯಿಂದ ತಲೆಸವರುತ್ತಿದ್ದ ತಡಿಕೆ ಹೊಟೇಲಿನ ಶಾಂತಮ್ಮ, ಇವರೆಲ್ಲರೂ ಈಗಲೂ ನನಗೆ ಏನೋ ಅಪರೂಪದ ಪಾತ್ರಗಳಾಗಿ, ನನೆಸಿಕೊಂಡಾಗೊಮ್ಮೆ, ಮನಸ್ಸಿನ ಒಳಗೊಳಗೇ ಸೇರಿಕೊಂಡು ಬಿಡುತ್ತಾರೆ.

ಊರಿಗೆ ಹೋದಾಗೊಮ್ಮೆ ಇವರನ್ನೆಲ್ಲಾ ಒಮ್ಮೆ ಭೇಟಿಯಾಗುವುದು, ಏನೋ ಗೊತ್ತಿಲ್ಲದವನಂತೆ ಅವರ ಬಾಯಿಯಿಂದ ಒಂದಿಷ್ಟು ಹಳೆಯ ಕಥೆಗಳನ್ನು ಕೇಳಿಸಿಕೊಳ್ಳುವುದು, ನಾನು ಕಲಿತ ಶಾಲೆಯಂಗಳದಲ್ಲಿ ಕಳ್ಳನಂತೆ ಓಡಾಡುವುದು, ಅಲ್ಲಿ ಇಲ್ಲಿ ಗುರುತು ಇಲ್ಲದವರನ್ನೂ ಗುರುತು ಹೆಚ್ಚಿ ಮಾತನಾಡಿಸಿ, ಕೊನೆಗೆ ನನ್ನ ಗುರುತು ಹೇಳದೆಯೇ ಹೊರಟು ಬರುವುದು ಇತ್ಯಾದಿಗಳನ್ನು ಮಾಡುತ್ತಿರುತ್ತೇನೆ. ಮೊನ್ನೆ ಹೀಗೆ ಮಳೆಸುರಿಯುವ ಹೊತ್ತಲ್ಲಿ ಶಾಲೆಯ ದಾರಿಯಲ್ಲಿ ನಡೆಯುತ್ತಿದ್ದೆ, ಥಟ್ಟನೆ ಎದುರಿಗೆ ಬಂದ ತಾಯಿಯೊಬ್ಬರು `ಏನ್ ತಮ್ಮಾ ನನ್ನ ಮಾತಾಡಿಸದೇ ಹಾಗೆ ಹೊರಟಿದ್ದೀಯಾ, ನಾನು ಯಾರು ಗೊತ್ತಾಯ್ತಾ? ಎಂದು ನನ್ನ ಮುಖವನ್ನು ತಮ್ಮ ಬೆಚ್ಚನೆಯ ಕೈಗಳಿಂದ ಸವರಿದರು. ನನಗಾದರೂ ಗಲಿಬಿಲಿ, ಯಾರಮ್ಮಾ ನೀನು ಎಂದು ಕೇಳಲು ಸಂಕೋಚ. ನನ್ನ ತಂಗಿ ಹುಟ್ಟಿದಾಗ ಆಸ್ಪತ್ರೆಯಲ್ಲಿದ್ದು ನೋಡಿಕೊಂಡವರು ಆಕೆ. ನನ್ನನ್ನು ಕರೆದುಕೊಂಡು ಹೋಗಿ ಅಲ್ಲೇ ಪಕ್ಕದಲ್ಲಿದ್ದ ಅಂಗಡಿ ಕಟ್ಟೆಯ ಮೇಲೆ ಕೂರಿಸಿ ಒಂದಿಷ್ಟು ಹೊತ್ತು ಮಾತನಾಡಿದರು. ನಂತರ ನನ್ನ ಬಾಲ್ಯಕಾಲದ ಕಿತಾಪತಿಗಳನ್ನು ಆ ಅಂಗಡಿಯವರಿಗೂ ಹೇಳಿ ನಕ್ಕರು. ಅಷ್ಟೊತ್ತಿಗೆ ಆ ಅಂಗಡಿಯವರೂ ನನ್ನ ಗುರುತುಹಿಡಿದು ಇತ್ತೀಚೆಗೆ ಟಿವಿಯಲ್ಲಿ ಬಂದವರು ನೀವೇ ಅಲ್ಲವಾ? ಓಯ್ ಗೊತ್ತಾಯ್ತು ಬಿಡಿ, ನೀವು ಕಲ್ಕೇರಿಯ ಇಂತವರ ಮಗ ಅಲ್ಲವಾ? ನಮಗೆ ಗೊತ್ತುಂಟು ಬಿಡಿ, ಎಂದು ನನ್ನ ಇತಿಹಾಸವೇ ತೆಗೆದ ಮೇಲೆ ಇನ್ನು ನನ್ನ ನಾಟಕ ಏನೋ ನಡೆಯುವುದಿಲ್ಲವೆಂದು ಗೊತ್ತಾಯ್ತು.

ಇಲ್ಲಿ ಮೈಸೂರಿನಲ್ಲಿ ಹೊರಗೆ ಮಳೆ ಸುರಿಯುತ್ತಿದ್ದರೆ ಒಳಗೆ ಕುಳಿತುಕೊಂಡು ಈ ಕಥೆಗಳನ್ನೆಲ್ಲಾ ನೆನಪು ಮಾಡಿಕೊಳ್ಳುತ್ತಾ ಬೆಚ್ಚಗಾಗುತ್ತಿರುತ್ತೇನೆ. ಸಣ್ಣಿಯಮ್ಮನ ಪ್ರೀತಿಯ ಮಾತು, ಆ ಅಂಗಡಿಯವರು ಮಾಡಿಕೊಟ್ಟ ಬಿಸಿ ಬಿಸಿ ಚಹಾ, ಈ ಮಳೆಗಾಲಕ್ಕೆ ಇನ್ನೇನು ಬೇಕು. ಬೇಸರವಾದರೆ ಒಮ್ಮೆ ಊರಿಗೆ ಓಡಿ ಹೋಗಿ ಅಮ್ಮನ ಹತ್ತಿರ ಇನ್ನೊಂದೆರಡು ಹಳೆಯ ಕಥೆ ಕೇಳಿಸಿಕೊಂಡರಾಯಿತು.

Monday, 26 May, 2008

ಅಲ್ಲಿಗೆ ಬಂದವರು ಇಲ್ಲಿಗೂ ಒಮ್ಮೆ ಬಂದು ಹೋಗಿ



ಒಂದಿಡಿ ರಾತ್ರಿ ವಿಚಾರ ಮಾಡಿದರೂ ಬ್ಲಾಗಿಗೆ ಹೊಸದಾಗಿ ಏನನ್ನು ಬರೆಯುವುದು ಎಂದು ಗೊತ್ತಾಗಲಿಲ್ಲ. ಏನಾದರೂ ಮಾಡಿ ಬ್ಲಾಗ್ ಅಫ್‌ಡೇಟ್ ಮಾಡಬೇಕಲ್ಲಪ್ಪಾ ಎಂದು ಚಿಂತಿದ್ದೇ ಆಯಿತು, ಏನೂ ಹೊಳೆಯಲಿಲ್ಲ. ಪರಿಚಿತರ ಬ್ಲಾಗಿಗೆಲ್ಲ ಭೇಟಿ ಕೊಟ್ಟು ನೋಡಿದೆ, ಅವರೆಲ್ಲಾ ತಿಂಗಳಿಗೊಂದಾದರೂ ಪೋಸ್ಟ್ ಹಾಕುತ್ತಾ ನನಗಿಂತ ಆದಾಗಲೇ ತುಂಬಾ ದೂರ ಹೋಗಿದ್ದರು. ಕೊನೆಯ ಬಸ್ಸಿಗೆ ಉಳಿದವನು ನಾನೊಬ್ಬನೇ. ಏನ್ರೀ ಬ್ಲಾಗಿಗೆ ಹೊಸದಾಗಿ ಏನೂ ಬರೆದಿಲ್ಲವಲ್ರೀ ಎಂದು ಸಹೋದ್ಯೋಗಿಗಳು ಕೇಳಿದರು. ಟೈಮಿಲ್ಲ ಎಂದು ಎಷ್ಟನೆಯ ಬಾರಿ ಸುಳ್ಳು ಹೇಳುವುದು, ಜನವರಿಯಲ್ಲಿ ಅಫ್‌ಡೇಟ್ ಆಗಿದ್ದು ಜೂನ್ ಆದರೂ ಹಾಗೇ ಇದೆಯೆಂದರೆ ನಿನ್ನ ಬ್ಲಾಗ್ ಪಂಚವಾರ್ಷಿಕ ಯೋಜನೆಯದಾ ಎಂದರು. ನಾನು, ತಡೀರಿ ಸಾರ್ ಇನ್ನೇನು ಹೊಸ ಭಾವ, ಹೊಸ ಬೆಡಗಿನೊಂದಿಗೆ ಬರಲಿದೆ ಎಂದು ಸಮರ್ಥನೆಯ ನಗು ಬೀರಿದೆ.


ಈ ಬ್ಲಾಗಮಂಡಲದ ದೊಡ್ಡ ಅಪಾಯವೆಂದರೆ ನಾವೇನಾದರೂ ಹೊಸ ಪೋಸ್ಟ್ ಹಾಕಲು ಎರಡು ಮೂರು ತಿಂಗಳು ತಡಮಾಡಿದರೆ ಉಳಿದ ಬ್ಲಾಗಿಗರು ನಮ್ಮನ್ನು ಗುಂಪಿನಿಂದ ನೋಟೀಸು ಕೂಡ ಕೊಡದೆ ಹೊರಹಾಕಿ ಬಿಡುತ್ತಾರೆ. ಕಳೆದ ಮೂರು ತಿಂಗಳಿಂದ ನನ್ನ ಸ್ಥಿತಿ ಹೆಚ್ಚೂ ಕಮ್ಮಿ ಹೀಗೇ ಇದೆ. ಯಾರೂ ನನ್ನ ಬ್ಲಾಗಿನಂಗಳಕ್ಕೆ ಬರುತ್ತಿಲ್ಲ, ಬರುತ್ತಿಲ್ಲ ಅಂದರೆ ನಾನು ಏನನ್ನೂ ಹೊಸದಾಗಿ ಬರೆದಿಲ್ಲ. ಉಳಿದಿರುವ ದಾರಿ ಒಂದೇ. ಹಳೆಯ ಲೇಖನಕ್ಕೆ ಬಂದ ಕಮೆಂಟುಗಳನ್ನೇ ನಾಲ್ಕೈದು ಬಾರಿ ಓದಿಕೊಳ್ಳುವುದು. ಹಾಗೆ ಓದಿದಾಗ ಸ್ಪಲ್ಪ ಸಮಾಧಾನವೆನಿಸಿತು. ಈ ಜಾಲಿಗರೆಲ್ಲ ಯಾವುದೋ ಒಂದು ಕಾಲದಲ್ಲಿ ಹತ್ತಿರದ ಸಂಬಂಧಿಗಳಾಗಿದ್ದರು ಎನ್ನುವುದು ನೆನಪಾಯಿತು. ಆದರೆ ಈಗ ನಮ್ಮ ಬ್ಲಾಗಿನ ಮೇಲಿನಿಂದಲೇ ಹಾರಿ ಪಕ್ಕದ ಬ್ಲಾಗಿನಲ್ಲಿ ಇಳಿದು ಕಮೆಂಟಿಸುವ ಇವರನ್ನು ಮುಂದೊಂದು ಕೈ ನೋಡಿಕೊಳ್ಳೋಣ ಎಂದು ಸುಮ್ಮನಾಗಿದ್ದೇನೆ. ಊರಿಗೆ ಬಂದವಳು ನೀರಿಗೆ ಬರೆದೆ ಇರುತ್ತಾಳೆಯೇ? ಓದುಗರನ್ನು ಉಳಿಸಿಕೊಳ್ಳಲು ನಾನೂ ಹಲವು ಕಸರತ್ತು ನಡೆಸಿದೆ. ಹೋಮ್‌ಪೇಜ್ ಬದಲಿಸಿದೆ. ಒಂದೆರಡು ಲಿಂಕ್ಸ್‌ಗಳನ್ನು ಹೆಚ್ಚಿಗೆ ಕೊಟ್ಟೆ. ಯಾರೂ ಪ್ರಲೋಭನೆಗೆ ಒಳಗಾಗಲಿಲ್ಲ. ಇವೆಲ್ಲಾ ಮಾಮೂಲಿ ಎಂಬಂತೆ ಕಿಟಕಿಯಲ್ಲಿ ನಕ್ಕರು.

ನೋಡಿದರೆ ನನಗೆ ಕವಿತೆ ಬರೆಯಲು ಬರುವುದಿಲ್ಲ. ಇಲ್ಲವಾದರೆ ಪುಟ್ಟ ಪುಟ್ಟ ಕವಿತೆಗಳನ್ನಾದರೂ ಬರೆದು ಬಿಟ್ಟ ಸ್ಥಳ ತುಂಬಿಸಬಹುದಿತ್ತು. ಕಥೆ ಬರೆಯೋಣವೆಂದರೆ ಆ ಸಾಹಸ ನೀನು ಮಾಡದಿರುವುದೇ ಒಳಿತು ಎಂದು ಒಬ್ಬರು ಬಾಯಿ ಮುಚ್ಚಿಸಿದರು. ವಿಮರ್ಶೆ, ಟಿಪ್ಪಣಿ ಇತ್ಯಾದಿ ಮಾಡೋಣವೆಂದರೆ ಈಗಾಗಲೇ ಬ್ಲಾಗಿನಲ್ಲಿ ಈ ಕುರಿತು ತೀವ್ರಗತಿಯ ಚರ್ಚೆಗಳು ನಡೆದು ಹಲವು ಸೃಜನಶೀಲ ಬ್ಲಾಗಿಗರು ಇಂತಹ ಅನಗತ್ಯ ಚರ್ಚೆಗಳಿಂದ ಬೇಸೆತ್ತು ಹೋಗಿದ್ದಾರೆ. ಸರಿ ಪ್ರವಾಸ, ಚಾರಣ ಅಂತ ಎಲ್ಲಿಗಾದರೂ ಹೋಗಿ ಬರೋಣವೆಂದರೆ ಅದಕ್ಕೆ ಟೈಮಿಲ್ಲ. ಮತ್ತೆ ಏನು ಬರೆಯೋದು? ಯಾಕೋ ಡಲ್ಲಾಗಿ ಕುಳಿತಿದ್ದ ಮೈಸೂರಿನ ಪೋಸ್ಟಿನ ಮಾಲೀಕರನ್ನು ಕೇಳಿದೆ. ಸಾರ್ ನೀವು ನಿಮ್ಮ ಬ್ಲಾಗಿಗೆ ಹೊಸದಾಗಿ ಏನಾದರೂ ಬರೆದಿದ್ದೀರಾ? ವಾರಕ್ಕೊಮ್ಮೆ ಲೇ ಔಟ್ ಚೇಂಜ್ ಮಾಡ್ತಾ ಇದ್ದೀನಿ ಎಂದರು. ಅರೆ! ಈ ಐಡಿಯಾ ನನಗೆ ಹೊಳದೇ ಇಲ್ಲವಲ್ಲಾ ಎನ್ನುತ್ತಾ, ಅವರ ಬ್ಲಾಗ್ ತೆರೆದು ನೋಡಿದೆ. ಅವರು ಕುಮಾರ ಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಬರೆದ ಲೇಖನಗಳಿದ್ದವು.


ಅಮೀರ್‌ಖಾನ್ ಖಾಹ್‌ರುಕ್ ಎಂಬ ನಾಯಿಯ ಬಗ್ಗೆ ಆತನ ಬ್ಲಾಗಿನಲ್ಲಿ ಬರೆದ ಲೇಖನಕ್ಕೆ ಏಳುಸಾವಿರದ ಐದುನೂರಕ್ಕೂ ಹೆಚ್ಚು ಕಮೆಂಟುಗಳು ಬರುತ್ತವೆ. ಕನ್ನಡದ ಬ್ಲಾಗಿಗರೆಲ್ಲರೂ ಸೇರಿ Hutch ನಾಯಿಯ ಬಗ್ಗೆ ಬರೆದರೂ ಈ ಪಾಟಿ ಪ್ರತಿಕ್ರಿಯೆಗಳು ಬರಲಿಕ್ಕಿಲ್ಲ. ಆದರೂ ಕನ್ನಡದಲ್ಲಿ ಚೆನ್ನಾಗಿ ಬರೆದು ಐವತ್ತು ಅರವತ್ತು ಕಮಂಟು ಗಿಟ್ಟಿಸುವ ಅಫ್‌ಡೇಟ್ ಬ್ಲಾಗಿಗರನ್ನು ನೋಡುವಾಗ ಸ್ವಲ್ಪ ಹೊಟ್ಟೆಕಿಚ್ಚು ಹುಟ್ಟುತ್ತದೆ. ಈ ಕಮೆಂಟು ಮಾಡುವಲ್ಲಿಯೂ ದೊಡ್ಡದೊಂದು ಲಾಭಿ ಇದೆ ಎಂದು ಪ್ರಗತಿಪರ ಬ್ಲಾಗಿಗರೊಬ್ಬರು ಇತ್ತೀಚೆಗೆ ಹೇಳಿದರು. ಅದರ ಸತ್ಯಾಸತ್ಯೆತೆ ಗೊತ್ತಿಲ್ಲ, ಈಗ ಚುನಾವಣೆಯ ಸಮಯವಾದ್ದರಿಂದ ಅನಕ ಪತ್ರಕರ್ತ ಬ್ಲಾಗಿಗರು ಪತ್ರಿಕೆಯ ಕೆಲಸಗಳಲ್ಲೇ ಬ್ಯುಸಿಯಾಗಿದ್ದಾರೆ. ಅಣ್ಣಗಳಿರಾ, ಅಕ್ಕಂದಿರಾ, ನನ್ನ ಬ್ಲಾಗ್ ಅಫ್‌ಡೇಟ್ ಆಗಿದೆ. ಮುಂದಿನ ಪೋಸ್ಟ್ ಬಹು ಬೇಗ ಹಾಕುತ್ತೇನೆ, ಎಲ್ಲಿಗೂ ಹೋಗಬೇಡಿ, ಅಲ್ಲಿಗೆ ಬಂದವರು ಇಲ್ಲಿಗೂ ಒಮ್ಮೆ ಬಂದು ಹೋಗಿ...

Tuesday, 20 May, 2008

ರೋಸ್ಮಿನ್ ಎಂಬ ಕಿಲಾಡಿಯ ನಾಲ್ಕು ಚಿತ್ರಗಳು








ಚಿತ್ರದಲ್ಲಿರುವ ಈ ಕಿಲಾಡಿಯ ಹೆಸರು ರೋಸ್ಮಿನ್. ನನ್ನ ಅಣ್ಣನ ಮಗಳು. ಮೂರು ವರ್ಷ ಮುಗಿಸಿ ನಾಲ್ಕಕ್ಕೆ ಹತ್ತಿರದಲ್ಲಿದ್ದಾಳೆ. ಟಿವಿಯಲ್ಲಿ ಯಾವಾಗಲೂ ಟಾಮ್ ಆಂಡ್ ಜೆರ್ರಿ ಬರುತ್ತಿರಬೇಕು ಎನ್ನುವುದು ಇವಳ ಹಠ. ಮನೆಯಲ್ಲಿ ಬೇರೆ ಯಾವ ಚಾನೆಲ್ ನೋಡಲು ಬಿಡುವುದಿಲ್ಲ. ರಿಮೋಟ್ ಅವಳ ಕೈಯಲ್ಲಿರಬೇಕು. ಈ ಬಾರಿ ಊರಿಗೆ ಹೋದಾಗ ನನ್ನ ಫೋಟೋ ತೆಗಿ ಅಂತ ತನ್ನ ಹುಳುಕು ಹಲ್ಲು ತೋರಿಸಿ ನಕ್ಕಿದ್ದಳು. ಕ್ಯಾಮರ ಕೈಗೆತ್ತಿಕೊಂಡು ಅವಳನ್ನು ಒಂದೆಡೆ ನಿಲ್ಲಿಸಲು ಪ್ರಯತ್ನ ಪಟ್ಟೆ. ಅವಳು ನಿಲ್ಲಲಿಲ್ಲ, ಅಂಗಳದಲ್ಲಿ ಓಡುತ್ತಲೇ ಇದ್ದಳು. ಓಟದ ನಡುವೆ ಕ್ಲಿಕ್ಕಿಸಿದ ಚಿತ್ರಗಳಿವು.

Friday, 21 March, 2008

ಯುನಿವರ್ಸಿಟಿಯ ಹೋಳಿಯೂ ಲಬೋ ಲಬೋ... ಅಳುವೂ..

ರಾತ್ರಿಯಿಡಿ ಉರಿಯುತ್ತಿದ್ದ ಕೊರಡಿನ ಬೆಂಕಿ ಬೆಳ್ಳಿಗ್ಗೆ ಹೊತ್ತಿಗೆ ಆರಿರುತ್ತಿತ್ತು. ಹಸಿರು ಲಂಟಾನ ಸೊಪ್ಪನ್ನು ಸೊಂಟಕ್ಕೆ ಸುತ್ತಿಕೊಂಡು, ಬೂದಿ ಬಳಿದು ಸಾಂಬಾ ನೃತ್ಯ ಮಾಡಿ ಮಲಗಿರುತ್ತಿದ್ದ ಹಾಸ್ಟೇಲಿನ ಪಡ್ಡೆ ಹುಡುಗರು ಮುಂಜಾನೆಯೇ ಎದ್ದು ಹಾಸ್ಟೇಲಿನ ಜವಾನನಿಗೆ ಮೊದಲು ಬಣ್ಣ ಮೆತ್ತುತ್ತಿದ್ದರು. ಇದ್ದಕ್ಕಿದಂತೆ ಹೀ..ಹೂ...ಕೇ..ಎಂದು ಪ್ರಾರಂಭವಾದ ಕೇಕೆಯಿಂದಲೇ ಹೋಳಿಯಾಟ ಪ್ರಾರಂಭವಾಗಿದೆ ಎಂಬ ಸುಳಿವು ಸಿಕ್ಕಿ, ಹಾಸ್ಟೇಲಿನ ಕೋಣೆಗಳಲ್ಲಿ ಕದವಿಕ್ಕಿಕೊಂಡು ಮಲಗಿರುತ್ತಿದ್ದ ಬಣ್ಣ ವಿರೋಧಿ ಹುಡುಗರು, ಕಿಟಕಿಯನ್ನೂ ಇನ್ನಷ್ಟು ಭದ್ರಪಡಿಸಿ, ಎರಡೆರಡು ಚಾದರ ಹೊದ್ದು ಮಲಗುತ್ತಿದ್ದರು. ಹೊರಗೆ ಬಾರಲೇs.. ಅವರ ರೂಮಿನ ಮುಂದೆ ನಿಂತು ಕಾಮಣ್ಣನ ಮಕ್ಕಳ ಲಬೋ ಲಬೋ ಎಂದು ಹೊಯ್ಕೊಳ್ಳುತ್ತಿದ್ದರೆ ಭೂಮಿ ಆಕಾಶ ಒಂದಾಗುತ್ತಿತ್ತು.

ಮಲಗಿದ್ದವರನ್ನು ಎಬ್ಬಿಸಿ, ತಲೆಗೆ ತಲಾ ಎರಡೆರಡು ಮೊಟ್ಟೆ ಹೊಡೆದು ಮುಖಕ್ಕೆಲ್ಲಾ ನಯವಾಗಿ ಸವರಿ ಒಂದಿಷ್ಟು ಬಣ್ಣದ ನೀರು ಸುರಿಯುತ್ತಿದ್ದಂತೆ ಹಾಸ್ಟೇಲ್ ಹುಡುಗರ ಹೋಳಿಯಾಟಕ್ಕೆ ರಂಗು ಮೂಡುತ್ತಿತ್ತು. ಹೀಗೆ ಪ್ರಾರಂಭವಾಗುತ್ತಿದ್ದ ಬಣ್ಣದೋಕುಳಿ ಎಂಟು ಗಂಟೆಯ ವೇಳೆಗಾಗಲೇ ಇಡಿ ವಿಶ್ವವಿದ್ಯಾಲಯವನ್ನು ಬಣ್ಣದಲ್ಲಿ ಅದ್ದಿ ನಿಗಿನಿಗಿ ಹೊಳೆಯುವಂತೆ ಮಾಡುತ್ತಿತ್ತು. ನ್ಯೂಜಿ ಪಿ.ಜಿಯಿಂದ ಧನು, ಶ್ಯಾಮ ಬಣ್ಣದೊಂದಿಗೆ ಓಡಿ ಬರುವ ವೇಳಗೆ ನಾನೊಂದು ಹಳೆಯ ದೊಗಳೆ ಶರ್ಟ್ ಹಾಕಿ ಬರ್ರೀ.. ಮಕ್ಕಳಾ... ಎನ್ನುವ ಗೆಟಪ್ಪಿನಲ್ಲಿ ಕಾದಿರುತ್ತಿದ್ದೆ. ನಂತರ ಭೀಮಾ ಹಾಗೂ ನ್ಯೂಪಿಜಿ ಹಾಸ್ಟೇಲ್‌ನವರು ಒಂದುಗೂಡಿ ಡೊಳ್ಳುಬಾರಿಸುತ್ತಾ, ವಾಣಿ ಅಂಗಡಿಯ ಹತ್ತಿರ ಬರುವ ವೇಳಗೆ ಶ್ಯಾಲ್ಮಲಾ ಹಾಗೂ ನಿಜಲಿಂಗಪ್ಪ ಹಾಸ್ಟೆಲಿನ ಹುಡುಗರು ಸೇರಿರುತ್ತಿದ್ದರು. ನಂತರ ಹೊರಡುತ್ತಿತ್ತು ಮೆರವಣಿಗೆ. ಸುಮಾರು ಒಂದು ಸಾವಿರದ ಹತ್ತಿರ ಹತ್ತಿರ ಹುಡುಗರು. ಮೊದಲು ಹೋಗುತ್ತಿದ್ದದ್ದು ಆಯಾ ವಿಭಾಗಗಳ ಉಪನ್ಯಾಸಕರುಗಳ ಮನೆಗೆ, ನಂತರ ಹಾಸ್ಟೇಲಿನ ನಿಲಯ ಪಾಲಕರ ಮನೆಗೆ.


ಸಾಮಾನ್ಯವಾಗಿ ನಾಲ್ಕು ಗಳಗಳ ಒಂದು ಚಟ್ಟವನ್ನು ಮಾಡಿ, ಅದಕ್ಕೆ ಮಡಿಕೆಯೊಂದನ್ನು ತೂಗು ಬಿಟ್ಟು, ಸುತ್ತಲೂ ಸೊಪ್ಪು ಕಟ್ಟಿ ಅದ ಮೇಲೆ ಮೇಲೆ ಒಬ್ಬನನ್ನು ಸತ್ತವನಂತೆ ಮಲಗಿಸಿಕೊಂಡು ಹೋಗಿ ಮಾಸ್ತರರ ಮನೆಯಂಗಳದಲ್ಲಿ ಮಲಗಿಸುತ್ತಿದ್ದೆವು. ಸರss ಇಂಟರ್ನಲ್ ಮಾರ್ಕ್ಸ್ ಕೊಡ್ಲಿಲ್ಲ ಅಂತ, ನಿಮ್ಮ ಹೆಸರು ಬರೆದಿಟ್ಟು ಸತ್ತ ಹೋಗ್ಯಾನ ನೋಡ್ರೀ.. ಮಣ್ಣು ಮಾಡೋಕೆ ರೊಕ್ಕಾ ಕೊಡ್ರೀ.. ಎಂದು ಕೋಗಲು ಸುರುಹಚ್ಚಿಕೊಳ್ಳುತ್ತಿದ್ದರು. ಹಿಂದೆ ನಿಂತಿರುತ್ತಿದ್ದ ಸಾವಿರಾರು ಹುಡುಗರು ಲಯಬದ್ದವಾಗಿ ಲಬೋ... ಲಲೋ.... ಹೊಯ್ಕೊಳ್ಳುತ್ತಿದ್ದರು. ಹೆಚ್ಚಿನ ಉಪನ್ಯಾಸರು ರೊಕ್ಕ ಬಿಚ್ಚುತ್ತಿರಲಿಲ್ಲ. ಐದೋ ಹತ್ತೋ ಕೊಟ್ಟು ಸಾಗಹಾಕಲು ಮುಂದೆ ಬರುತ್ತಿದ್ದರು. ಆಗ ಪ್ರಾರಂಭವಾಗುತ್ತಿತ್ತು ಬೈಗುಳ.. ಮಾಸ್ತರ ಒಂದು ವಾರ ಕಿವಿ ತೊಳಕೋಬೇಕು, ಅಂಥಾ ನಮೂನಿ ಇರತ್ತಿದ್ದವು. ನಲವತ್ತು ಸಾವಿರ ಪಗಾರ ತಕೋತಿಯಲ್ಲೋ.. ನಾಚಿಕೆ ಆಗೋದಿಲ್ಲೇನೋ.... ತಾವು ಕಲಿಸಿದ ವಿದ್ಯಾರ್ಥಿಗಳ ಬಾಯಿಯಿಂದಲೇ ತಮ್ಮ ಮರ್ಯಾದೆ ಬೀದಿ ಪಾಲಾಗುವುದರ ಮೊದಲೇ ಇನ್ನೊಂದೆರಡು ನೋಟುಗಳನ್ನು ತೆಗೆದು ಸತ್ತವನ ಚಟ್ಟದ ಮೇಲೆ ಹಾಕುತ್ತಿದ್ದರು. ಅವನು ಇದ್ದಕ್ಕಿದ್ದಂತೆ ಎದ್ದು ಮಾಸ್ತರನ್ನು ಅಪ್ಪಿ ಹಿಡಿದು, ಹ್ಯಾಪಿ ಹೋಳಿ ಸಾರ್ ಎನ್ನುತ್ತಾ ಬಣ್ಣ ಮೆತ್ತುತ್ತಿದ್ದ. ಉಳಿದವರು ಮಾಸ್ತರನ್ನು ವಿಚಾರಿಸಿಕೊಂಡು ಬಿಡುವ ಹೊತ್ತಿಗೆ ಅವರು ನೀರಿನಲ್ಲಿ ಮುಳುಗಿದ ಕೋಳಿಯ ತರ ಆಗಿರುತ್ತಿದ್ದರು. ಮನೆಯೊಳಗಿನ ಕಿಟಿಕಿಯ ಸಂಧಿಯಿಂದ ಮಾಸ್ತರರ ಹೆಂಡತಿ ಹಾಗೂ ಮಕ್ಕಳು ಮನೆಯೊಳಗೆ ಸದಾ ಹುಲಿ ತರ ಇರುತ್ತಿದ್ದ ಮಾಸ್ತರನ್ನು ವಿದ್ಯಾರ್ಥಿಗಳು ಪ್ರೀತಿಸುವ ಪರಿ ನೋಡಿ ನಗುತ್ತಿದ್ದರು.


ಆದರೆ ನಮಗೆ ಕಲಿಸುತ್ತಿದ್ದ ಮಾಸ್ತರುಗಳ ಮನೆಗಳಿಗೆ ಹೋಗುವಾಗ ಮಾತ್ರ ನಾವು ಗುಂಪಿನಲ್ಲಿ ಹಿಂದಿರುತ್ತಿದ್ದೆವು. ಎಷ್ಟೇ ಬಣ್ಣ ಹಚ್ಚಿಕೊಂಡಿದ್ದರೂ, ಎಲ್ಲಿ ಗೊತ್ತಾದರೆ ನಾಳೆ ಇಂಟರ್‌ನೆಲ್ ಮಾರ್ಕ್ಸಗೆ ಕುತ್ತು ಎಂದು ಬಣ್ಣ ಹಚ್ಚಲು ಹೋಗುತ್ತಿರಲಿಲ್ಲ. ಆದರೆ ಆ ಕೆಲಸವನ್ನು ಉಳಿದ ಡಿಪಾರ್ಟ್‌ಮೆಂಟಿನ ಹುಡುಗರಿಗೆ ಹೇಳಿ ಮಾಡಿಸುತ್ತಿದ್ದೆವು. ಬಿಡಬೇಡ್ರಲೇ ಈ ಮಾಸ್ತರನ್ನು ಬಣ್ಣದಾಗ ಕೆಡವಿ ಎನ್ನುತ್ತಿದ್ದೆವು. ಅವರ ಮಾಸ್ತರುಗಳಿಗೆ ನಾವು ಬಣ್ಣ ಬಳಿಯುತ್ತಿದ್ದೆವು. ನಂತರ ವಾಣಿ ಅಂಗಡಿಗೆ ಬಂದು ಆಕೆಗೆ ಬಣ್ಣ ಹಚ್ಚುವ ನೆಪದಲ್ಲಿ ಅಂಗಡಿಯ ಹೊರಗಿರುತ್ತಿದ್ದ ಎಳೆನೀರು, ಬಾಳೆಹಣ್ಣನ್ನು ಸ್ವಾಹ ಮಾಡುತ್ತಿದ್ದೆವು.


ನಂತರ ಸ್ವಲ್ಪ ಸುಧಾರಿಸಿಕೊಂಡು ವಿಶ್ವವಿದ್ಯಾಲಯ ಸುಂದರಿಯರು ವಾಸಿಸುತ್ತಿದ್ದ ಲೇಡೀಸ್ ಹಾಸ್ಟೇಲ್ ಹತ್ತಿರ ಹೆಜ್ಜೆ ಹಾಕುತ್ತಿದ್ದೆವು. ಅಕ್ಕಮಹಾದೇವಿ, ಕಿತ್ತೂರು ಚೆನ್ನಮ್ಮ, ವರ್ಕಿಂಗ್ ವುಮೆನ್ಸ್ ಹಾಸ್ಟೇಲ್‌ನ ಹುಡುಗಿಯರು ಕೋಣೆಯೊಳಗೇ ಬಣ್ಣ ಆಡುತ್ತಾ ಹೊರಬರಲಾಗಾದೆ ಚಟಪಡಿಸುತ್ತಿದ್ದರು. ಹುಡುಗರನ್ನು ನೋಡಿದ ಕೂಡಲೇ ಕಿಟಕಿಯೊಳಗಿನಿಂದ ನೋಡುತ್ತಾ, ಕೈಬೀಸಿ ಹ್ಯಾಪಿ ಹೋಳಿ ಎಂದು ವಿಶ್ ಮಾಡುತ್ತಿದ್ದರು. ಕೆಲವು ಹುಡುಗರು ಹಾಸ್ಟೇಲ್ ಎದುರಿನ ರಸ್ತೆಯಲ್ಲಿ ಮಲಗಿ, ಅವಳು ಬರದಿದ್ದರೇ ನಾನು ಹೋಗುವುದೇ ಇಲ್ಲ ಎಂದು ಹಠ ಹಿಡಿದ ಭಂಗಿಯಲ್ಲಿ ಮಲಗುತ್ತಿದ್ದರು. ವಿವಿಯಲ್ಲಿ ಸ್ವಲ್ಪ ಫೇಮಸ್ ಇರುತ್ತಿದ್ದ ಹುಡುಗಿಯರ ಹೆಸರನ್ನು ಕೋಗಿ ಹೇಳುತ್ತಾ ನೀನೇ ನನ್ನ ಜೀವಾ, ನೀನೇ ನನ್ನ ಪ್ರಾಣ ಎಂದೆಲ್ಲಾ ವಿರಹಗೀತೆ ಹಾಡಲು ಪ್ರಾರಂಭಿಸುತ್ತಿದ್ದರು. ಬಣ್ಣ ಮೆತ್ತಿಕೊಂಡು ಎಷ್ಟು ವಿಕಾರವಾಗಿ ಕಾಣಿಸಲು ಸಾಧ್ಯವೋ ಹಾಗಿರುವುದು ಹಾಗೂ ಲಬೋ ಲಬೋ ಎಂದು ಒಂದೇ ಸಮನೆ ಹೊಯ್ಕೊಳ್ಳುವುದು ಆಚರಿಸಿಕೊಂಡು ವಿವಿಯಲ್ಲಿ ಬಹಳ ವರ್ಷಗಳಿಂದ ಆಚರಿಸಿಕೊಂಡು ಬಂದ ಸಂಪ್ರದಾಯ. ಯಾರಿಗೂ ಯಾರ ಮುಖವೂ ಗೊತ್ತು ಹತ್ತುತ್ತಿರಲಿಲ್ಲ. ಇದು ಅತಿರೇಖಕಕ್ಕೆ ಹೋಗುವ ಮೊದಲು ಪೊಲೀಸರು ಬರುತ್ತಿದ್ದರು!


ಲೇಡೀಸ್ ಹಾಸ್ಟೇಲಿನಿಂದ ಹೊರಟ ಮೆರವಣಿಗೆ ಶ್ರೀನಗರ ಸರ್ಕಲ್‌ನಲ್ಲಿ ಕೊನೆಗೊಳ್ಳುತ್ತಿತ್ತು. ಶ್ರೀನಗರ ಸರ್ಕಲ್‌ನ ಫೇಮಸ್ ಫೊಟೋಗ್ರಾಫರ್ ಹುಡುಗರ ಬೆದರಿಕೆಗೆ ಹೆದರಿ ಸುಮ್ಮನೆ ಪ್ಲಾಶ್ ಮಾಡುತ್ತಿದ್ದ. ಒಳಗೆ ರೀಲ್ ಇರುತ್ತಿರಲಿಲ್ಲ. ನಂತರ ಅಲ್ಲೇ ಅಕ್ಕಪಕ್ಕದ ಓಣಿಗಳಿಗೆ ನುಗ್ಗಿ, ಎದುರಿಗೆ ಬಂದವರಿಗೆ ಬಣ್ಣ ಹಚ್ಚಿ, ಮಡಿಕೆ ಹೊಡೆಯಲು ಹೋಗುತ್ತಿದ್ದೆವು. ಮಡಿಕೆ ಹೊಡೆದು ಮತ್ತೆ ಶ್ರೀನಗರ ಸರ್ಕಲ್‌ಗೆ ಬಂದು ಸಂಗ್ರಹವಾಗಿರುತ್ತಿದ್ದ ದುಡ್ಡಿನಲ್ಲಿ ಕಬ್ಬಿನಹಾಲೋ ಎಳೆನೀರೋ ಕುಡಿಯುತ್ತಿದ್ದೆವು. ವಾಪಾಸ್ಸು ರೂಮು ಸೇರುವ ಹೊತ್ತಿಗೆ ಮೂರುಗಂಟೆ ಆಗುತ್ತಿತ್ತು. ಬಣ್ಣ ಮತ್ತಿರುತ್ತಿದ್ದ ಕೂದಲು ಸುತ್ತಿಗೆ ಏಟಿಗೂ ಬಗ್ಗದಂತೆ ಒಣಗಿ ನಿಂತಿರುತ್ತಿದ್ದವು. ಕಣ್ಣಲ್ಲಿ ಸಿಕ್ಕಾಪಟ್ಟೆ ಉರಿ ಉರಿ.. ಮೈಗೆ ಮತ್ತಿದ ಬಣ್ಣವನ್ನು ತಿಕ್ಕಿ ತೊಳೆಯಲು ಎಲ್ಲಾ ತರಹದ ಶಾಂಪೂ ಪ್ರಯೋಗ ನಡೆಯುತ್ತಿತ್ತು. ನಂತರ ಶ್ಯಾಲ್ಮಲಾ ಹಾಸ್ಟೇಲಿಗೆ ಹೋಗಿ ಪ್ರತೀಕನ ರೂಮಿನಲ್ಲಿ ಫಿಲಂ ನೋಡುತ್ತಿದ್ದೆವು. ಸಂಜೆ ಹೊತ್ತಿಗೆ ಕಣ್ಣಿಗೆ ಮಂಪು ಆವರಿಸಿ ಅಲ್ಲೇ ಅಡ್ಡಾಗುತ್ತಿದ್ದೆವು.


ಈವತ್ತು ಮೈಸೂರಿನಲ್ಲಿ ಹೋಳಿಯಂತೆ. ಹೊರಗಿಳಿದು ನೋಡಿದರೆ ಎಲ್ಲಿಯೂ ಬಣ್ಣ ಹಚ್ಚಿದ ಮುಖಗಳೇ ಕಾಣಲಿಲ್ಲ. ಮೈಸೂರಿನಲ್ಲಿ ಹೋಳಿ ಹೇಗಿರುತ್ತದೆ ಎಂದು ಕುತೂಹಲದಿಂದ ಕಾದಿದ್ದ ನನಗೆ ಭಾರಿ ನಿರಾಶೆಯೇ ಆಯಿತು. ದಿನವಿಡೀ ಸಂಕಟಪಟ್ಟೆ. ಧಾರವಾಡದ ಸ್ನೇಹಿತರು ಬಣ್ಣ ಆಡೋಣ ಬಾ ಅಂತ ಕರೆದಿದ್ದರು. ಮೊದಲೇ, ಇಲ್ಲಿ ಹೀಗಂತ ಗೊತ್ತಿದ್ದರೆ ಎರಡು ದಿವಸ ರಜೆ ಹಾಕಿ ಹೋಗಿ ಬರಬಹುದಿತ್ತು ಅಂತ ಚಡಪಡಿಸುತ್ತಿದ್ದೇನೆ.


ರಾಜೇಂದ್ರ ಚೆನ್ನಿಯವರು ಕೆಂಡಸಂಪಿಗೆಯಲ್ಲಿ ಬರೆದ ಧಾರವಾಡದ ಹೋಳಿಯ ಬಣ್ಣಗಳ ಹುಚ್ಚು ಹೊಳೆ ಓದಿ ಒಂದಿಷ್ಟು ಸಮಾಧಾನಪಟ್ಟೆ...

Wednesday, 12 March, 2008

ಬಾಲ್ಯದ ನೆನಪುಗಳು - 1, ಅಪ್ಪ, ಫಿಲಿಪ್ ರೇಡಿಯೋ ಮತ್ತು ಎಮ್‌.ಆರ್.ಬೀಡಿ


ನನ್ನ ಅಪ್ಪ ಒಬ್ಬ ಸಾಮಾನ್ಯ ರೈತ. ಅಪ್ಪನಿಗೆ ಮೂರು ವರ್ಷ ಇರುವಾಗ ಅಜ್ಜ ತೀರಿಕೊಂಡರು. ಮನೆಯಲ್ಲಿ ಬಡತನವಿತ್ತು. ಆದ್ದರಿಂದ ಚೆನ್ನಾಗಿಯೇ ಓದುತ್ತಿದ್ದ ಅಪ್ಪನ ಓದು ಅರ್ಧಕ್ಕೇ ನಿಂತಿತು. ಮುಂದಿನದು ದುಡಿಮೆಯ ಬದುಕು. ಒಬ್ಬ ಸಾಮಾನ್ಯ ರೈತನ ಲೋಕಜ್ಞಾನ ಎಷ್ಟು ವಿಶಾಲವಾಗಿರುತ್ತದೆ ಎನ್ನುವುದನ್ನು ನಾನು ಅಪ್ಪನಿಂದ ಕಲಿತಿದ್ದೇನೆ. ಆತನ ಹೆಗಲ ಮೇಲೆ ಕುಳಿತು ಅಂಗನವಾಡಿಗೆ ಹೋಗುತ್ತಿದ್ದ ದಿನಗಳಿಂದ ಹಿಡಿದು, ಇಂದಿನವರೆಗೆ ಬದುಕಿನೆಡೆಗೆ ಆತನಿಗಿರುವ ಶ್ರದ್ಧೆಯನ್ನೂ, ಪ್ರಾಮಾಣಿಕತೆಯನ್ನೂ ಪುಟ್ಟ ಅಚ್ಚರಿಯಿಂದಲೇ ಗಮನಿಸುತ್ತಾ ಬಂದಿದ್ದೇನೆ.

ಅಪ್ಪನನ್ನು ನೆನೆಯುವಾಗ ನನ್ನ ಬಾಲ್ಯವೂ ನೆನಪಾಗುತ್ತದೆ. ಬಾಲ್ಯದಲ್ಲಿ ಒಂದಿಷ್ಟು ಬೆಚ್ಚನೆಯ ಭಾವಗಳಿವೆ. ಹೇಳಿಕೊಳ್ಳುವಂತ ವಿಶೇಷ ಏನಿರದಿದ್ದರೂ, ಇದನ್ನೆಲ್ಲಾ ಸುಮ್ಮನೆ ಒಂದೆಡೆ ಬರೆದಿಡಬೇಕು ಎನಿಸುತ್ತದೆ. ಮೊದಲ ಮಳೆ ಸುರಿಯುವಾಗ ಹನಿಗಳನ್ನು ಬೊಗಸೆಯಲ್ಲಿ ಹಿಡಿಯಲು ಅಂಗಳಕ್ಕೆ ಓಡುವ ತುಂಟ ಮಗುವಿನಂತೆ, ಅದರ ಮುಗ್ದತೆಯಂತೆ ನನ್ನ ಬಾಲ್ಯಕಾಲದ ದಿನಗಳನ್ನು ಇಲ್ಲಿ ಕೆಲವು ಕಂತುಗಳಲ್ಲಿ ಬರೆಯಬೇಕೆಂದು ವಿಚಾರ ಮಾಡಿದ್ದೇನೆ. ಹಾಗೆ ವಿಚಾರ ಮಾಡಿದ ನಂತರ ಬರೆದ ಮೊದಲ ಕಂತು ಇದು. ಮೆಲ್ಲಗೆ ಸುರಿಯುವ ಮಳೆಹನಿ ನಿಮಗೆ ಇಷ್ಟವಾದರೆ ಎರಡು ಸಾಲು ಬರೆಯಿರಿ.

ಅಪ್ಪ, ಫಿಲಿಪ್ ರೇಡಿಯೋ ಮತ್ತು ಎಮ್‌.ಆರ್.ಬೀಡಿ

ಇಂದು ನಮ್ಮ ಮನೆಯ ಹಾಲ್‌ನಲ್ಲಿ ಬಣ್ಣದ ಪ್ಲಾಟ್ ಟಿವಿ ಇದೆ. ಆದರೆ ಇಂದಿಗೆ ಹತ್ತು ವರ್ಷಗಳ ಹಿಂದೆ ಅದಿರಲಿಲ್ಲ. ಅದರ ಬದಲಿಗೆ ಹಳೆಯ ಮನೆಯಲ್ಲಿ ಮಣ್ಣಿನ ಗೋಡೆಗೆ ಮೊಳೆ ಹೊಡೆದು ಒಂದು ಫಿಲಿಫ್ ರೇಡಿಯೋ ತೂಗು ಹಾಕಿದ್ದರು. ಗಾತ್ರದಲ್ಲಿ ಸಿಮೆಂಟ್ ಇಟ್ಟಿಗೆಯಷ್ಟಿದ್ದ ಆ ರೇಡಿಯೋ ಒಂದೇ ಸಮನೆ ಹಾಡುತ್ತಿದ್ದ ನೆನಪು. ಅಮ್ಮ ರೇಡಿಯೋ ಮುಟ್ಟಲು ಹೋಗುತ್ತಿರಲಿಲ್ಲ. ಹೋದರೆ ಇರುವ ಸ್ಟೇಷನ್‌ಗಳೆಲ್ಲಾ ದಿಕ್ಕುತಪ್ಪಿ ಗುಡುಗು ಮಳೆ ಸುರಿಯುತ್ತಿತ್ತು. ಅಪ್ಪನ ಸಿಟ್ಟು ಮಿಂಚಿನಂತೆ ಏರುತ್ತಿತ್ತು.

ಅಪ್ಪ ರೇಡಿಯೋ ಆರಿಸುತ್ತಿದ್ದದ್ದು ರಾತ್ರಿ 11 ಗಂಟೆಯ ನಂತರ. ಎಂಟು ಗಂಟೆಗೆ ಪ್ರಸಾರವಾಗುತ್ತಿದ್ದ ರೇಡಿಯೋ ನಾಟಕವನ್ನು ಕೇಳಿ ಅಪ್ಪ ಊಟ ಮಾಡುತ್ತಿದ್ದರು. ತೋಟದ ಕೆಲಸ ಮಾಡುವಾಗಲೂ ರೇಡಿಯೋವನ್ನು ಬದುವಿನ ಮೇಲಿರಿಸಿ ಚಿತ್ರಗೀತೆಗಳನ್ನು ಕೇಳುತ್ತಿದ್ದರು. ಆದರೆ ಅಪ್ಪನಿಗೆ ಹಾಡುಗಳಿಗಿಂತ ಇಷ್ಟವಾಗುತ್ತಿದ್ದದ್ದು ವಾರ್ತೆಗಳು. ವಾರ್ತೆಗಳನ್ನು ಕೇಳಿ ತನ್ನದೇ ಜ್ಞಾನದ ಪರಿಧಿಯೊಳಗೆ ಸರಳೀಕರಿಸಿ ನನಗೆ ಹೇಳುತ್ತಿದ್ದರು. ನಾನಾಗ ಮೂರನೆಯೋ ನಾಲ್ಕನೆಯೋ ಕ್ಲಾಸಿಗೆ ಹೋಗುತ್ತಿದ್ದೆ. ಅಪ್ಪ ತೋಟಕ್ಕೆ ಹೊರಟರೆ, ನಾನೂ ಒಂದು ಚಿಕ್ಕ ಕತ್ತಿ ಹಿಡಿದು ಹಿಂದೆ ಹೊರಡುತ್ತಿದ್ದೆ. ನನ್ನ ಮುಖ್ಯ ಕೆಲಸ ತೋಟದಲ್ಲಿ ಬಿದ್ದಿರುವ ಅಡಿಕೆಯ ಸೋಗೆಗಳನ್ನು ಒಂದೆಡೆ ಜೋಡಿಸಿಡುವುದು. ನಂತರ ಹಣ್ಣಾಗಿ ಉದುರಿ ಬಿದ್ದಿರುವ ಅಡಿಕೆಗಳನ್ನು ಹೆಕ್ಕಿ ಬುಟ್ಟಿಗೆ ಹಾಕುವುದು. ನಡುನಡುವೆ ರೇಡಿಯೋಗೆ ಬಿಸಿಲು ತಾಗದಂತೆ ಸ್ಥಳಾಂತರ ಮಾಡುವುದು.

ರೇಡಿಯೋ ಅಪ್ಪನ ಜೀವನಾಡಿಯಾಗಿತ್ತು. ವಿಶೇಷ ಆದರಕ್ಕೂ ಪಾತ್ರವಾಗಿತ್ತು. ರೇಡಿಯೋಗೆ ಹಾಕುವ ಬ್ಯಾಟರಿಗೆ ಚಾರ್ಜ್ ಖಾಲಿಯಾದರೆ, ಅಪ್ಪ, ಟಾರ್ಚ್‌ಗೆ ಹಾಕಿರುತ್ತಿದ್ದ ಶೆಲ್‌ಗಳನ್ನು ತೆಗೆದು ಹಾಕುತ್ತಿದ್ದರು. ಟಾರ್ಚ್‌ನ ಶೆಲ್ ರೇಡಿಯೋಗೆ, ರೇಡಿಯೋದ ಶೆಲ್ ಟಾರ್ಚ್‌ಗೆ ಮತ್ತೆ ಮತ್ತೆ ಬದಲಾವಣೆಯಾಗುತ್ತಲೇ ಇರುತ್ತಿತ್ತು. ಅಪ್ಪ ರೇಡಿಯೋ ಕೇಳುತ್ತಾ ಮಾಡುತ್ತಿದ್ದ ಮತ್ತೊಂದು ಕೆಲಸವೆಂದರೆ ಬೀಡಿ ಸೇದುವುದು. ಅದು ಎಮ್‌.ಆರ್. ಬೀಡಿ. ಮಂಗಳೂರಿನಿಂದ ಬರುತ್ತಿತ್ತು. ಆಗಿನ ಕಾಲಕ್ಕೆ ಸ್ಟಾಂಡರ್ಡ್ ಎಂದು ಕರೆಸಿಕೊಂಡಿತ್ತು. ಆ ಬ್ರಾಂಡ್ ಬಿಟ್ಟರೆ ಅಪ್ಪ ಬೇರಾವ ಬೀಡಿಯನ್ನೂ ಮುಟ್ಟುತ್ತಿರಲಿಲ್ಲ ಅನಿಸುತ್ತದೆ. ಒಂದು ದಿನಕ್ಕೆ ಎರಡರಿಂದ ಮೂರು ಕಟ್ ಎಮ್‌.ಆರ್ ಬೀಡಿಗಳನ್ನು ಅನಾಮತ್ತಾಗಿ ಎಳೆದು ಬೀಸಾಕುತ್ತಿದ್ದ ಅಪ್ಪ, ಅದರ ಮೊಂಡು ತುಣುಕುಗಳನ್ನು ಅಂಗಳದಲ್ಲಿ ಎಸೆಯುತ್ತಿದ್ದರು. ಕಸ ಗುಡಿಸಲು ಅಮ್ಮ ಬಂದಾಗ ಬೀಡಿ ಹಾಗೂ ಬೆಂಕಿ ಕಡ್ಡಿಯ ನೂರಾರು ತುಂಡುಗಳನ್ನು ನೋಡಿ, ಬೀಡಿ ಸೇದುವ ಊರಿನ ಗಂಡಸರಿಗೆಲ್ಲಾ ಬೈಯುತ್ತಿದ್ದಳು. ಇದಕ್ಕೆ ಕಾರಣವೂ ಇತ್ತು. ನಮ್ಮೂರಿನಲ್ಲಿ ಯಾರ ಬಳಿ ಬೀಡಿ ಖಾಲಿಯಾದರೂ ನಮ್ಮಪ್ಪನ ಹತ್ತಿರ ಇರುತ್ತಿತ್ತು. ಬೀಡಿ ಸಾಲ ಕೇಳಲು ಬಂದವರೆಲ್ಲಾ, ಎರಡೆರಡು ಪುಕ್ಕಟೆ ಬೀಡಿ ಸೇದಿ ಅಂಗಳದಲ್ಲಿ ಬೀಡಿಯ ಬೂದಿಯಿಂದ ರಂಗವಲ್ಲಿ ಹಾಕಿ ಹೋಗುತ್ತಿದ್ದರು.

ಆಗ ನಾವು ಲೆಮನ್ ಗ್ರಾಸ್ ಎಂಬ ತೈಲದ ಹುಲ್ಲು ಬೆಳೆಯುತ್ತಿದ್ದೆವು. ತಿಂಗಳಿಗೊಮ್ಮೆ ಹುಲ್ಲನ್ನು ಕತ್ತರಿಸಬೇಕಿತ್ತು. ಹುಲ್ಲು ಕತ್ತರಿಸುವ ದಿನಗಳಲ್ಲಿ ಅಪ್ಪ-ಅಮ್ಮನಿಗೆ ಅಹೋರಾತ್ರಿ ಕೆಲಸ. ಅಮ್ಮ ತಲೆಗೊಂದು ಟವಲು ಕಟ್ಟಿಕೊಂಡು ಇತರೆ ಕೆಲಸದ ಹೆಂಗಸರೊಂದಿಗೆ ಸಿಸರ್ಲಾ ಎಂದು ಕರೆಯುತ್ತಿದ್ದ ಆ ಹುಲ್ಲನ್ನು ಕತ್ತರಿಸುತ್ತಿದ್ದರು. ಅಪ್ಪ ಪಕ್ಕದ ಕಾಡಿನಿಂದ ಒಣ ಮರದ ದಿಮ್ಮಿಗಳನ್ನು ಎತ್ತಿ ತಂದು ಕುದಿಯುತ್ತಿರುವ ಬಾಯ್ಲರ್ ಕೆಳಗಿನ ಬೆಂಕಿಗೆ ದೂಡುತ್ತಿದ್ದರು. ಬೆಂಕಿಯ ಕಾವು ಹೆಚ್ಚಿದಂತೆ ಎಣ್ಣೆ ಆವಿಯ ರೂಪದಲ್ಲಿ ಹೊರಬಂದು ತೊಟ್ಟಿಕ್ಕುತ್ತಾ ಪಾತ್ರೆಯೊಳಗೆ ಬೀಳುತ್ತಿತ್ತು. ಬಂಗಾರ ವರ್ಣದ ಎಣ್ಣೆ ನೀರಿನ ಮೇಲೆ ತೇಲುತ್ತಾ, ಊರಿಗೆಲ್ಲಾ ಸುವಾಸನೆ ಹೊರಡಿಸುತ್ತಿತ್ತು. ಈ ರೀತಿ ಹುಲ್ಲು ಬೇಯಿಸುವ ರಾತ್ರಿಗಳಲ್ಲಿ ನಾನೂ ಅಪ್ಪನೊಂದಿಗೆ ಭಟ್ಟಿಮನೆ ಎಂದು ಕರೆಯುತ್ತಿದ್ದ ಈ ಸ್ಥಳಕ್ಕೆ ಹೋಗುತ್ತಿದ್ದೆ. ಕಟ್ಟಿಗೆಯನ್ನು ಬೆಂಕಿಯೊಳಗೆ ದೂಡಲು ಒಂದು ಉದ್ದನೆಯ ಕೂಲನ್ನು ಅಪ್ಪ ಬಳಸುತ್ತಿದ್ದರು. ಅದರ ತುದಿಯಿಂದ ನಿಗಿನಿಗಿಸುತ್ತಿರುವ ಕೆಂಡವನ್ನು ಹೊರಗೆಳೆದು ಬೀಡಿ ಹಚ್ಚಿಕೊಳ್ಳುತ್ತಿದ್ದರು. ಆ ರೀತಿ ಅಪ್ಪ ಬೀಡಿ ಸೇದುವುದನ್ನು ನೋಡುವುದೇ ಒಂದು ಸೊಗಸಾಗಿತ್ತು. ನಾನು ಕಣ್ಣು ಮಿಟುಕಿಸದೆ ನೋಡುತ್ತಾ ಕೂರುತ್ತಿದ್ದೆ. ಈ ಬೀಡಿ ಸೇದುವುದೂ ಒಂದು ಕಲೆಯೆಂದೇ ಆಗ ನಾನು ಭಾವಿಸಿದ್ದೆ.

ಲೆಮನ್‌ಗ್ರಾಸ್ ಹುಲ್ಲಿನ ಅಂಚು ಗರಗಸದಂತೆ ಮೊನುಚಾಗಿರುತ್ತದೆ. ಭಟ್ಟಿಮನೆಯಲ್ಲಿ ಮಲಗುವ ರಾತ್ರಿಗಳಲ್ಲಿ ಈ ಹುಲ್ಲು ಮೈಗೆ ಸೋಕಿದಾಗ ತುರಿಕೆ ಪ್ರಾರಂಭವಾಗುತ್ತಿತ್ತು. ಭಟ್ಟಿಮನೆಗೆ ಮೇಲ್ಛಾವಣಿ ಇರಲಿಲ್ಲ. ಭಟ್ಟಿಮನೆಯಲ್ಲಿ ಮಲಗಿ ಆಗಸದಲ್ಲಿ ಮಿಂಚುಹುಳದಂತೆ ಮಿಂಚುತ್ತಾ ಹೋಗುವ ಜೆಟ್ ವಿಮಾನಗಳನ್ನು ನೋಡುವುದು ನನಗಿಷ್ಟದ ಕೆಲಸವಾಗಿತ್ತು. ಆ ಸುಖದೊಳಗೆ ತುರಿಕೆ ಎನ್ನುವುದು ಮರೆತು ಹೋಗುತ್ತಿತ್ತು. ಅಪ್ಪ ಮಾತ್ರ ರೇಡಿಯೋ ಕೇಳುತ್ತಾ, ಬೆಂದ ಹುಲ್ಲನ್ನು ಬಾಯ್ಲರ್‌ನಿಂದ ಹೊರಗೆಳೆದು ಹಾಕುತ್ತಿದ್ದ. ನಾನು ರಾತ್ರಿ ಟಾರ್ಚ್ ಬೆಳಗಿಸುತ್ತಾ, ಜೋರಾಗಿ ಹಾಡು ಹೇಳುತ್ತಾ, ಮನೆಗೆ ಹೋಗಿ ಬುತ್ತಿ ತರುವ ಹೊತ್ತಿಗೆ, ಅಪ್ಪ ಹೊಸದಾಗಿ ಹಸಿ ಹುಲ್ಲು ತುಂಬಿ, ಗೆದ್ದಲು ಹುತ್ತದ ಅಂಟು ಮಣ್ಣನ್ನು ಬಾಯ್ಲರ್‌ನ ವೃತ್ತಾಕಾರದ ಮುಚ್ಚಳದ ಸುತ್ತ ಸವರಿ, ಬಿಗಿಯಾಗಿ ಮುಚ್ಚಿರುತ್ತಿದ್ದ. ನಂತರ ಆರು ಗಂಟೆಗಳ ಕಾಲ ಬೆಂಕಿ ನೋಡಿಕೊಳ್ಳುವ ಕೆಲಸ ನನ್ನದು. ದಣಿವರಿಯದ ಕೆಲಸಗಾರನಾಗಿದ್ದ ಅಪ್ಪ, ಯಾವಾಗಾದರೊಮ್ಮೆ ದೇಹಕ್ಕೊಂದಿಷ್ಟು ವಿಶ್ರಾಂತಿ ಪಡೆಯಲು ಹಳೆಯ ಈಚಲು ಮರದ ಚಾಪೆಗೆ ಮೈಯಾನಿಸಿದರೆ ಆತನಿಗೆ ಜೊಂಪು ಹತ್ತುತ್ತಿತ್ತು. ಮಧ್ಯೆ ಅದ್ಯಾವ ಹೊತ್ತಿನಲ್ಲಿ ಎದ್ದು ಹೋಗಿ ಕಟ್ಟಿಗೆಯನ್ನು ಹೊಡೆದು ಹಾಕುತ್ತಿದ್ದನೋ ನನಗೆ ಶಬ್ದವೂ ಕೇಳಿಸದಷ್ಟು ನಿದ್ರೆ.

ಹೀಗೆ ಒಂದು ದಿನ ಭಟ್ಟಿಮನೆಯ ಕಂಬಕ್ಕೆ ನೇತು ಹಾಕಿದ್ದ ಫಿಲಿಫ್ ರೇಡಿಯೋ ಕಳಗೆ ಬಿದ್ದು ಹಾಡು ನಿಲ್ಲಿಸಿತು. ಅಪ್ಪ ಅದನ್ನು ಬಲು ಸಂಕಟದಿಂದಲೇ ಭಟ್ಕಳದ ರಿಪೇರಿ ಅಂಗಡಿಯೊಂದಕ್ಕೆ ದಾಖಲಿಸಿದರು. ರಿಪೇರಿ ಮಾಡುವವನು ಏನು ಮಾಡಿದನೋ ಏನೋ? ರೇಡಿಯೋ ಮೊದಲಿನಂತೆ ಹಾಡಲೇ ಇಲ್ಲ. ಜಪಾನ್ ಮೇಡ್ ಆಗಿದ್ದ ಅದರಿಂದ ಯಾವುದೇ ಒಂದು ವಸ್ತುವನ್ನು ರಿಪೇರಿ ಮಾಡುವಾತ ಎಗರಿಸಿದ್ದಾನೆ ಎನ್ನುವುದು ಅಪ್ಪನ ವಾದವಾಗಿತ್ತು. ಮನೆಗೆ ಬಂದ ಒಂದು ತಿಂಗಳಲ್ಲೇ ಶಾಶ್ವತವಾಗಿ ರೇಡಿಯೋ ಕಾಯಿಲೆ ಬಿತ್ತು. ಹೊಸದೊಂದು ರೇಡಿಯೋ ತರಲು ಹಣ ಹೊಂದಿಸಲು ಮತ್ತೆ ಅಪ್ಪ ಒಂದು ವರ್ಷ ಕಾಯಬೇಕಾಯಿತು.
ಈಗ ಅಪ್ಪ ಬೀಡಿ ಸೇದುವುದನ್ನು ಬಿಟ್ಟಿದ್ದಾನೆ.. ಮೂವತ್ತು ವರ್ಷದಿಂದ ಸತತವಾಗಿ ಬೀಡಿ ಸೇದುತ್ತಿದ್ದ ವ್