ಮೂರು ಜನ ನಿರೂಪಕರು ಏಕಕಾಲಕ್ಕೆ ಒಂದು ಕಾರ್ಯಕ್ರಮವನ್ನು ನಡೆಸಿಕೊಡುವುದನ್ನು ನೋಡಿದ್ದೀರಾ? ನೋಡದಿದ್ದರೆ ತಕ್ಷಣವೇ ನೋಡಿ ಸುವರ್ಣ ನ್ಯೂಸ್!. ನೇರ, ದಿಟ್ಟ, ನಿರಂತರ ಚಾನೆಲ್ನಿಂದ ಭಟ್ಟರು ಎದ್ದು ಹೋದ ಮೇಲೆ, ಆ ಜಾಗಕ್ಕೆ ಬಂದವರು ಎಚ್.ಆರ್ ರಂಗನಾಥ್. ಅವರು ಬಂದ ಮೇಲೆ, ಸುವರ್ಣ ತನ್ನ ಹಳೆಯ ಪಳೆಯುಳಿಕೆಗಳನ್ನು ಕಿತ್ತೆಸೆದು ಒಂದಿಷ್ಟು ಹೊಸತನ ಕೊಡಬಹುದು ಎಂಬ ಭ್ರಮೆ ಇಟ್ಟುಕೊಂಡವರಲ್ಲಿ ನಾನೂ ಒಬ್ಬ. ಸದ್ಯಕ್ಕಂತೂ ಇದು ಬದಲಾಗುವ ಲಕ್ಷಣ ಕಂಡು ಬರುತ್ತಿಲ್ಲ.
ಒಂದೆಡೆ ತಾವೇ ಪ್ರಶ್ನೆ ಕೇಳಿ ತಾವೇ ಉತ್ತರ ಹೇಳಿ, ತಾವೇ ತೀರ್ಪು ಕೊಡುವ ರಂಗನಾಥ್ ಭಾರದ್ವಾಜ್, ಇನ್ನೊಂದೆಡೆದೆ ಚಕ್ರವ್ಯೂಹದ ಹ್ಯಾಂಗೋವರ್ನಿಂದ ಹೊರಬರಲಾಗದಂತೆ ಕಾಣುವ ಹಮೀದ್. ಮತ್ತೊಂದೆಡೆ ತಮ್ಮ ಮಾತು ಮತ್ತು ಕೈಸನ್ನೆಗಳ ಮೂಲಕ ಇಡಿ ಟಿವಿ ಪರದೆಯನ್ನು ಸದ್ಯಕ್ಕೆ ಬೇರೆ ಯಾರಿಗೂ ಬಿಟ್ಟುಕೊಡದಂತೆ ಕಾಣುವ ಎಚ್.ಆರ್ ರಂಗನಾಥ್. ಇವರು ಮೂವರು ಸೇರಿ ಸುವರ್ಣದಲ್ಲಿ ವಿಶೇಷ ಕಾರ್ಯಕ್ರಮ ನಡೆಸಿಕೊಡುತ್ತಿದ್ದರೆ, ಆ ಕಾರ್ಯಕ್ರಮಕ್ಕೆ ಮಾತನಾಡಲೆಂದು ಬಂದ ಅತಿಥಿಗಳು ಇನ್ನೇನು ಮಾಡಬೇಕು? ಸುಮ್ಮನೆ ಕೂತಿರಬೇಕು! ಸುವರ್ಣ ಚಾನೆಲ್ಗೆ ಸದ್ಯಕ್ಕಂತೂ ಇದರಿಂದ ಒಂದು ದೊಡ್ಡ ಲಾಭವಿದೆ. ಯಾವುದೇ ಚರ್ಚೆ ನಡೆದರೂ ಹೊಸದಾಗಿ ಗೆಸ್ಟ್ ಕರೆಸಬೇಕಂತಿಲ್ಲ.
‘ಜಾಣನಲ್ಲದವನ ಮಾತು ಯಾರಿಗೂ ರುಚಿಸುವುದಿಲ್ಲ. ಹೇಳುವುದಕ್ಕೆ ತಕ್ಕುದಲ್ಲದ ಅನುಭವ ಕೇಳುವನ ಆಸಕ್ತಿ ಕೆರಳಿಸುವುದಿಲ್ಲ’ ಎನ್ನುವುದನ್ನು ಈಗಿನ ಸುವರ್ಣ ನ್ಯೂಸ್ನ ಮುಖ್ಯಸ್ಥರು ಇನ್ನಷ್ಟು ಜಾಣತನದಿಂದ ಅರ್ಥ ಮಾಡಿಕೊಳ್ಳಬೇಕು. ಜಾಣ ಎಂದುಕೊಂಡು ಇಡಿ ಟಿವಿ ಪರದೆಯನ್ನು ತಾವೇ ಆಕ್ರಮಿಸಿಕೊಂಡು ಕುಳಿತರೆ ಅದೇ ಆ ಚಾನೆಲ್ಗೆ ಮುಳುವಾಗುತ್ತದೆ. ತೆರೆಯ ಹಿಂದೆ ನಿಂತು, ತೆರೆಯ ಮೇಲೆ ಹೇಗೆ ಕಾರ್ಯಕ್ರಮ ಓಡಬೇಕು ಎನ್ನುವುದನ್ನು ಮುಖ್ಯಸ್ಥರು ನಿರ್ಧರಿಸಬೇಕು. ಯಾವತ್ತೂ ಮುಖ್ಯಸ್ಥ ಟಿವಿ ಪರದೆಯ ಮೇಲೆ ಬಂದು ಗಂಟೆಗಟ್ಟಲೆ ಕುಳಿತುಕೊಳ್ಳಬಾರದು. ಅದನ್ನು ಗೀಳಾಗಿಯೂ ಇಟ್ಟುಕೊಳ್ಳಬಾರದು. ಈ ಹಿಂದೆ ಶಶಿಧರ ಭಟ್ಟರು ಸಂದರ್ಶನವನ್ನು ನಡೆಸಿಕೊಟ್ಟಂತೆ ಈಗ ಹೊಸ ಮುಖ್ಯಸ್ಥರು ಚರ್ಚೆ ನಡೆಸುತ್ತಿದ್ದಾರೆ. ಇದರಲ್ಲಿ ವ್ಯತ್ಯಾಸವೇನು? ನೋಡುಗರು ಟಿವಿ ಮುಂದಿನಿಂದ ಎದ್ದು ಓಡಿ ಹೋಗುವುದು ಮಾತ್ರ ಬಾಕಿ ಉಳಿದಿದೆ.
ಇದಿರಲಿ. ಟಿವಿಯಲ್ಲಿ ಬರುವಂತಹ ಇಂತಹ ಎಷ್ಟೋ ವಿಶೇಷ ಕಾರ್ಯಕ್ರಮಗಳಲ್ಲಿ ಹೆಚ್ಚಿನವು ಭಾಗವಹಿಸುವವರ ನಿಲುವುಗಳನ್ನು ಹೇಳಿಕೊಳ್ಳುವ ತಾಣಗಳಾಗುತ್ತದೆಯೇ ಹೊರತು, ಪರಸ್ಪರ ಚರ್ಚೆಯ ಮೂಲಕ ಸಾರ್ವತ್ರಿಕ ನಿಲುವುಗಳನ್ನು ರೂಪಿಸುವ ವೇದಿಕೆಯಾಗುವುದಿಲ್ಲ. ನಮ್ಮ ಕನ್ನಡ ಚಾನೆಲ್ಗಳಲ್ಲಂತೂ ಇತ್ತೀಚೆಗೆ ಇಂತಹ ಬರಿ ಮಾತಿನ ಮನೋರಂಜನೆ, ‘ವಿಶೇಷ ಕಾರ್ಯಕ್ರಮ’ ಎನ್ನುವ ಹೆಸರಿನಲ್ಲಿ ಸಾಕಷ್ಟು ಬರುತ್ತಿದೆ. ಒಮ್ಮೊಮ್ಮೆ ಈ ಮಾತು ಎಷ್ಟು ಕಳಪೆ ಮಟ್ಟಕ್ಕೆ ಹೋಗುತ್ತದೆಯೆಂದರೆ, ‘ನಿಮ್ಮ ಆಂತರಿಕ ಕಚ್ಚಾಟಗಳು ಈಗ ನಿಮಗೇ ಉಲ್ಟಾ ಹೊಡೆದಿದೆಯಾ? ಎಂದು ರಂಗನಾಥ್ ಭಾರದ್ವಾಜ್ ಯಾವ ಮುಜುಗರವೂ ಇಲ್ಲದೇ ನೇರವಾಗಿ ರಾಜಕೀಯ ಮುಖಂಡರೊಬ್ಬರಿಗೆ ಕೇಳುತ್ತಾರೆ. ನಂತರ ಅವರು ಉತ್ತರಿಸುವ ಮುನ್ನವೇ ತಾವೇ ಉತ್ತರವನ್ನೂ, ಅಂತಿಮ ತೀರ್ಪನ್ನೂ ಕೊಡುತ್ತಾರೆ. ’ಸುವರ್ಣ ಅಂತಿಮ ತೀರ್ಪು’ ಅಂತ ಒಂದು ಹೊಸ ಕಾರ್ಯಕ್ರಮ ಪ್ರಾರಂಭಿಸಿದರೆ ಅದಕ್ಕೆ ಈ ನಿರೂಪಕನನ್ನು ಕಣ್ಣು ಮುಚ್ಚಿ ಜಡ್ಜ್ ಆಗಿ ಮಾಡಬಹುದು.
ಟಿವಿ ಎನ್ನುವುದು ಒಂದು ಮಾಧ್ಯಮವೇ? ಇಲ್ಲ ಉದ್ಯಮವೇ? ಅಥವಾ ವ್ಯಾಪಾರವೇ? ಬಂಡವಾಳಶಾಹಿ ವ್ಯವಸ್ಥೆಯೇ? ಇತ್ಯಾದಿಗಳೆಲ್ಲ ಒಬ್ಬ ಸಾಮಾನ್ಯ ಮಧ್ಯಮ ವರ್ಗದ ವೀಕ್ಷಕನ ಅರಿವಿಗೆ ನಿಲುಕುವುದಿಲ್ಲ. ಆತ ಅದರ ಬಗ್ಗೆ ಎಲ್ಲ ತಲೆಕೆಡಿಸಿಕೊಳ್ಳಲು ಹೋಗುವುದಿಲ್ಲ. Tv9 ನಂತಹ ಚಾನೆಲ್ಗಳಿಗೆ ಇದೇ ಬಂಡವಾಳ. ಮಧ್ಯಮ ವರ್ಗದ ವೀಕ್ಷನಿಗೆ ಏನು ಬೇಕು ಎನ್ನುವುದನ್ನು ಈ ಚಾನೆಲ್ಗಳು ಚೆನ್ನಾಗಿ ಅರ್ಥ ಮಾಡಿಕೊಂಡಿದೆ. Tv9 ಕಟ್ಟಡದ ಮೇಲೆ ಒಂದು ಕಾಗೆ ಹಾರಿದರೂ ಅದಕ್ಕೆ ಅದು ಲೈವ್ ಸುದ್ದಿಯಾಗುತ್ತದೆ. ಇಬ್ಬರು ಕಾಗೆ ತಜ್ಞರನ್ನು ಸ್ಟುಡಿಯೋಗೆ ಕರೆಯಿಸಿ ಚರ್ಚೆ ನಡೆಸುವಷ್ಟರ ಮಟ್ಟಿಗೆ ಆ ಚಾನೆಲ್ ವೃತ್ತಿಪರತೆ ಹೊಂದಿದೆ. ಮೊನ್ನೆ ಇದೇ ಚಾನೆಲ್ ಪ್ರವಾಹ ಪೀಡಿತ ಪ್ರದೇಶದ ಐದು ಗ್ರಾಮಗಳನ್ನು ದತ್ತು ತೆಗೆದುಕೊಂಡಿತು. ಐದು ಗ್ರಾಮಗಳನ್ನು ಹೊಸದಾಗಿ ನಿರ್ಮಿಸುವುದೆಂದರೆ ಸುಲಭದ ಕೆಲಸವೇ? ಸಂಗ್ರಹವಾದ ಹಣ ಇದಕ್ಕೆ ಸಾಕಾಗುವುದಿಲ್ಲ ಎಂದು ತಿಳಿದದ್ದೇ ತಡ, ಹೊಸದೊಂದು ಐಡಿಯಾ ಪ್ರಯೋಗಿಸಿತು. ಐವತ್ತು ಸಾವಿರದ ಮೇಲೆ ದಾನ ಮಾಡುವರು ನೇರವಾಗಿ ಸ್ಟುಡಿಯೋಗೆ ಬಂದು ಮಾತನಾಡಬಹುದು ಎಂದರು. ಕಾರ್ಯಕ್ರಮ ಲೈವ್ ಬೇರೆ. ದುಡ್ಡು ಬರದೇ ಇರುತ್ತದೆಯೇ? ಪ್ರವಾಹವೂ ಲೈವ್, ಪರಿಹಾರವೂ ಲೈವ್. ಹೇಗಿದೆ?
ವಿದ್ಯುನ್ಮಾನ ಮಾತ್ರವಲ್ಲ ಮುದ್ರಣವೂ ಸೇರಿದಂತೆ ಇಂದು ಮಾಧ್ಯಮಗಳು ನಾಚಿಕೆಯಿಲ್ಲದಷ್ಟು ವಾಣಿಜ್ಯೀಕರಣಗೊಂಡಿದೆ. ಸಂಪಾದಕೀಯದ ಸ್ಥಳಗಳನ್ನೇ ಮಾರಲಾಗುವ ಇಂದಿನ ಕಾಲದಲ್ಲಿ ಪ್ರಿಂಟ್ ಪತ್ರಿಕೋದ್ಯಮವಂತೂ ಸಾರ್ವಜನಿಕ ಸಂಪರ್ಕ ವ್ಯವಸ್ಥೆಯ (ಪಿ.ಆರ್) ಕೈಗೊಂಬೆಯಾಗಿದೆ. ಅದಕ್ಕೇ ಖ್ಯಾತ ಚಿಂತಕ ನೋಮ್ ಛಾಮ್ಸ್ಕೀ ಹೇಳಿದ್ದು, ‘ಮಾಧ್ಯಮ ಎನ್ನುವುದು ಈಗ ಒಂದು ಕಲಾಪ್ರಕಾರವೂ ಅಲ್ಲ, ಸಂವಹನ ಮಾಧ್ಯಮವೂ ಅಲ್ಲ. ಅದು ಬಳಕೆ ಸಾಮಗ್ರಿಗಳ ಉತ್ಪಾದಕರಿಗೆ ಗ್ರಾಹಕರನ್ನು ತಲುಪಲಿಕ್ಕೆ ಅನುಕೂಲ ಮಾಡಿಕೊಡುವ ಒಂದು ತಂತ್ರಜ್ಞಾನ ಮಾತ್ರ’.
ಕಂಡಿದ್ದು/ಕೇಳಿದ್ದು: - Tv9 ನಲ್ಲಿದ್ದಾಗ ಹಮೀದ್ ಅವರ ಬೋಳು ತಲೆ (ಬಾಂಡ್ಲಿ) ಕಾಣಿಸುತ್ತಿರಲಿಲ್ಲ. ಕ್ಯಾಮರ ಕೋನವನ್ನು ಅಷ್ಟು ಚೆನ್ನಾಗಿ ಫಿಕ್ಸ್ ಮಾಡಿದ್ದರು. ಸುವರ್ಣಕ್ಕೆ ಬಂದಾಗ ಇದು ಬಟಾಬಯಲು.
ಈ ವರ್ಷದ ಅತ್ಯತ್ತಮ ಟಿವಿ ಪ್ರಶ್ನೆ? ಕರುಣಾಕರ ರೆಡ್ಡಿ ನಿವಾಸದಲ್ಲಿ ಹಾವು? ದೊಡ್ಡ ಹಾವು ಕಂಡರೆ ಏನು ಮಾಡಬೇಕು? ಚಿಕ್ಕ ಹಾವು ಕಂಡರೆ ಏನು ಮಾಡಬೇಕು? ಪ್ರಶ್ನೆ -ಶಿವಪ್ರಸಾದ್ Tv9)
Sunday 1 November 2009
Tuesday 20 October 2009
ಎಲ್ಲೋ ಮಳೆಯಾಗಿದೆಯೆಂದು...

ಮೊನ್ನೆ U2 ನೋಡುತ್ತಿದ್ದೆ. ಮನಸಾರೆ ಚಿತ್ರದ "ಎಲ್ಲೋ ಮಳೆಯಾಗಿದೆಯೆಂದು...." ಹಾಡು ಬರುತ್ತಿತ್ತು. ಹೌದು. ಹಾಡು ಕೇಳುತ್ತಿದ್ದಂತೆ ಇದರಲ್ಲಿ ಏನೋ ವಿಶೇಷವಿದೆ ಅನಿಸತೊಡಗಿತು. ವಿಮರ್ಶೆ ಓದಿ ಚಿತ್ರ ನೋಡುವರ ಸಾಲಿಗೆ ಸೇರಿದವನು ನಾನು. ಕೆಲವೊಮ್ಮೆ ಈ ವಿಮರ್ಶೆಗಳೇ ಚಿತ್ರಕ್ಕಿಂತ ಹೆಚ್ಚಿನ ಮನೋರಂಜನೆ ಒದಗಿಸುತ್ತದೆ. ಮನಸಾರೆ 'ಮೆಂಟಲ್ಗಳ' ಚಿತ್ರ ಎಂದು ಚಿತ್ರ ನೋಡಿ ಬಂದ ಕೆಲವು ಗೆಳೆಯರು ಹೇಳಿದ್ದರಿಂದ ಅದರ ಬಗ್ಗೆ ಅಷ್ಟೇನೂ ತಲೆಕೆಡಿಸಿಕೊಳ್ಳದೆ ಸುಮ್ಮನಾಗಿದ್ದೆ. ಆದರೆ ಈ ಹಾಡು ಮಾತ್ರ ತೀವ್ರವಾಗಿ ಕಾಡತೊಡಗಿತು. ಆಫೀಸಿಗೆ ಹೋದವನೇ ಯೂಟ್ಯೂಬ್ನಲ್ಲಿ ಹಾಡನ್ನು ಹುಡುಕಿ ಮತ್ತೆ ಕೇಳಿಸಿಕೊಂಡೆ. ಕಾಯ್ಕಿಣಿ ಕವಿತೆ ನಿಧಾನವಾಗಿ ಮನಸ್ಸನ್ನು ಆವರಿಸಿಕೊಳ್ಳತೊಡಗಿತು.
ಹೌದು. ಕಳೆದ ಒಂದು ವಾರದಿಂದ, ಎಲ್ಲೋ ಮಳೆಯಾಗಿದೆಯೆಂದು ತಂಗಾಳಿಯು ಹೇಳುತ್ತಿದೆ, ಇಲ್ಲೇ ಒಲವಾಗಿದೆಯೆಂದು ಕನಸೊಂದು ಬೀಳುತ್ತಿದೆ... ಎಂದು ಗುನುಗುನಿಸಿಕೊಂಡು ಓಡಾಡುತ್ತಿದ್ದೇನೆ. ನಮ್ಮ ಕಾಯ್ಕಿಣಿ ಎಂತಹ ಅದ್ಭುತ ಕಲೆಗಾರ. ಅವರ ಕಾವ್ಯ ಕುಸುರಿಗೆ ಮಾರು ಹೋಗದವರಿಲ್ಲ. "ಕಾಯ್ಕಿಣಿ ಎಂತಹ ಕಲೆಗಾರನೆಂದರೆ, ಅವರ ಕಿವಿಯ ಹತ್ತಿರ ಶಂಖ ಹುಳುವೊಂದನ್ನು ಹಿಡಿದರೆ, ಆ ಪುಟಾಣಿ ಹುಳುವಿನ ಹೃದಯಕ್ಕೆ ಎಷ್ಟು ಕವಾಟುಗಳಿವೆ ಎನ್ನುವುದನ್ನು ಹೇಳಬಲ್ಲಷ್ಟು ಸೂಕ್ಷ್ಮ ಕಲೆಗಾರ" ಎಂದು ಬೊಗಸೆಯಲ್ಲಿ ಮಳೆಗೆ ಬೆಳಗೆರೆ ಬೆನ್ನುಡಿ ಬರೆದಿರುವುದರಲ್ಲಿ ಏನೂ ಆಶ್ಚರ್ಯವಿಲ್ಲ.
ನಿಜವಾಗಿಯೂ ತಲೆಸುತ್ತುವ ಗೀತೆಗಳಿಂದ ಬೇಸೆತ್ತು ಹೋಗಿದ್ದ ಕನ್ನಡ ಚಿತ್ರರಂಗಕ್ಕೆ ಸುಂದರ ಮಳೆಗೀತೆಗಳನ್ನೂ, ಕನ್ನಡ ಭಾಷೆಯ ಮಾಧುರ್ಯವನ್ನೂ ಪರಿಚಯಿಸಿದವರು ಕಾಯ್ಕಿಣಿ. ಅಷ್ಟರ ಮಟ್ಟಿಗೆ ನಮ್ಮ ಕಿ(ಕ)ವಿಗಳು ಕಾಯ್ಕಿಣಿಗೆ ಖುಣಿಯಾಗಿರಬೇಕು. ಯಾಕೋ ಮನಸ್ಸು, ತುಂಬಾ ವರ್ಷಗಳ ಹಿಂದಕ್ಕೆ ಓಡುತ್ತಿದೆ. ಅಂಗನವಾಡಿಯಲ್ಲೋ, ಒಂದನೆಯ ತರಗತಿಯಲ್ಲೋ ಇರಬೇಕು. "ಪುಣ್ಯಕೋಟಿ ಗೋವಿನ ಹಾಡು". ಬಹುಶಃ ಯಾವುದೇ ವ್ಯಕ್ತಿ ತನ್ನ ಜೀವಮಾನದುದ್ದಕ್ಕೂ ಮರೆಯಲಾಗದ ಪದ್ಯ ಇದು. ಈ ಪದ್ಯ ಎಷ್ಟು ಅರ್ಥಪೂರ್ಣವಾಗಿದೆಯೆಂದರೆ ಇದು ಮಕ್ಕಳು ಓದಬೇಕಾದ, ಹಿರಿಯರು ಧ್ಯಾನಿಸಬೇಕಾದ ಪದ್ಯ. ಸರಳ, ಸುಂದರ ವಾಕ್ಯರಚನೆಗಳಿಂದ ಸುಲಭವಾಗಿ ಅರ್ಥವಾಗುವ ಅಚ್ಚಗನ್ನಡದ ಈ ಪದ್ಯವನ್ನು ಕಾವೇರಿ ಟೀಚರ್ ಸುಶ್ರಾವ್ಯವಾಗಿ ಹಾಡುತ್ತಾ ಪಾಠ ಮಾಡುತ್ತಿದ್ದರೆ, ನಮ್ಮ ಕಣ್ಣುಗಳಿಂದ ನಮಗೆ ಗೊತ್ತಿಲ್ಲದಂತೆಯೇ ಕಣ್ಣೀರು ತೊಟ್ಟಿಕ್ಕುತ್ತಿತ್ತು. ಅಷ್ಟೊಂದು ಮಹೋನ್ನತ ಮೌಲ್ಯಗಳಿಂದ ಕೂಡಿದ ಪದ್ಯ ಅದು.
ಇಂದಿಗೂ ಪುಣ್ಯಕೋಟಿ ಗೋವಿನ ಹಾಡು ಕಿವಿಯಲ್ಲಿ ಇಂಗದ ಅನುರಣನ. ಮತ್ತೆ ಮತ್ತೆ ನೆನಪಾಗಿ, ಬಾಲ್ಯವನ್ನು ನೆನಪಿಸಿ, ಕಣ್ಣೀರು ತರಿಸುವ ಈ ಪದ್ಯದ ಪ್ಯಾರಾವೊಂದು ಇಲ್ಲಿದೆ. "ಕೊಟ್ಟ ಮಾತಿಗೆ ತಪ್ಪಲಾರೆನು, ಕೆಟ್ಟ ಯೋಚನೆ ಮಾಡಲಾರೆನು" ಎಂದು ಹೇಳಿದ ಪುಣ್ಯಕೋಟಿ ಹುಲಿಯ ಗವಿಯ ಬಾಗಿಲು ಹೊಕ್ಕು..
'ಖಂಡವಿದಕೋ, ಮಾಂಸವಿದಕೋ,
ಗುಂಡಿಗೆಯ ಬಿಸಿರಕ್ತವಿದಕೋ,
ಉಂಡು ಸಂತಸಗೊಂಡು ನೀ
ಭೂಮಂಡಲದೊಳು ಬಾಳಯ್ಯನೆ' ಎಂದು ಹೇಳುತ್ತದೆ. ಮುಂದೆ ನಾವು ಮಾತಾಡುತ್ತಿರಲಿಲ್ಲ. ಕೆನ್ನೆಯ ಮೇಲೆ ಕಣ್ಣೀರು ಹರಿಯಲು ಪ್ರಾರಂಭವಾಗುತ್ತಿತ್ತು. ಅನಾಮಿಕ ಕವಿಯೊಬ್ಬ ಬರೆದ ಈ ಕವಿತೆಯಲ್ಲಿ ಎಷ್ಟೊಂದು ಮೌಲ್ಯವಿದೆ.
ಇದನ್ನೆಲ್ಲಾ ಯಾಕೆ ಹೇಳುತ್ತಿದ್ದೇನೆಂದರೆ, ನಮ್ಮ ಬದುಕಿನ ಪುಟ್ಟ ಪುಟ್ಟ ಸಂತೋಷ ಹಾಗೂ ವಿಸ್ಮಯಗಳಿಗೆ ನಾವು ಸ್ಪಂದಿಸದೇ ಹೋದರೆ ಈ ಬದುಕಿನ ಎಷ್ಟೊಂದು ಖುಷಿಗಳನ್ನು ನಾವು ಕಳೆದುಕೊಳ್ಳುತ್ತೇವೆ ಎನ್ನುವುದು. ಕವನ ರಚನೆ ಅಥವಾ ಬರೆಹ ಕೂಡ ಹೀಗೆ. ಬರೆಹ ಅಥವಾ ಕವಿತೆಯಲ್ಲಿ ಹೃದಯದ ಸ್ಪಂದನವನ್ನು ಗುರುತಿಸದೇ ಹೋದರೆ, ಅದು ಯಾರ ಮನಸ್ಸಿನಲ್ಲಿಯೂ ಧೀರ್ಘಕಾಲ ನೆಲೆನಿಲ್ಲುವುದಿಲ್ಲ. ಯಾರ ಮನಸ್ಸನ್ನೂ ತಟ್ಟಿ ಬೆರಗುಗೊಳಿಸುವುದಿಲ್ಲ.
ಇಂತಹ ಸ್ಪಂದನ ಇಲ್ಲದೇ ಹೋಗಿರುವುದರಿಂದಲೇ ನಮ್ಮ ಬದುಕು ಇಂದು ಹೀಗಾಗಿದೆ. ಮುಗ್ಧತೆ ಕಳೆದುಹೋದ ಮನುಷ್ಯನ ಮನಸ್ಸಿನಲ್ಲಿ ಅಂಧಕಾರ ಬಿಟ್ಟು ಇನ್ನೇನು ಉಳಿಯುತ್ತದೆ? ಯಾಕೋ ಇದು ಸ್ಪಲ್ಪ ಗಂಭೀರವಾಗುತ್ತಿದೆ ಅನಿಸುತ್ತಿದೆ. ನಿಲ್ಲಿಸುತ್ತೇನೆ. ಪ್ರಾಸವೇ ಪದ್ಯವೆಂದು ತಿಳಿದು ಕವಿತೆ ರಚಿಸುವ ಈಗಿನ ಕಾಲದಲ್ಲಿ ಕಾಯ್ಕಿಣಿ ಕವಿತೆಗಳನ್ನು ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ. ಮನಸ್ಸಿಗೆ ಹಿತವೆನಿಸುತ್ತದೆ. ಮತ್ತೆ ಹಾಡಿಕೊಳ್ಳುತ್ತಿದ್ದೇನೆ..
ಎಲ್ಲೋ ಮಳೆಯಾಗಿದೆಯೆಂದು....
ಚಿತ್ರ ಕೃಪೆ - http://my.opera.com
Sunday 11 October 2009
ಹೊಸ ತಲೆಮಾರಿನ ತಲ್ಲಣ
ಒಮ್ಮೆ ಚಿಲಿ ದೇಶದ ಕವಿ ನೆರೂಡನಿಗೆ ಸಂದರ್ಶಕಿಯೊಬ್ಬಳು ಒಂದು ಗಂಭೀರ ಪ್ರಶ್ನೆ ಕೇಳಿದಳು. ನೀವು ನಿಮ್ಮ ಪುಸ್ತಕಗಳಲ್ಲಿ ಒಂದನ್ನು ಬೆಂಕಿಯಿಂದ ರಕ್ಷಿಸಿಕೊಳ್ಳಬೇಕಾಗಿ ಬಂದರೆ ಯಾವ ಪುಸ್ತಕ ರಕ್ಷಿಸಿಕೊಳ್ಳುತ್ತೀರಿ?
ನೆರೂಡ ಅಷ್ಟೇ ಸರಳವಾಗಿ ಹೇಳಿದ. ‘ಯಾವುದನ್ನೂ ರಕ್ಷಿಸಲಿಕ್ಕಿಲ್ಲ. ನನ್ನ ಪುಸ್ತಕಗಳಿಂದ ನನಗೇನು ಉಪಯೋಗ? ಅದಕ್ಕೆ ಬದಲು ಒಬ್ಬಳು ಹುಡುಗಿಯನ್ನು ರಕ್ಷಿಸಬಯಸುವೆ.. ನನ್ನ ಯಾವುದೇ ಪುಸ್ತಕಕ್ಕಿಂತ ಹೆಚ್ಚು ಸಂತೋಷ ಆಕೆಯಿಂದ ದೊರೆಯಬಲ್ಲದು.
ನೆರೂಡನ ಜಾಣತನ ನಮ್ಮ ಇಂದಿನ ಕವಿಗಳಿಗೆ ಇಲ್ಲವಲ್ಲ ಎಂದೆನಿಸುತ್ತದೆ. ನಮ್ಮ ಕೆಲವು ಬರಹಗಾರರು ತಮ್ಮ ಬರಹದಿಂದ ಜಗತ್ತೇ ಬದಲಾಗಬಹುದು ಎಂಬ ಭ್ರಮೆ ಉಳ್ಳವರು. ಅಥವಾ ಆ ಭ್ರಮೆ ಇಟ್ಟುಕೊಂಡೇ ಬರೆಯುವವರು. ನನ್ನ ಬರಹದಿಂದ ಸಮಾಜಕ್ಕೆ ಏನೂ ಒಳಿತಾಗದಿದ್ದರೆ ನಾನು ಬರೆಯುವುದರಿಂದ ಏನು ಸಾರ್ಥಕ ಎಂಬ ಪೊಳ್ಳು ಭರವಸೆಗಳನ್ನೂ, ಆಶಯಗಳನ್ನೂ, ತಾವೇ ನಂಬಿದ ಸತ್ಯಗಳನ್ನೂ ಇಟ್ಟುಕೊಂಡವರು. ನನ್ನ ಊರು, ಹಿತ್ತಲ ಹೂಬಳ್ಳಿ, ಪಕ್ಷಿಗಳು ಬಡತನ, ಅವ್ವನ ಲಾಲಿ ಹಾಡು, ಅಜ್ಜಿಯ ಜೋಗುಳ ಇವೆಲ್ಲಾ ನನ್ನ ಬರಹವನ್ನು ರೂಪಿಸಿದೆ ಎಂದು ಪದೇ ಪದೇ ಬರದುಕೊಂಡು ತಮ್ಮ ಊರಿಗೂ, ಹಿತ್ತಲಿಗೂ ಮುಜುಗರ ಹುಟ್ಟಿಸುವವರು. ‘ನೀವು ಬರೆಯದೇ ಇದ್ದರೆ ಇಲ್ಲಿ ಬೆಳಕು ಹರಿಯುವುದಿಲ್ಲ ಎಂದು ನಿಮಗೆ ನಂಬಿಸಿದವರು ಯಾರು? ಎಂದು ಇವರನ್ನು ಕೇಳಬೇಕು ಅನಿಸುತ್ತದೆ.
ನನ್ನ ಖುಷಿಗಾಗಿ ಬರೆಯುವವನು ನಾನು. ನನ್ನ ಬರವಣಿಗೆಯಿಂದ ಕನ್ನಡ ಸಾಹಿತ್ಯಕ್ಕಾಗಲಿ, ಈ ಸಮಾಜಕ್ಕಾಗಲಿ ಕಿಂಚಿತ್ ಉಪಯೋಗವಾಗುತ್ತಿದೆ ಎಂಬ ಚಿಲ್ಲರೆ ಭ್ರಮೆಯನ್ನು ತಲೆಯಲ್ಲಿ ತುಂಬಿಕೊಂಡು ನಾನು ಓಡಾಡುತ್ತಿಲ್ಲವಾದ್ದರಿಂದ ನನಗೆ ನನ್ನ ಬರವಣಿಗೆಯ ಬಗ್ಗೆ ಯಾವುದೇ ಗೊಂದಲವಿಲ್ಲ. ಆದರೆ ಅದರ ಮುಂದಣ ಸಾಧ್ಯತೆಯ ಬಗ್ಗೆ ಮಾತ್ರ ಗೊಂದಲವಿದೆ. ಯಾಕೆಂದರೆ ಕವಿಯಂತೆ ನಾನು ಭವಿಷ್ಯದ ಜನಾಂಗಕ್ಕಾಗಿ ಬರೆಯುತ್ತಿಲ್ಲ. ಇಂದಿನ ಅಗತ್ಯಕ್ಕೆ ತಕ್ಕಂತೆ ಬರೆದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೇನೆ. ಬರವಣಿಗೆ ನನ್ನೊಳಗನ್ನು ದಿನದಿಂದ ದಿನಕ್ಕೆ ಶುದ್ಧೀಕರಿಸುತ್ತಾ ಹೊರಟಿದೆ ಎಂದು ನಾನು ನಂಬಿದ್ದೇನೆ.
ಅನೇಕ ಉತ್ತಮ ಬರಹಗಳು ವಿನಯ ಮತ್ತು ಮೌನದಲ್ಲಿ ಹುಟ್ಟುತ್ತವೆ. (ಇಲ್ಲಿಯವರೆಗೆ ಪ್ರೀತಿ ಮಾತ್ರ ಹುಟ್ಟುತ್ತದೆ ಎಂದು ತಿಳಿದಿದ್ದೆ) ಲೇಖಕ ಸರಳ, ನೇರ, ಪ್ರಾಮಾಣಿಕ ಹಾಗೂ ಸಂಕೋಚದ ಸ್ವಭಾವದವನಾಗಿದ್ದರೆ ಉತ್ತಮ ಬರಹ ಖಂಡಿತ ಹುಟ್ಟುತ್ತದೆ.
ರಹಮತ್ ತರೀಕೆರೆ ಸಂಪಾದಿಸಿರುವ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗ ಪ್ರಕಟಿಸಿರುವ ಒಂದು ಉತ್ತಮ ಪುಸ್ತಕ “ಹೊಸ ತಲೆಮಾರಿನ ತಲ್ಲಣ” ಕನ್ನಡದ 38 ಯುವ ಬರಹಗಾರರು ತಾವು ಏಕೆ ಮತ್ತು ಹೇಗೆ ಬರಹಗಾರರಾಗಿದ್ದು ಎಂದು ಬರೆದಿದ್ದಾರೆ. ನೀವೇಕೆ ಬರಹಗಾರರಾಗಬೇಕು ಎಂದು ನಿಮಗನಿಸುತ್ತಿದ್ದರೆ ಈ ಪುಸ್ತಕ ಓದಿ. 80 ರೂಪಾಯಿ ಜೇಬಿಗೆ ಹೊರೆಯೆನಿಸದು.
ನೆರೂಡ ಅಷ್ಟೇ ಸರಳವಾಗಿ ಹೇಳಿದ. ‘ಯಾವುದನ್ನೂ ರಕ್ಷಿಸಲಿಕ್ಕಿಲ್ಲ. ನನ್ನ ಪುಸ್ತಕಗಳಿಂದ ನನಗೇನು ಉಪಯೋಗ? ಅದಕ್ಕೆ ಬದಲು ಒಬ್ಬಳು ಹುಡುಗಿಯನ್ನು ರಕ್ಷಿಸಬಯಸುವೆ.. ನನ್ನ ಯಾವುದೇ ಪುಸ್ತಕಕ್ಕಿಂತ ಹೆಚ್ಚು ಸಂತೋಷ ಆಕೆಯಿಂದ ದೊರೆಯಬಲ್ಲದು.
ನೆರೂಡನ ಜಾಣತನ ನಮ್ಮ ಇಂದಿನ ಕವಿಗಳಿಗೆ ಇಲ್ಲವಲ್ಲ ಎಂದೆನಿಸುತ್ತದೆ. ನಮ್ಮ ಕೆಲವು ಬರಹಗಾರರು ತಮ್ಮ ಬರಹದಿಂದ ಜಗತ್ತೇ ಬದಲಾಗಬಹುದು ಎಂಬ ಭ್ರಮೆ ಉಳ್ಳವರು. ಅಥವಾ ಆ ಭ್ರಮೆ ಇಟ್ಟುಕೊಂಡೇ ಬರೆಯುವವರು. ನನ್ನ ಬರಹದಿಂದ ಸಮಾಜಕ್ಕೆ ಏನೂ ಒಳಿತಾಗದಿದ್ದರೆ ನಾನು ಬರೆಯುವುದರಿಂದ ಏನು ಸಾರ್ಥಕ ಎಂಬ ಪೊಳ್ಳು ಭರವಸೆಗಳನ್ನೂ, ಆಶಯಗಳನ್ನೂ, ತಾವೇ ನಂಬಿದ ಸತ್ಯಗಳನ್ನೂ ಇಟ್ಟುಕೊಂಡವರು. ನನ್ನ ಊರು, ಹಿತ್ತಲ ಹೂಬಳ್ಳಿ, ಪಕ್ಷಿಗಳು ಬಡತನ, ಅವ್ವನ ಲಾಲಿ ಹಾಡು, ಅಜ್ಜಿಯ ಜೋಗುಳ ಇವೆಲ್ಲಾ ನನ್ನ ಬರಹವನ್ನು ರೂಪಿಸಿದೆ ಎಂದು ಪದೇ ಪದೇ ಬರದುಕೊಂಡು ತಮ್ಮ ಊರಿಗೂ, ಹಿತ್ತಲಿಗೂ ಮುಜುಗರ ಹುಟ್ಟಿಸುವವರು. ‘ನೀವು ಬರೆಯದೇ ಇದ್ದರೆ ಇಲ್ಲಿ ಬೆಳಕು ಹರಿಯುವುದಿಲ್ಲ ಎಂದು ನಿಮಗೆ ನಂಬಿಸಿದವರು ಯಾರು? ಎಂದು ಇವರನ್ನು ಕೇಳಬೇಕು ಅನಿಸುತ್ತದೆ.
ನನ್ನ ಖುಷಿಗಾಗಿ ಬರೆಯುವವನು ನಾನು. ನನ್ನ ಬರವಣಿಗೆಯಿಂದ ಕನ್ನಡ ಸಾಹಿತ್ಯಕ್ಕಾಗಲಿ, ಈ ಸಮಾಜಕ್ಕಾಗಲಿ ಕಿಂಚಿತ್ ಉಪಯೋಗವಾಗುತ್ತಿದೆ ಎಂಬ ಚಿಲ್ಲರೆ ಭ್ರಮೆಯನ್ನು ತಲೆಯಲ್ಲಿ ತುಂಬಿಕೊಂಡು ನಾನು ಓಡಾಡುತ್ತಿಲ್ಲವಾದ್ದರಿಂದ ನನಗೆ ನನ್ನ ಬರವಣಿಗೆಯ ಬಗ್ಗೆ ಯಾವುದೇ ಗೊಂದಲವಿಲ್ಲ. ಆದರೆ ಅದರ ಮುಂದಣ ಸಾಧ್ಯತೆಯ ಬಗ್ಗೆ ಮಾತ್ರ ಗೊಂದಲವಿದೆ. ಯಾಕೆಂದರೆ ಕವಿಯಂತೆ ನಾನು ಭವಿಷ್ಯದ ಜನಾಂಗಕ್ಕಾಗಿ ಬರೆಯುತ್ತಿಲ್ಲ. ಇಂದಿನ ಅಗತ್ಯಕ್ಕೆ ತಕ್ಕಂತೆ ಬರೆದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೇನೆ. ಬರವಣಿಗೆ ನನ್ನೊಳಗನ್ನು ದಿನದಿಂದ ದಿನಕ್ಕೆ ಶುದ್ಧೀಕರಿಸುತ್ತಾ ಹೊರಟಿದೆ ಎಂದು ನಾನು ನಂಬಿದ್ದೇನೆ.
ಅನೇಕ ಉತ್ತಮ ಬರಹಗಳು ವಿನಯ ಮತ್ತು ಮೌನದಲ್ಲಿ ಹುಟ್ಟುತ್ತವೆ. (ಇಲ್ಲಿಯವರೆಗೆ ಪ್ರೀತಿ ಮಾತ್ರ ಹುಟ್ಟುತ್ತದೆ ಎಂದು ತಿಳಿದಿದ್ದೆ) ಲೇಖಕ ಸರಳ, ನೇರ, ಪ್ರಾಮಾಣಿಕ ಹಾಗೂ ಸಂಕೋಚದ ಸ್ವಭಾವದವನಾಗಿದ್ದರೆ ಉತ್ತಮ ಬರಹ ಖಂಡಿತ ಹುಟ್ಟುತ್ತದೆ.
ರಹಮತ್ ತರೀಕೆರೆ ಸಂಪಾದಿಸಿರುವ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗ ಪ್ರಕಟಿಸಿರುವ ಒಂದು ಉತ್ತಮ ಪುಸ್ತಕ “ಹೊಸ ತಲೆಮಾರಿನ ತಲ್ಲಣ” ಕನ್ನಡದ 38 ಯುವ ಬರಹಗಾರರು ತಾವು ಏಕೆ ಮತ್ತು ಹೇಗೆ ಬರಹಗಾರರಾಗಿದ್ದು ಎಂದು ಬರೆದಿದ್ದಾರೆ. ನೀವೇಕೆ ಬರಹಗಾರರಾಗಬೇಕು ಎಂದು ನಿಮಗನಿಸುತ್ತಿದ್ದರೆ ಈ ಪುಸ್ತಕ ಓದಿ. 80 ರೂಪಾಯಿ ಜೇಬಿಗೆ ಹೊರೆಯೆನಿಸದು.
Thursday 16 July 2009
ಅಬೋಲಿನ್ ಕುದುರೆಯೂ ಕಿಂಗ್ಫಿಷರ್ ಡರ್ಬಿಯೂ
ಕಳೆದ ಭಾನುವಾರ ಬೆಂಗಳೂರಿನಲ್ಲಿ ನಡೆದ ಕಿಂಗ್ಫಿಷರ್ ಡರ್ಬಿಯಲ್ಲಿ ಬುಕ್ಕಿಗಳ ಸರ್ವ ಲೆಕ್ಕಾಚಾರವನ್ನು ತಲೆಕೆಳಗೆ ಮಾಡಿ ಅಬೋಲಿನ್ ಎಂಬ ಕುದುರೆ ೭೯.೨೦ ಲಕ್ಷ ಮೊತ್ತದ ಬಹುಮಾನವನ್ನು ಗೆದ್ದುಕೊಂಡಿತು. ಗೆಲ್ಲುವುದಕ್ಕೂ ಸ್ವಲ್ಪ ಮುಂಚೆ ಈ ಕುದುರೆ ನಮ್ಮಲ್ಲಿ ಯಾರು ಗೆಲ್ಲುತ್ತಾರೆ ಎನ್ನುವುದನ್ನು ಯಾವ ಪರಮಾತ್ಮನಿಂದಲೂ ಊಹಿಸಲಿಕ್ಕಾಗದು ಎನ್ನುವ ಭಾವದಲ್ಲಿ ಅಶ್ವಶಾಲೆಯಲ್ಲಿ ತನ್ನ ಸಹೋದ್ಯೋಗಿಗಳೊಂದಿಗೆ ಹುರುಳಿ ತಿನ್ನುತ್ತಿತ್ತು. ಅದನ್ನು ಓಡಿಸಿದ ಜಾಕಿ ಅಲ್ಫೋರ್ಡ್ಗೆ ಅಬೋಲಿನ್ ಗೆಲ್ಲುತ್ತದೆ ಎನ್ನುವ ಸಣ್ಣ ವಿಶ್ವಾಸ ಕೂಡಾ ಹಿಂದಿನ ದಿನ ರಾತ್ರಿ ವಿಸ್ಕಿ ಕುಡಿಯುವಾಗಲೂ ಇರಲಿಲ್ಲ.
ಕುದುರೆ ಜೂಜಿನ ಮಾಯಾಲೋಕವೇ ಅಂಥದ್ದು. ಹಚ್ಚ ಹಸಿರಿನ ಎರಡು ಕಿ.ಮೀ ಸುತ್ತಳತೆಯ ಅಂಗಳದಲ್ಲಿ ನಡೆಯುವ ರೇಸಿನಲ್ಲಿ ಯಾವ ಕುದುರೆ ಯಾರ ಭವಿಷ್ಯವನ್ನು ಬರೆಯಲಿದೆ, ಇನ್ಯಾರ ಮನೆಯ ದೀಪವನ್ನು ನಂದಿಸಲಿದೆ ಎನ್ನುವುದು ನಿಜಕ್ಕೂ ಆ ದೇವರಿಂದಲೂ ಊಹಿಸಲು ಸಾಧ್ಯವಾಗದ ಕೆಲಸ. ಯಾವ ಭವಿಷ್ಯಕಾರನೂ, ಎಂಥ ವಿಜ್ಞಾನಿಯೂ, ಯಾವ ಗಿಣಿಶಾಸ್ತ್ರಜ್ಞನೂ ಗೆಲ್ಲುವ ಕುದುರೆಯನ್ನು ಊಹಿಸಿ ಹೇಳಲಾರ. ಓಡಲಿರುವ ಕುದುರೆಯ ವಂಶವನ್ನೇ ಪತ್ತೆಹಚ್ಚಿ ಅದರ ವಂಶವಾಹಿಯನ್ನೇ ಹುಡುಕಿ ತಂದರೂ, ಇದೇ ಕುದುರೆ ಗೆಲ್ಲುತ್ತದೆ ಎನ್ನುವುದನ್ನು ಕರಾರುವಕ್ಕಾಗಿ ಹೇಳಲಾಗುವುದಿಲ್ಲ. ಹೆಣ್ಣಾದರೆ ಅದಕ್ಕೆ ಮುಟ್ಟೂ, ಗಂಡಾದರೆ ಬೆದೆಯೂ ಕಾಡಬಹುದು ಎಂದು ಲಂಕೇಶ್ ಒಮ್ಮೆ ಬರೆದಿದ್ದರು.
ಕುದುರೆ ಜೂಜಿನ ಬಗ್ಗೆ ಏನೇನೂ ಗೊತ್ತಿಲ್ಲದ ನಾನು ಕಳೆದ ಭಾನುವಾರ ಬೆಳಿಗ್ಗೆ ಬೇಗನೇ ಎದ್ದ ತಪ್ಪಿಗೆ ರೇಸ್ಕೋರ್ಸ್ ರಸ್ತೆಯ ಮುಂದೆ ಬಂದು ನಿಂತಿದ್ದೆ. ರಸ್ತೆಯಂಚಿನಲ್ಲಿ ನಿಂತಿದ್ದ ಕಿಂಗ್ಫಿಷರ್ ಹೋರ್ಡಿಂಗ್ಸ್ಗಳೆಲ್ಲಾ ಬೆಳ್ಳಂ ಬೆಳಿಗ್ಗೆಯೇ ನಶೆ ಏರಿಸಿಕೊಂಡವರಂತೆ ನಿಂತಿದ್ದವು. ಟರ್ಫ್ ಕ್ಲಬ್ ಮುಂದಿನ ಅಂಗಳದಲ್ಲಿ ಒಂದಿಷ್ಟು ಪಂಟರು ಅಂಡು ಸುಟ್ಟ ಬೆಕ್ಕಿನಂತೆ ಓಡಾಡುತ್ತಿದ್ದರು. ಹಿಂದೆಲ್ಲಾ ಬೆಂಗಳೂರಿನಲ್ಲಿ ಅಣ್ಣಾವ್ರ ಚಿತ್ರ ಬಿಡುಗಡೆಯಾದಾಗ ಗರುವಾರ ರಾತ್ರಿಯೇ ಅಭಿಮಾನಿಗಳು ಹಾಸಿಗೆಯೊಂದಿಗೆ ಬಂದು ಥಿಯೇಟರ್ ಎದುರು ಮಲಗಿ, ಬೆಳಿಗ್ಗೆ ಎದ್ದು ಸರತಿ ಸಾಲಿನಲ್ಲಿ ನಿಂತು, ನುಗ್ಗಾಟ ನಡೆಸಿ, ಚಿತ್ರ ನೋಡಿ ಹೋಗುತ್ತಿದ್ದರಂತೆ. ಕಿಂಗ್ ಫಿಷರ್ ಡರ್ಬಿಯಲ್ಲಿ ಪಾಲ್ಗೊಳ್ಳಲು ಜೂಜು ಪ್ರೇಮಿಗಳು ಇಂಥದೇ ಕಸರತ್ತು ನಡೆಸಿದ ಹಾಗಿತ್ತು. ಬೆಳಿಗ್ಗೆ ಏಳಕ್ಕೆಲ್ಲಾ ಟರ್ಫ್ ಕ್ಲಬ್ ಮುಂದೆ ಜನ ಜಮಾಯಿಸಿದ್ದರು. ರೇಸಿನಲ್ಲಿ ಓಡಲಿರುವ ಕುದುರೆಗಳ ಹೆಸರನ್ನು ಹೊತ್ತ ಒರಿಜಿನಲ್ ವಿಲ್ ಇತ್ಯಾದಿ ರೇಸ್ ಪುಸ್ತಕದ ಹರಿದ ಹಾಳೆಗಳು ಅಲ್ಲೊಂದು ಇಲ್ಲೊಂದು ಬಿದ್ದಿದ್ದವು.
ನನಗೆ ಕುತೂಹಲ ಕೆರಳಿಸಿದ್ದು ಕುದುರೆ ಜೂಜಲ್ಲ. ರೇಸು ಕುದುರಗಳ ಹೆಸರುಗಳು. ಬಕ್ಪಾಸರ್, ಗೆಲಿಲಿ, ರೆಡ್ ರೋಮಿಯೋ, ಜಿಪ್ಸಿ ಮ್ಯಾಜಿಕ್, ಜಾಕ್ವೆಲಿನ್, ಅಸ್ಟ್ರಾಲ್ ಫ್ಲಾಷ್, ರಿಯಲ್ ಡ್ರೀಮ್, ಲಾಸ್ಟ್ ನೈಟ್, ಸೊನ್ನೆಟ್, ಬೇಕಾನ್ ಲೈಟ್, ಫ್ರೀ ಸ್ಪಿರಿಟ್, ಬಕ್ ಮೇಕರ್, ಕಿಚನ್ ಕ್ಯಾಬಿನೆಟ್, ರೆಡ್ ಟೆರರ್, ಫೈರ್ ಕ್ರಸ್ಟ್, ಕೋಮಾಂಛೆ, ಪ್ಲಾಟಿನಂ ಗರ್ಲ್, ಸೀಕ್ರೇಟ್ ಹಾರ್ಟ್, ಬ್ಲಾಕ್ ಪರ್ಲ್ ವ್ಹಾ... ಎಷ್ಟೊಂದು ರೊಮ್ಯಾಂಟಿಕ್ ಹೆಸರುಗಳು. ನಮ್ಮೂರಿನ ಕೆಲವು ಕಿಲಾಡಿಗಳು ತಮ್ಮ ಸಾಕುನಾಯಿಗಳಿಗೆ ಇಂತಹ ತೂಕದ ಹೆಸರನ್ನು ಇಡುವುದಿದೆ. ನಮ್ಮ ಪಕ್ಕದ ಮನೆಯ ನಾಯಿಯ ಹೆಸರು ಲಾಡೆನ್. ಬುಷ್ ಮತ್ತು ಮುಷರಫ್ ಅದರ ಹಿಂಬಾಲಕರು. ಬರಿ ಅನ್ನವನ್ನೇ ತಿನ್ನುತ್ತಿದ್ದ ನಾಯಿಯೊಂದರ ಹೆಸರು ರೈಸ್ (ಕೊಂಡೊಲಿಜಾ ರೈಸ್). ವಿಚಿತ್ರವಾಗಿ ಕೂಗುತ್ತಿದ್ದ ನಾಯಿಯ ಹೆಸರು ಜಾಕ್ಸನ್. ಸ್ವಲ್ಪ ವೈಯಾರದಿಂದಿದ್ದ ಹೆಣ್ಣು ನಾಯಿಯೊಂದಕ್ಕೆ ಇಟ್ಟ ಹೆಸರು ಸಿಲ್ಕ್. ನಮ್ಮ ಮನೆಯಲ್ಲಿ ಕಡುಕಪ್ಪು ಬಣ್ಣದ ನಾಯಿಯೊಂದಿತ್ತು ಅದಕ್ಕೆ ನಾವಿಟ್ಟ ಹೆಸರು ಶಾಡೋ.
ಟರ್ಫ್ ಕ್ಲಬ್ ಆವರಣದಲ್ಲಿ ಕುದುರೆಯ ಖುರಪುಟದ ಸದ್ದುಗಳು ಕೇಳಿಬರುವ ಹೊತ್ತಿನಲ್ಲಿ ನಾನು ಈ ಕುದುರೆಯ ಹೆಸರಿಗೂ ನಮ್ಮೂರ ಶ್ವಾನದಳದ ಹೆಸರಿಗೂ ಇರುವ ಸಂಬಂಧವನ್ನು ತಾಳೆ ಹಾಕುತ್ತಿದ್ದೆ. ಯಾಕೆ ಒಂದು ನೂರು ರೂಪಾಯಿ ಆಡಿ ಅದೃಷ್ಟ ಪರೀಕ್ಷಿಸಬಾರದು ಅಂತ ಅನಿಸಿದರೂ, ಮನುಷ್ಯನ ವಿನಾಶಕ್ಕೆ ಅತ್ಯಂತ ಹತ್ತಿರದ ದಾರಿ ಕುದುರೆ ಜೂಜು ಎನ್ನುವ ವಿವೇಕ ಎಚ್ಚರಿಸಿತು. ಕೂಲಿಕಾರರು, ಜವಾನರು, ರಿಕ್ಷಾಡ್ರೈವರ್ಗಳು, ಸರ್ಕಾರಿ ನೌಕರಸ್ತರು ಹೀಗೆ ರೇಸಿನ ದಾಸ್ಯಕ್ಕೆ ಸಿಕ್ಕವರು ಎಷ್ಟೊಂದು ಜನ ಎನಿಸಿತು. ಒಂದಿಷ್ಟು ಸುತ್ತಾಡಿ ಅಲ್ಲಿಂದ ಮರಳಿದೆ.
ಅಬೋಲಿನ್ ಎಪ್ಪತ್ತೊಂಭತ್ತು ಲಕ್ಷ ಗೆದ್ದಿರಬಹುದು. ಸುಮಾರು ೯ ಕೋಟಿಗೂ ಹೆಚ್ಚಿನ ಬೆಟ್ಟಿಂಗ್ ನಡೆದಿದೆ ಎನ್ನುತ್ತಾರೆ. ಆದರೆ ಅದು ಗೆದ್ದ ದಿನ ನೂರಾರು ಬಡ ಜೂಜುಗಾರರ ಮನೆಯ ದೀಪಗಳೂ ನಂದಿವೆ....!
Monday 15 June 2009
ಮಂದಣ್ಣ, ಬೋದಿಲೇರ್ ಮತ್ತು ಮಾಧವಿಕುಟ್ಟಿ
ಮನುಷ್ಯ ಸದಾ ಕುಡಿದ ಸ್ಥಿತಿಯಲ್ಲಿರಬೇಕು ಎನ್ನುತ್ತಾನೆ ಪ್ರೆಂಚ್ ಕವಿ ಬೋದಿಲೇರ್. ಬೋದಿಲೇರ್ನ ಮಾತು ನಿಜವಾಗುತ್ತಿದ್ದರೆ ಈ ಲೋಕವೆಲ್ಲಾ ಸದಾ ಎಷ್ಟೊಂದು ಅಮಲಿನಲ್ಲಿ ತೇಲುತ್ತಿರುತ್ತಿತ್ತು ಎಂದು ನಾನು ಯೋಚಿಸುತ್ತಿರುತ್ತೇನೆ. ನಮ್ಮಲ್ಲಿ ಕೆಲವೇ ಕೆಲವು ಜನರು ಮಾತ್ರ ಸಂಜೆಯ ಹೊತ್ತಿಗೆ ಬೋದಿಲೇರ್ನನ್ನು ನೆನಪಿಸಿಕೊಳ್ಳುತ್ತಾರಲ್ಲಾ ಎಂದು ಬೇಜಾರಾಗುತ್ತದೆ. ಒಮ್ಮೆ ತೇಜಸ್ವಿಯ ’ಕರ್ವಾಲೋ’ ಓದಿ ಲಂಕೇಶ್ "ನಾನೂ ಕೂಡ ಕೆಲವೊಮ್ಮೆ ಈ ಮಂದಣ್ಣನಂತಿದ್ದರೆ ಎಷ್ಟು ಚನ್ನಾಗಿರುತ್ತಿತ್ತು" ಎಂದು ಬರೆದಿದ್ದರು. ನನಗೂ ಕೂಡ ಇತ್ತೀಚೆಗೆ ಯಾಕೋ ಬೋದಿಲೇರ್ನಂತೆ ಕುಡಿದ ಸ್ಥಿತಿಯಲ್ಲಿ ಮಂದಣ್ಣನಂತೆ ಆರಾಮವಾಗಿ ತಿರುಗಾಡಿಕೊಂಡು ಇರಬೇಕು ಅನಿಸುತ್ತಿದೆ.
ಹೈದ್ರಾಬಾದ್ನಲ್ಲಿ ಲಂಕೇಶರ ಟೀಕೆ- ಟಿಪ್ಪಣಿ ಕುರಿತು ಪಿಎಚ್ಡಿ ಮಾಡುತ್ತಿರುವ ನನ್ನ ಸೀನಿಯರ್ ಒಬ್ಬರಿಗೆ ಮೊನ್ನೆ ಹೇಗಿದ್ದೀರಾ? ಎಂದು ಸ್ಕ್ರಾಪ್ ಮಾಡಿದರೆ, ಅವರು ’ಏನೂಂತ ಹೇಳಲಿ ಜೋಮನ್ ಹೊರಗಡೆ ಮಳೆ ಉಯಿತಿದೆ ಒಳಗಡೆ ಝಳ ಆಗ್ತಿದೆ; ನಟ್ಟ ನಡು ಲೈಫಲ್ಲಿ ಬಿಟ್ಟು ಹೋದವಳ ನೆನಪು, ದಟ್ಟ ಕಾಡಲ್ಲಿ ಅಮಾಯಕ ಮೊಲದ ಸ್ಥಿತಿ! ಇನ್ನು ನೀನೆ ಉಹಿಸಿಕೋ! ಎಂದು ತೀವ್ರ ವಿಷಾದಲ್ಲಿ ಪ್ರತಿಕ್ರಿಯಿಸಿದ್ದಾರೆ. ನಾನೂ ಕೂಡ ಅವರಿಗೆ ತೇಜಸ್ವಿ ಶೈಲಿಯಲ್ಲಿ ’ನಿಮ್ಮ ಎದೆಯೊಳಗಿನ ಅದಮ್ಯ ಪ್ರೇಮ ಶರಧಿಯನ್ನೂ, ತ್ಯಾಗಮಯತೆಯನ್ನೂ, ಸಾಹಸ ಪ್ರೀಯತೆಯನ್ನೂ ಅರಿಯುವ ಯೋಗ್ಯತೆ ಅಲ್ಲಿನ (ಹೈದ್ರಾಬಾದಿನ) ಹುಡುಗಿಯರಿಗೆ ಇಲ್ಲ ಎನ್ನುವ ತೀವ್ರ ವಿಷಾದ ನಿಮ್ಮಂತೆ ನನ್ನ ಹೃದಯವನ್ನೂ ಕಾಡುತ್ತಿದೆ ಎಂದು ಬರೆದು ಸಮಾಧಾನ ಮಾಡಿದ್ದೇನೆ.
"ನಾನು ಶ್ರಿಕೃಷ್ಣನನ್ನು ಅಲ್ಲಾಹುವಾಗಿ ಪರಿವರ್ತಿಸಿ ಅವನನ್ನು ಪ್ರವಾದಿಯನ್ನಾಗಿ ಮಾಡಿ, ಮೊಹಮದ್ ಎಂದು ಕರೆಯುತ್ತೇನೆ. ಗುರುವಾಯೂರಿಗೆ ಹೋದರೆ ಅಲ್ಲಿ ಕೃಷ್ಣ ಇರುವುದಿಲ್ಲ" ಎಂದು ನಿರ್ಭಯವಾಗಿ ಹೇಳಿಕೆ ನೀಡಿ, ಹಿಂದುತ್ವವಾದಿಗಳ ಕೆಂಗಣ್ಣಿಗೆ ಗುರಿಯಾದ ಮಾಧವಿಕುಟ್ಟಿ ಎಂಬ ಕಮಲಾ ಸುರಯ್ಯ ತೀರಿಹೋಗಿ ಈವತ್ತಿಗೆ ಹದಿನೇಳು ದಿನಗಳಾದವು. ನಾನು ಇಲ್ಲಿನ ಎಂಜಿ ರಸ್ತೆಯಲ್ಲಿರುವ ಹಲವು ಪುಸ್ತಕದ ಅಂಗಡಿಗೆ ನುಗ್ಗಿ ಅವರ ’ನಷ್ಟಪಟ್ಟ ನೀಲಾಂಬರಿಯೋ, ನೆಯ್ ಪಾಯಸ’ಮೋ ಸಿಗುತ್ತೆದೆಯೇ ಎಂದು ಆಸೆಯಿಂದ ಹುಡುಕಿ ಬಂದೆ. ಎಲ್ಲೂ ಸಿಗಲಿಲ್ಲ. ಸಿಕ್ಕಿದ್ದರೆ ಗೊತ್ತಿರುವ ಅಲ್ಪಸ್ವಲ್ಪ ಮಲಯಾಳದಲ್ಲಿ ಅದನ್ನು ಓದಬಹುದಿತ್ತು ಎಂಬ ಆಸೆ ಹಾಗೆಯೇ ಉಳಿಯಿತು. ಹಾಗೆ ರೂಮಿಗೆ ಬಂದು ಕೈಗೆ ಸಿಕ್ಕಿದ ’ಕರ್ವಾಲೋ’ ಮತ್ತೊಮ್ಮೆ ಓದಿದಾಗ ಈ ಮೇಲಿನ ತಮಾಷೆಗಳೆಲ್ಲಾ ನೆನಪಾದವು.
ಈಗೀಗ ಬ್ಲಾಗಿಗೆ ಬರೆಯಲು ತುಂಬಾ ಹೆದರಿಕೆ ಆಗುತ್ತಿದೆ. ಏಕೆಂದರೆ ನನ್ನ ಬ್ಲಾಗ್ ಆಫ್ಡೇಟ್ ಆಗಿ ನಾಲ್ಕು ತಿಂಗಳಾಯಿತು. ಸನ್ಮಾನ್ಯ ಬ್ಲಾಗಿಗರೇ ನಾನು ಮಳೆಹನಿಯ ಜೋಮನ್ ವರ್ಗೀಸ್ ಎಂದು ನನ್ನನ್ನು ನಾನೇ ಪರಿಚಯಿಸಿಕೊಳ್ಳುತ್ತಾ ಮತ್ತೊಮ್ಮೆ ಪ್ರಾರಂಭಿಸಬೇಕಿದೆ. ಮಳೆ ನಿಂತರೂ ಮಳೆಹನಿ ನಿಂತಿಲ್ಲ ಎನ್ನುವಂತೆ ನನ್ನ ಬ್ಲಾಗ್ ಈಗ ಆಪ್ಡೇಟ್ ಆಗಿದೆ. ಈ ಮಳೆ ಸುರಿಯುವ ಹೊತ್ತಿನಲ್ಲಾದರೂ ಕನ್ನಡದ ಸಹೃದಯ ಬ್ಲಾಗಿಗರು ಮಳೆಹನಿಯನ್ನು ನೆನಪಿಸಿಕೊಳ್ಳಲಿ ಎನ್ನುವ ಆಸೆಯಾಗುತ್ತಿದೆ.
ಕನ್ನಡದಲ್ಲಿ ಪ್ರತಿದಿನವೂ ಆಪ್ಡೇಟ್ ಆಗುವ ಬ್ಲಾಗ್ ಎಂದು ಯಾರಾದರೂ ಪ್ರಶಸ್ತಿ ಕೊಟ್ಟರೆ ಅದು ಪರ್ಯಾಯದ ಉದಯಶಂಕರ ಭಟ್ಟರಿಗೂ, ಅತ್ಯಂತ ನಿಧಾನವಾಗಿ ಅಫ್ಡೇಟ್ ಆಗುವ ಬ್ಲಾಗ್ ಎನ್ನುವ ಪ್ರಶಸ್ತಿ ಮಳೆಹನಿಗೂ ಖಂಡಿತ ಬರುತ್ತದೆಯೆಂದು ನಾನೂ ತುಂಬಾ ವಿಶ್ವಾಸ ಇಟ್ಟುಕೊಂಡಿದ್ದೇನೆ. ನನಗೆ ಸಿಗುವ ಈ ಪ್ರಾಮಾಣಿಕ ಪ್ರಶಸ್ತಿಗೆ ಯಾರಾದರೂ ಪ್ರತಿಸ್ಪರ್ಧಿಗಳಿದ್ದರೆ ಮೊದಲೇ ನನಗೆ ತಿಳಿಸತಕ್ಕದ್ದು. ವೀಕ್ ಆಫ್ ಇರುವ ದಿನ ಪ್ರೆಸ್ಕ್ಲಬ್ನಲ್ಲಿ ರಾಜಿ ಸಂಧಾನಕ್ಕೆ ಅವಕಾಶವಿರುತ್ತದೆ.
ಹೈದ್ರಾಬಾದ್ನಲ್ಲಿ ಲಂಕೇಶರ ಟೀಕೆ- ಟಿಪ್ಪಣಿ ಕುರಿತು ಪಿಎಚ್ಡಿ ಮಾಡುತ್ತಿರುವ ನನ್ನ ಸೀನಿಯರ್ ಒಬ್ಬರಿಗೆ ಮೊನ್ನೆ ಹೇಗಿದ್ದೀರಾ? ಎಂದು ಸ್ಕ್ರಾಪ್ ಮಾಡಿದರೆ, ಅವರು ’ಏನೂಂತ ಹೇಳಲಿ ಜೋಮನ್ ಹೊರಗಡೆ ಮಳೆ ಉಯಿತಿದೆ ಒಳಗಡೆ ಝಳ ಆಗ್ತಿದೆ; ನಟ್ಟ ನಡು ಲೈಫಲ್ಲಿ ಬಿಟ್ಟು ಹೋದವಳ ನೆನಪು, ದಟ್ಟ ಕಾಡಲ್ಲಿ ಅಮಾಯಕ ಮೊಲದ ಸ್ಥಿತಿ! ಇನ್ನು ನೀನೆ ಉಹಿಸಿಕೋ! ಎಂದು ತೀವ್ರ ವಿಷಾದಲ್ಲಿ ಪ್ರತಿಕ್ರಿಯಿಸಿದ್ದಾರೆ. ನಾನೂ ಕೂಡ ಅವರಿಗೆ ತೇಜಸ್ವಿ ಶೈಲಿಯಲ್ಲಿ ’ನಿಮ್ಮ ಎದೆಯೊಳಗಿನ ಅದಮ್ಯ ಪ್ರೇಮ ಶರಧಿಯನ್ನೂ, ತ್ಯಾಗಮಯತೆಯನ್ನೂ, ಸಾಹಸ ಪ್ರೀಯತೆಯನ್ನೂ ಅರಿಯುವ ಯೋಗ್ಯತೆ ಅಲ್ಲಿನ (ಹೈದ್ರಾಬಾದಿನ) ಹುಡುಗಿಯರಿಗೆ ಇಲ್ಲ ಎನ್ನುವ ತೀವ್ರ ವಿಷಾದ ನಿಮ್ಮಂತೆ ನನ್ನ ಹೃದಯವನ್ನೂ ಕಾಡುತ್ತಿದೆ ಎಂದು ಬರೆದು ಸಮಾಧಾನ ಮಾಡಿದ್ದೇನೆ.
"ನಾನು ಶ್ರಿಕೃಷ್ಣನನ್ನು ಅಲ್ಲಾಹುವಾಗಿ ಪರಿವರ್ತಿಸಿ ಅವನನ್ನು ಪ್ರವಾದಿಯನ್ನಾಗಿ ಮಾಡಿ, ಮೊಹಮದ್ ಎಂದು ಕರೆಯುತ್ತೇನೆ. ಗುರುವಾಯೂರಿಗೆ ಹೋದರೆ ಅಲ್ಲಿ ಕೃಷ್ಣ ಇರುವುದಿಲ್ಲ" ಎಂದು ನಿರ್ಭಯವಾಗಿ ಹೇಳಿಕೆ ನೀಡಿ, ಹಿಂದುತ್ವವಾದಿಗಳ ಕೆಂಗಣ್ಣಿಗೆ ಗುರಿಯಾದ ಮಾಧವಿಕುಟ್ಟಿ ಎಂಬ ಕಮಲಾ ಸುರಯ್ಯ ತೀರಿಹೋಗಿ ಈವತ್ತಿಗೆ ಹದಿನೇಳು ದಿನಗಳಾದವು. ನಾನು ಇಲ್ಲಿನ ಎಂಜಿ ರಸ್ತೆಯಲ್ಲಿರುವ ಹಲವು ಪುಸ್ತಕದ ಅಂಗಡಿಗೆ ನುಗ್ಗಿ ಅವರ ’ನಷ್ಟಪಟ್ಟ ನೀಲಾಂಬರಿಯೋ, ನೆಯ್ ಪಾಯಸ’ಮೋ ಸಿಗುತ್ತೆದೆಯೇ ಎಂದು ಆಸೆಯಿಂದ ಹುಡುಕಿ ಬಂದೆ. ಎಲ್ಲೂ ಸಿಗಲಿಲ್ಲ. ಸಿಕ್ಕಿದ್ದರೆ ಗೊತ್ತಿರುವ ಅಲ್ಪಸ್ವಲ್ಪ ಮಲಯಾಳದಲ್ಲಿ ಅದನ್ನು ಓದಬಹುದಿತ್ತು ಎಂಬ ಆಸೆ ಹಾಗೆಯೇ ಉಳಿಯಿತು. ಹಾಗೆ ರೂಮಿಗೆ ಬಂದು ಕೈಗೆ ಸಿಕ್ಕಿದ ’ಕರ್ವಾಲೋ’ ಮತ್ತೊಮ್ಮೆ ಓದಿದಾಗ ಈ ಮೇಲಿನ ತಮಾಷೆಗಳೆಲ್ಲಾ ನೆನಪಾದವು.
ಈಗೀಗ ಬ್ಲಾಗಿಗೆ ಬರೆಯಲು ತುಂಬಾ ಹೆದರಿಕೆ ಆಗುತ್ತಿದೆ. ಏಕೆಂದರೆ ನನ್ನ ಬ್ಲಾಗ್ ಆಫ್ಡೇಟ್ ಆಗಿ ನಾಲ್ಕು ತಿಂಗಳಾಯಿತು. ಸನ್ಮಾನ್ಯ ಬ್ಲಾಗಿಗರೇ ನಾನು ಮಳೆಹನಿಯ ಜೋಮನ್ ವರ್ಗೀಸ್ ಎಂದು ನನ್ನನ್ನು ನಾನೇ ಪರಿಚಯಿಸಿಕೊಳ್ಳುತ್ತಾ ಮತ್ತೊಮ್ಮೆ ಪ್ರಾರಂಭಿಸಬೇಕಿದೆ. ಮಳೆ ನಿಂತರೂ ಮಳೆಹನಿ ನಿಂತಿಲ್ಲ ಎನ್ನುವಂತೆ ನನ್ನ ಬ್ಲಾಗ್ ಈಗ ಆಪ್ಡೇಟ್ ಆಗಿದೆ. ಈ ಮಳೆ ಸುರಿಯುವ ಹೊತ್ತಿನಲ್ಲಾದರೂ ಕನ್ನಡದ ಸಹೃದಯ ಬ್ಲಾಗಿಗರು ಮಳೆಹನಿಯನ್ನು ನೆನಪಿಸಿಕೊಳ್ಳಲಿ ಎನ್ನುವ ಆಸೆಯಾಗುತ್ತಿದೆ.
ಕನ್ನಡದಲ್ಲಿ ಪ್ರತಿದಿನವೂ ಆಪ್ಡೇಟ್ ಆಗುವ ಬ್ಲಾಗ್ ಎಂದು ಯಾರಾದರೂ ಪ್ರಶಸ್ತಿ ಕೊಟ್ಟರೆ ಅದು ಪರ್ಯಾಯದ ಉದಯಶಂಕರ ಭಟ್ಟರಿಗೂ, ಅತ್ಯಂತ ನಿಧಾನವಾಗಿ ಅಫ್ಡೇಟ್ ಆಗುವ ಬ್ಲಾಗ್ ಎನ್ನುವ ಪ್ರಶಸ್ತಿ ಮಳೆಹನಿಗೂ ಖಂಡಿತ ಬರುತ್ತದೆಯೆಂದು ನಾನೂ ತುಂಬಾ ವಿಶ್ವಾಸ ಇಟ್ಟುಕೊಂಡಿದ್ದೇನೆ. ನನಗೆ ಸಿಗುವ ಈ ಪ್ರಾಮಾಣಿಕ ಪ್ರಶಸ್ತಿಗೆ ಯಾರಾದರೂ ಪ್ರತಿಸ್ಪರ್ಧಿಗಳಿದ್ದರೆ ಮೊದಲೇ ನನಗೆ ತಿಳಿಸತಕ್ಕದ್ದು. ವೀಕ್ ಆಫ್ ಇರುವ ದಿನ ಪ್ರೆಸ್ಕ್ಲಬ್ನಲ್ಲಿ ರಾಜಿ ಸಂಧಾನಕ್ಕೆ ಅವಕಾಶವಿರುತ್ತದೆ.
Tuesday 3 February 2009
ಏಟ್ಸ್, ಎಂಜಿ ರಸ್ತೆ ಮತ್ತು ತರಲೆ ಹುಂಜ
ಬಿಸಿಲು ಚಿನ್ನದ ಬಣ್ಣಕ್ಕೆ ತಿರುಗುವ ಹೊತ್ತಿಗೆ ನಾನು ಇಲ್ಲಿನ ಎಂಜಿ ರಸ್ತೆಯಲ್ಲಿರುವ ಇಂಡಿಯನ್ ಕಾಫಿಹೌಸ್ನಲ್ಲಿ ಕುಳಿತು ಬೆಂಗಳೂರನ್ನು ಅಪಾರ ಮೋಹದಿಂದ ನೋಡುತ್ತಿದ್ದೆ. ಮೈಮೇಲೆ ಎಚ್ಚರವಿಲ್ಲದೆ ಧಾವಿಸುವ ಹರೆಯದ ಹುಡುಗ ಹುಡುಗಿಯರು, ಪರಸ್ಪರ ಸೊಂಟ ಬಳಸಿ ನಡೆಯುವ ಪ್ರೇಮಿಗಳು, ಬ್ರಿಗೇಡ್ ರಸ್ತೆಯ ಕೆಂಪು, ಹಸಿರು ನಿಯಾನ್ ದೀಪಗಳಲ್ಲಿ ಯೌವನ ಉಕ್ಕಿಸುವ ತರುಣಿಯರು, ಸಂಜೆಗತ್ತಲಿಗೆ ಅಮಲು ತರಿಸುವಂತೆ ಹಾರುವ ಮುಂಗುರುಳುಗಳು ಎಲ್ಲವನ್ನೂ ತಣ್ಣನೆಯ ಅಸೂಯೆಯಿಂದ ನೋಡುತ್ತಿದ್ದೆ.
‘ಮೂಡಣದಂತೆ ಬೆಚ್ಚಗೆ, ಆದರೆ ಗ್ರೀಷ್ಮದಂತೆ ತಣ್ಣಗಿರಬೇಕು ನನ್ನ ಕಾವ್ಯ’ ಎಂದು ಹೇಳಿದ ಏಟ್ಸ್ ಕವಿ ಈ ಸಂಜೆಯ ಹೊತ್ತಿಗೆ ನೆನಪಾಗುತ್ತಾನೆ. ಏಟ್ಸ್ನನ್ನು ನಾನು ಹೆಚ್ಚು ಓದಿಕೊಂಡಿಲ್ಲ. ಆದರೆ ಅವನನ್ನು ಇಷ್ಟಪಡುವವರು ಆತನ ಕುರಿತು ಬರೆದಿದ್ದನ್ನು ಓದಿದ್ದೇನೆ. ‘ಮನುಷ್ಯನ ಮನಸ್ಸು ಯಾವ ಹೆಣ್ಣನ್ನು ಕುರಿತು ಹೆಚ್ಚು ಧ್ಯಾನಿಸುತ್ತದೆ, ಆತನಿಗೆ ಒಲಿದ ಹೆಣ್ಣನ್ನೋ, ಆತನಿಗೆ ಒಲಿಯದೇ ಹೋದ ಹೆಣ್ಣನ್ನೋ?’ ಎಂದು ಕೇಳುತ್ತಾನೆ ಏಟ್ಸ್? ನನಗೆ ನಗು ಬರುತ್ತದೆ. ಏಟ್ಸ್ ಸತ್ತು ಹೋಗಿದ್ದು ಡಿಸೆಂಬರ್ನ ಚಳಿಗಾಲದಲ್ಲಂತೆ. ‘ಎಲ್ಲಾ ಹಿಮಚ್ಛಾದಿತ ಗಿರಿಬನಗಳೂ, ಮಂಜು ಕವಿದ ವಿಮಾನ ನಿಲ್ದಾಣಗಳೂ ತಿಳಿಯಲಿ ನನ್ನ ಪ್ರೀತಿಯ ಕವಿ ಈ ಚಳಿಯಲ್ಲಿ ನಿಶ್ಯಬ್ಧನಾಗಿದ್ದಾನೆ ಎಂದು’ ಎಂದು ಏಟ್ಸ್ ತೀರಿಕೊಂಡಾಗ ಆಡೆನ್ ಬರೆದಿದ್ದರು. ಹೀಗೆ ಎನೇನೋ ಯೋಚನೆ ಮಾಡಿಕೊಂಡು ಬಿಎಮ್ಟಿಸಿ ಬಸ್ಸು ಹತ್ತಿದ್ದೆ.
ಥಟ್ಟನೆ ಆದಾಗಲೇ ನಾನು ಬೆಂಗಳೂರಿಗೆ ಬಂದು ಒಂದು ತಿಂಗಳು ಕಳೆಯಿತಲ್ಲ ಎನ್ನುವ ಜ್ಞಾನೋದಯವಾಯಿತು. ಮೊನ್ನೆ ಬ್ಲಾಗಿನಲ್ಲಿ ತುಂಬಾ ದಿನಗಳಿಂದ ಏನೂ ಬರೆಯದಿದ್ದಿದಕ್ಕೆ ಚಿತ್ರಾ ಅವರು ಮತ್ತೆಲ್ಲಿ ಕೆಲಸಕ್ಕೆ ರಾಜಿನಾಮೆಕೊಟ್ಟು ಊರಿಗೆ ಹೋಗಿದ್ದೀರಾ ಎಂದು ಕೇಳಿದ್ದರು. ಬ್ಲಾಗ್ ಬರೆಯುವುದು ಹೋಗಲಿ ಮೇಡಂ, ಬೆಂಗಳೂರಿನಲ್ಲಿ ಕೆಲಸ ಮಾಡುವರ ಅರ್ಧ ಆಯಸ್ಸು ಬಿಎಂಟಿಸಿ ಬಸ್ಸುಗಳಲ್ಲೇ ಕಳೆದುಹೋಗುತ್ತಿದೆ ಅಂತ ಅನಿಸುವಾಗ ವಾಪಾಸ್ಸು ಊರಿಗೇ ಹೋಗಿಬಿಡುವ ಅನಿಸುತ್ತದೆ. ಟ್ರಾಫಿಕ್ ಸಿಗ್ನಲ್ ಬಿದ್ದಾಗ ಕಾಲಿನಲ್ಲಿ ತೆವಳುತ್ತಾ ಕೈ ಚಾಚುವ ಮಹಿಳೆಯನ್ನು ನೋಡುತ್ತಾ ನಿಲ್ಲುತ್ತೇನೆ. ‘ಎಲ್ಲಿ ನೋವಿದೆಯೋ ಅಲ್ಲಿ ಸಾಂತ್ವನವನ್ನೂ, ಎಲ್ಲಿ ದು:ಖವಿದೆಯೋ ಅಲ್ಲಿ ಸುಖವನ್ನೂ ಹಂಚೋಣ ’ ಎಂದು ಹೇಳಿದ ಮದರ್ ತೆರೇಸಾ ನೆನಪಾಗುತ್ತಾರೆ. ‘ನೀವು ಒಳ್ಳೆಯವರಾದ್ರೆ ನಿಮ್ಮನ್ನು ಎಲ್ಲರೂ ಪ್ರೀತಿಸುತ್ತಾರೆ’ ಎಂದು ನನ್ನ ಪಿಯುಸಿ ಆಟೋಗ್ರಾಫ್ನಲ್ಲಿ ಬರೆದು, ನಾನು ಸುಮ್ಮನೆ ಎನೋನೋ ಕನಸು ಕಾಣುವಂತೆ ಮಾಡಿದ ಹುಡುಗಿಯೂ ಯಾಕೋ ಸುಮ್ಮನೆ ಈಗ ನೆನಪಾಗುತ್ತಿದ್ದಾಳೆ.
ಚೆನೈನ ಕೋಡಂಬಕ್ಕಂನ ವಿಸ್ತರಣೆಯಂತಿರುವ ಬೆಂಗಳೂರಿನ ಈ ಮರಿಯಪ್ಪನಪಾಳ್ಯದಲ್ಲಿ ನಾವು ರೂಮು ಮಾಡಿಕೊಂಡಿದ್ದೇವೆ. ನೈಟ್ಶಿಪ್ಟ್ ಮುಗಿಸಿ ಬೆಳಿಗ್ಗೆ ಹನ್ನೊಂದು ಗಂಟೆಗೆ ಎಳುವ ಹವ್ಯಾಸವಿರುವ ನನಗೆ ಬಂದ ದಿನದಿಂದ ಇಲ್ಲಿನ ಹುಂಜವೊಂದು ಕಾಟ ಕೊಡುತ್ತಿದೆ. ಸಾಮಾನ್ಯ ಎಲ್ಲ ಕೋಳಿಗಳು ಬೆಳಗಿನ ಜಾವ ಐದಕ್ಕೆಲ್ಲಾ ಕೂಗಿದರೆ ಈ ಹುಂಜ ರಾತ್ರಿ ಎರಡು ಗಂಟೆಯಿಂದಲೇ ತನ್ನ ಅಲಾರಾಂ ಮೊಳಗಿಸಲು ಪ್ರಾರಂಭಿಸುತ್ತದೆ. ಇನ್ನೇನು ಮಲಗಬೇಕು ಎನ್ನುವಷ್ಟರಲ್ಲಿ ಪಕ್ಕದ ಮೆಜೆಸ್ಟಿಕ್ವರೆಗೂ ಕೇಳಿಸುವಂತೆ ಕೋಳಿ ಕೂಗುತ್ತದೆ. ಒಮ್ಮೆ ಕೂಗಿ ನಿಲ್ಲಿಸುವುದಿಲ್ಲ. ಕೋಳಿಯ ನಿಲಯದ ಪ್ರಸಾರ ಬೆಳಗಿನ ಜಾವ ಐದುಗಂಟೆಯವರೆಗೆ ಮುಂದುವರೆಯುತ್ತದೆ. ಈ ಓಣಿಯಿಂದಲೂ ಸುಖವಿಲ್ಲ, ಕೋಳಿಯಿಂದಲೂ ಸಮಾಧಾನವಿಲ್ಲ ಎನ್ನುವಂತಾಗಿದೆ ನಮ್ಮ ಸ್ಥಿತಿ.
‘ಎಲಾ ಮರಿಯಪ್ಪನಪಾಳ್ಯದ ಹುಂಜವೇ, ನೀನು ಮಧ್ಯರಾತ್ರಿ ಕೂಗುವುದು ನಿಲ್ಲಿಸದಿದ್ದರೆ, ನಿನ್ನ ಬಗ್ಗೆ ಬ್ಲಾಗಿನಲ್ಲಿ ಬರೆದು ನಿನ್ನ ಮಾನ ಹರಾಜು ಹಾಕುತ್ತೇನೆ ಎಂದು ಅದಕ್ಕೆ ಹೇಳಿ ಬಂದಿದ್ದೇನೆ. ಅಷ್ಟಕ್ಕೂ ಕೂಗುವುದು ನಿಲ್ಲಿಸದಿದ್ದರೆ ಇಲ್ಲೇ ಪಕ್ಕದ ಓಣಿಯಲ್ಲಿರುವ ಛಾಯಾಕನ್ನಡಿಯ ಶಿವು ಅವರನ್ನು ಕರೆತಂದು ನಿನ್ನ ಚಿತ್ರ ತೆಗೆದು ಪತ್ರಿಕೆಯಲ್ಲಿ ಹಾಕುತ್ತೇನೆ ಎಂದು ಹೆದರಿಸಿದ್ದೇನೆ. ಆದರೂ ಅದು ಕೂಗುವುದನ್ನು ನಿಲ್ಲಿಸುವಂತೆ ಕಾಣಿಸುತ್ತಿಲ್ಲ. ನಿಮಗೆ ಯಾರಿಗಾದರೂ ಈ ಕೋಳಿಯ ಕೂಗನ್ನು ನಿಲ್ಲಿಸುವ ಐಡಿಯಾ ಗೊತ್ತಿದ್ದರೆ ತಿಳಿಸಿ.
‘ಮೂಡಣದಂತೆ ಬೆಚ್ಚಗೆ, ಆದರೆ ಗ್ರೀಷ್ಮದಂತೆ ತಣ್ಣಗಿರಬೇಕು ನನ್ನ ಕಾವ್ಯ’ ಎಂದು ಹೇಳಿದ ಏಟ್ಸ್ ಕವಿ ಈ ಸಂಜೆಯ ಹೊತ್ತಿಗೆ ನೆನಪಾಗುತ್ತಾನೆ. ಏಟ್ಸ್ನನ್ನು ನಾನು ಹೆಚ್ಚು ಓದಿಕೊಂಡಿಲ್ಲ. ಆದರೆ ಅವನನ್ನು ಇಷ್ಟಪಡುವವರು ಆತನ ಕುರಿತು ಬರೆದಿದ್ದನ್ನು ಓದಿದ್ದೇನೆ. ‘ಮನುಷ್ಯನ ಮನಸ್ಸು ಯಾವ ಹೆಣ್ಣನ್ನು ಕುರಿತು ಹೆಚ್ಚು ಧ್ಯಾನಿಸುತ್ತದೆ, ಆತನಿಗೆ ಒಲಿದ ಹೆಣ್ಣನ್ನೋ, ಆತನಿಗೆ ಒಲಿಯದೇ ಹೋದ ಹೆಣ್ಣನ್ನೋ?’ ಎಂದು ಕೇಳುತ್ತಾನೆ ಏಟ್ಸ್? ನನಗೆ ನಗು ಬರುತ್ತದೆ. ಏಟ್ಸ್ ಸತ್ತು ಹೋಗಿದ್ದು ಡಿಸೆಂಬರ್ನ ಚಳಿಗಾಲದಲ್ಲಂತೆ. ‘ಎಲ್ಲಾ ಹಿಮಚ್ಛಾದಿತ ಗಿರಿಬನಗಳೂ, ಮಂಜು ಕವಿದ ವಿಮಾನ ನಿಲ್ದಾಣಗಳೂ ತಿಳಿಯಲಿ ನನ್ನ ಪ್ರೀತಿಯ ಕವಿ ಈ ಚಳಿಯಲ್ಲಿ ನಿಶ್ಯಬ್ಧನಾಗಿದ್ದಾನೆ ಎಂದು’ ಎಂದು ಏಟ್ಸ್ ತೀರಿಕೊಂಡಾಗ ಆಡೆನ್ ಬರೆದಿದ್ದರು. ಹೀಗೆ ಎನೇನೋ ಯೋಚನೆ ಮಾಡಿಕೊಂಡು ಬಿಎಮ್ಟಿಸಿ ಬಸ್ಸು ಹತ್ತಿದ್ದೆ.
ಥಟ್ಟನೆ ಆದಾಗಲೇ ನಾನು ಬೆಂಗಳೂರಿಗೆ ಬಂದು ಒಂದು ತಿಂಗಳು ಕಳೆಯಿತಲ್ಲ ಎನ್ನುವ ಜ್ಞಾನೋದಯವಾಯಿತು. ಮೊನ್ನೆ ಬ್ಲಾಗಿನಲ್ಲಿ ತುಂಬಾ ದಿನಗಳಿಂದ ಏನೂ ಬರೆಯದಿದ್ದಿದಕ್ಕೆ ಚಿತ್ರಾ ಅವರು ಮತ್ತೆಲ್ಲಿ ಕೆಲಸಕ್ಕೆ ರಾಜಿನಾಮೆಕೊಟ್ಟು ಊರಿಗೆ ಹೋಗಿದ್ದೀರಾ ಎಂದು ಕೇಳಿದ್ದರು. ಬ್ಲಾಗ್ ಬರೆಯುವುದು ಹೋಗಲಿ ಮೇಡಂ, ಬೆಂಗಳೂರಿನಲ್ಲಿ ಕೆಲಸ ಮಾಡುವರ ಅರ್ಧ ಆಯಸ್ಸು ಬಿಎಂಟಿಸಿ ಬಸ್ಸುಗಳಲ್ಲೇ ಕಳೆದುಹೋಗುತ್ತಿದೆ ಅಂತ ಅನಿಸುವಾಗ ವಾಪಾಸ್ಸು ಊರಿಗೇ ಹೋಗಿಬಿಡುವ ಅನಿಸುತ್ತದೆ. ಟ್ರಾಫಿಕ್ ಸಿಗ್ನಲ್ ಬಿದ್ದಾಗ ಕಾಲಿನಲ್ಲಿ ತೆವಳುತ್ತಾ ಕೈ ಚಾಚುವ ಮಹಿಳೆಯನ್ನು ನೋಡುತ್ತಾ ನಿಲ್ಲುತ್ತೇನೆ. ‘ಎಲ್ಲಿ ನೋವಿದೆಯೋ ಅಲ್ಲಿ ಸಾಂತ್ವನವನ್ನೂ, ಎಲ್ಲಿ ದು:ಖವಿದೆಯೋ ಅಲ್ಲಿ ಸುಖವನ್ನೂ ಹಂಚೋಣ ’ ಎಂದು ಹೇಳಿದ ಮದರ್ ತೆರೇಸಾ ನೆನಪಾಗುತ್ತಾರೆ. ‘ನೀವು ಒಳ್ಳೆಯವರಾದ್ರೆ ನಿಮ್ಮನ್ನು ಎಲ್ಲರೂ ಪ್ರೀತಿಸುತ್ತಾರೆ’ ಎಂದು ನನ್ನ ಪಿಯುಸಿ ಆಟೋಗ್ರಾಫ್ನಲ್ಲಿ ಬರೆದು, ನಾನು ಸುಮ್ಮನೆ ಎನೋನೋ ಕನಸು ಕಾಣುವಂತೆ ಮಾಡಿದ ಹುಡುಗಿಯೂ ಯಾಕೋ ಸುಮ್ಮನೆ ಈಗ ನೆನಪಾಗುತ್ತಿದ್ದಾಳೆ.
ಚೆನೈನ ಕೋಡಂಬಕ್ಕಂನ ವಿಸ್ತರಣೆಯಂತಿರುವ ಬೆಂಗಳೂರಿನ ಈ ಮರಿಯಪ್ಪನಪಾಳ್ಯದಲ್ಲಿ ನಾವು ರೂಮು ಮಾಡಿಕೊಂಡಿದ್ದೇವೆ. ನೈಟ್ಶಿಪ್ಟ್ ಮುಗಿಸಿ ಬೆಳಿಗ್ಗೆ ಹನ್ನೊಂದು ಗಂಟೆಗೆ ಎಳುವ ಹವ್ಯಾಸವಿರುವ ನನಗೆ ಬಂದ ದಿನದಿಂದ ಇಲ್ಲಿನ ಹುಂಜವೊಂದು ಕಾಟ ಕೊಡುತ್ತಿದೆ. ಸಾಮಾನ್ಯ ಎಲ್ಲ ಕೋಳಿಗಳು ಬೆಳಗಿನ ಜಾವ ಐದಕ್ಕೆಲ್ಲಾ ಕೂಗಿದರೆ ಈ ಹುಂಜ ರಾತ್ರಿ ಎರಡು ಗಂಟೆಯಿಂದಲೇ ತನ್ನ ಅಲಾರಾಂ ಮೊಳಗಿಸಲು ಪ್ರಾರಂಭಿಸುತ್ತದೆ. ಇನ್ನೇನು ಮಲಗಬೇಕು ಎನ್ನುವಷ್ಟರಲ್ಲಿ ಪಕ್ಕದ ಮೆಜೆಸ್ಟಿಕ್ವರೆಗೂ ಕೇಳಿಸುವಂತೆ ಕೋಳಿ ಕೂಗುತ್ತದೆ. ಒಮ್ಮೆ ಕೂಗಿ ನಿಲ್ಲಿಸುವುದಿಲ್ಲ. ಕೋಳಿಯ ನಿಲಯದ ಪ್ರಸಾರ ಬೆಳಗಿನ ಜಾವ ಐದುಗಂಟೆಯವರೆಗೆ ಮುಂದುವರೆಯುತ್ತದೆ. ಈ ಓಣಿಯಿಂದಲೂ ಸುಖವಿಲ್ಲ, ಕೋಳಿಯಿಂದಲೂ ಸಮಾಧಾನವಿಲ್ಲ ಎನ್ನುವಂತಾಗಿದೆ ನಮ್ಮ ಸ್ಥಿತಿ.
‘ಎಲಾ ಮರಿಯಪ್ಪನಪಾಳ್ಯದ ಹುಂಜವೇ, ನೀನು ಮಧ್ಯರಾತ್ರಿ ಕೂಗುವುದು ನಿಲ್ಲಿಸದಿದ್ದರೆ, ನಿನ್ನ ಬಗ್ಗೆ ಬ್ಲಾಗಿನಲ್ಲಿ ಬರೆದು ನಿನ್ನ ಮಾನ ಹರಾಜು ಹಾಕುತ್ತೇನೆ ಎಂದು ಅದಕ್ಕೆ ಹೇಳಿ ಬಂದಿದ್ದೇನೆ. ಅಷ್ಟಕ್ಕೂ ಕೂಗುವುದು ನಿಲ್ಲಿಸದಿದ್ದರೆ ಇಲ್ಲೇ ಪಕ್ಕದ ಓಣಿಯಲ್ಲಿರುವ ಛಾಯಾಕನ್ನಡಿಯ ಶಿವು ಅವರನ್ನು ಕರೆತಂದು ನಿನ್ನ ಚಿತ್ರ ತೆಗೆದು ಪತ್ರಿಕೆಯಲ್ಲಿ ಹಾಕುತ್ತೇನೆ ಎಂದು ಹೆದರಿಸಿದ್ದೇನೆ. ಆದರೂ ಅದು ಕೂಗುವುದನ್ನು ನಿಲ್ಲಿಸುವಂತೆ ಕಾಣಿಸುತ್ತಿಲ್ಲ. ನಿಮಗೆ ಯಾರಿಗಾದರೂ ಈ ಕೋಳಿಯ ಕೂಗನ್ನು ನಿಲ್ಲಿಸುವ ಐಡಿಯಾ ಗೊತ್ತಿದ್ದರೆ ತಿಳಿಸಿ.
Monday 29 December 2008
ಕೆಲಸವಿಲ್ಲದೇ ಕಳೆದ ಒಂದು ತಿಂಗಳು
ಆರ್ಥಿಕ ಮುಗ್ಗಟ್ಟಿನಿಂದ ಜಗತ್ತಿನ ದೊಡ್ಡ ದೊಡ್ಡ ಕಂಪನಿಗಳೇ ತಮ್ಮ ಉದ್ಯೋಗಿಗಳನ್ನು ನೋಟೀಸು ಕೂಡ ಕೊಡದೆ ತೆಗೆದುಹಾಕುತ್ತಿರುವಾಗ, ಕೆಲಸದಲ್ಲಿರುವವರು ತಮ್ಮ ಕೆಲಸ ಯಾವಾಗ ಹೋಗುತ್ತದೆಯೋ ಎನ್ನುವ ಸ್ಥಿತಿಯಲ್ಲಿರುವಾಗ, ಈಗ ಹಗಲು ದೀಪ ಹಚ್ಚಿ ಹುಡುಕಿದರೂ ಒಂದೇ ಒಂದು ಕೆಲಸ ಖಾಲಿ ಇಲ್ಲದಿರುವಾಗ, ನಾನೇನು ಮಾಡಿದೆ ಗೊತ್ತೇ? ನನ್ನ ಇದ್ದ ಕೆಲಸಕ್ಕೆ ರಾಜೀನಾಮೆ ಕೊಟ್ಟು ಊರಿಗೆ ಹೋಗಿದ್ದೆ. ನಿನಗೇನು ಹುಚ್ಚು ಹಿಡಿದಿದೆಯಾ? ಅಂತ ನೀವು ಬೈಯಬೇಡಿ. ಈಗಾಗಲೇ ಸಾಕಷ್ಟು ಜನ ಇದಕ್ಕಿಂತಲೂ ಚೆನ್ನಾಗಿಯೇ ನನ್ನನ್ನು ಬೈದಿದ್ದಾರೆ. `ಈಗ ನನಗೆ ಕೆಲಸ ಇಲ್ಲ ಕಣೋ/ಕಣೇ`ಎಂದು ಹೇಳಿ ಎಲ್ಲರಿಂದಲೂ ಒಂದಿಷ್ಟು ಪ್ರೀತಿ, ಅನುಕಂಪ ಪಡೆಯಬಹುದು ಎಂದು ನಿರೀಕ್ಷಿಸಿದ್ದ ನನಗೆ ಎಲ್ಲರಿಂದಲೂ ಸರಿಯಾಗಿ ಬೈಗುಳ ಸಿಕ್ಕಿತ್ತು. ಜೊತೆಗೆ ಹೊಟ್ಟೆ ತುಂಬುವಷ್ಟು ಮಂಗಳಾರತಿ. ನಿನಗೆ ಇನ್ನೊಂದೆರಡು ವರ್ಷ ಕೆಲಸವೇ ಸಿಗುವುದಿಲ್ಲ ಎಂದು ಹೆದರಿಸಿದವರೂ ಇದ್ದಾರೆ.
ನಾನು ಮಾತ್ರ `ದಂಡಿಗೆ ಹೆದರಿಲ್ಲ, ದಾಳಿಗೆ ಹೆದರಿಲ್ಲ, ಇದ್ಯಾವ ಮಹಾ ಕೆಲಸ` ಎನ್ನುವ ರೀತಿಯಲ್ಲಿ ಊರಿನ ದಾರಿ ಹಿಡಿದಿದ್ದೆ. ಒಂದು ತಿಂಗಳು ಯಾರಿಗೂ ಹೇಳದೇ ಕೇಳದೆ ಎಲ್ಲಾದರೂ ಸುತ್ತಲು ಹೋಗಬೇಕೆಂದುಕೊಂಡಿದ್ದೆ. ಒಮ್ಮೆ ಹಿಮಾಲಯಕ್ಕೆ, ಟಿಬೆಟ್ಟಿಗೆ ಹೋಗಿ ಬರಬೇಕು ಎಂದು ಸಹೋದ್ಯೋಗಿ ಜಿತೇಂದ್ರನಿಗೂ ಹೇಳಿದ್ದೆ. ಮನೆಯಲ್ಲಿ ಯಾರಿಗೂ ನಾನು ಕೆಲಸಕ್ಕೆ ರಾಜೀನಾಮೆ ಸಲ್ಲಿಸಿರುವ ವಿಷಯ ಹೇಳಲಿಲ್ಲ. ಒಂದು ತಿಂಗಳು ರಜೆ ಹಾಕಿದ್ದೇನೆ ಎಂದಿದ್ದೆ. ಆದರೂ ತಿಂಗಳು ಮುಗಿಯುವುದರೊಳಗೆ ಹೊಸ ಕೆಲಸ ಹುಡುಕಿಕೊಳ್ಳಬೇಕಲ್ಲಪ್ಪಾ ಎನ್ನುವ ಭೀತಿ ಒಳಗೊಳಗೇ ಇಣುಕುತಿತ್ತು. ನಮ್ಮಪ್ಪನಿಗೆ ಮಾತ್ರ ಇವ ಇಷ್ಟು ದಿವಸ ಯಾವತ್ತೂ ರಜೆ ಹಾಕಿ ಊರಿಗೆ ಬಂದವನಲ್ಲ, ಏನಾದರೂ ಆಗಿರಬೇಕು ಎನ್ನುವ ಸಂಶಯ ಮೊದಲ ದಿನವೇ ಹಟ್ಟಿತ್ತು. ಕೇಳಿದಾಗೊಮ್ಮೆ ನಾನು ವಿಷಯ ಮರೆಸುತ್ತಿದ್ದೆ. ಆದರೆ ದೇಶ ಸುತ್ತಲು ಹೋಗುವ ನನ್ನ ಆಸೆ ಕೈಕೊಟ್ಟಿತ್ತು. ಮನೆಯಲ್ಲಿ ಒಂದಿಷ್ಟು ಕೆಲಸ ಇತ್ತು.
ಒಂದು ತಿಂಗಳು ನಾನು ಹುಟ್ಟಿ ಬೆಳೆದ ನಮ್ಮೂರನ್ನು ಹತ್ತಿರದಿಂದ ನೋಡಿದೆ. ನಮ್ಮೂರ ಅಡಿಕೆ ತೋಟದಲ್ಲಿ, ಹಸಿರು ತುಂಬಿದ ಗದ್ದೆಗಳಲ್ಲಿ, ಬೈಗಿನ ಬೆಳಗಿನಲ್ಲಿ, ಮುತ್ತುಗ ಅರಳಿದ ಕಾಡಿನ ದಾರಿಯಲ್ಲಿ ಕಳೆದುಹೋದ ಯಾವುದೋ ವಸ್ತುವನ್ನು ಹುಡುಕುವಂತೆ ನಾನು ಖುಷಿ ಖುಷಿಯಿಂದ ದಿನಗಳು ಕಳೆದೆ. ಒಂದು ತಿಂಗಳು ನನಗೆ ಅಪ್ಯಾಯಮಾನವಾಗಿತ್ತು. ನನ್ನ ಮನಸ್ಸಿನ ಹುಲ್ಲುಗಾವಲಿನಲ್ಲಿ ಬೆಳಕಿನ ಬೀಜಗಳು ಅರಳಿದ್ದವು. ಕಳೆದ ಏಳೆಂಟು ವರ್ಷದಿಂದ ನಾನು ಊರಲ್ಲಿರುವುದು ವರ್ಷದಲ್ಲಿ ಹದಿನೈದೋ, ಇಪ್ಪತ್ತೋ ದಿನ. ನಮ್ಮನೆಯ ಹಿತ್ತಲಿನ ಮಾವಿನ ಗಿಡದಲ್ಲಿ ಕಾಯಿ ಬಿಟ್ಟಿದೆಯಾ ಎನ್ನುವ ವಿಷಯವೇ ನನಗೆ ತಿಳಿಯುವುದಿಲ್ಲ, ಹೀಗಿರುವಲ್ಲಿ ಊರಿನ ಸಮಾಚಾರ ಹೇಗೆ ತಿಳಿಯಬೇಕು? ಆದರೆ ಈ ಒಂದು ತಿಂಗಳು, ನನಗೆ ಅಪರಿಚಿತ ಎನಿಸತೊಡಗಿದ್ದ ನನ್ನೂರು ನನಗೆ ಇನ್ನಷ್ಟು ಹತ್ತಿರವಾಯಿತು. ಜಗತ್ತಿನ ಯಾವುದೇ ಕೆಲಸ ಕೊಡುವ ತೃಪ್ತಿಗಿಂತ ಹೆಚ್ಚಿನ ಖುಷಿಯನ್ನೂ, ಸಂತೃಪ್ತಿಯನ್ನೂ ಅದು ನನಗೆ ನೀಡಿತ್ತು. ಅಸಲಿಗೆ ನಾನು ಕೆಲಸಕ್ಕೆ ರಾಜೀನಾಮೆ ಸಲ್ಲಿಸಿ ಊರಿಗೆ ಬಂದಿದ್ದೇನೆ ಎನ್ನುವುದು ನನಗೆ ಮರತೇ ಹೋದಂತಿತ್ತು.
ಕೆಲಸದ ವಿಷಯಕ್ಕೆ ಬರೋಣ. ಕಳೆದ ಒಂದು ವರ್ಷ ನಾನು ನೀವೆಲ್ಲರೂ ಓದಿರಬಹುದಾದ ಕೆಂಡಸಂಪಿಗೆಯಲ್ಲಿ ಉಪಸಂಪಾದಕನಾಗಿದ್ದೆ. ಕಳೆದ ವರ್ಷ ಹೀಗೆಯೇ ಚಳಿಯಿದ್ದ ಡಿಸೆಂಬರಿನ ಒಂದು ದಿನ ನಾನು ಮೈಸೂರಿಗೆ ಬಂದು ಈ ಕೆಲಸಕ್ಕೆ ಸೇರಿಕೊಂಡಿದ್ದೆ. ಮೈಸೂರಿನ ರಸ್ತೆಗಳನ್ನು ಸುತ್ತುತ್ತಾ ಹಾಯಾಗಿದ್ದೆ. ಇದ್ದಕ್ಕಿದಂತೆ ಒಂದು ದಿನ ನನಗೆ ಈ ಕೆಲಸ ಇನ್ನು ಸಾಕು ಅಂತ ಅನಿಸತೊಡಗಿತು. ಕಾರಣವೇನೂ ಇಲ್ಲ, ಹಾಗೆ ಸುಮ್ಮನೆ. ಇನ್ನು ಸಾಕು ಎಂಬ ಅನಿಸಿಕೆ ಗಟ್ಟಿಯಾಗತೊಡಗಿದಾಗ ಕೆಲಸಕ್ಕೆ ರಾಜೀನಾಮೆ ಸಲ್ಲಿಸಿ ಹೊರಟು ಹೋಗಿದ್ದೆ.
ಒಂದು ತಿಂಗಳು ಊರಿನಲ್ಲಿ ಕಳೆದು ಬಂದಿದ್ದೇನೆ. ಬ್ಲಾಗ್ ಕೂಡ ಅಪ್ ಡೇಟ್ ಮಾಡಲಾಗಲಿಲ್ಲ. ಮೇಲ್ ಗಳ ರಾಶಿಯೇ ತುಂಬಿದೆ. ಅಂದಹಾಗೆ ಒಂದು ಖುಷಿಯ ವಿಷಯವಿದೆ. ನಾನೀಗ ನಿರುದ್ಯೋಗಿಯಲ್ಲ, ಒಂದು ಹೊಸ ಕೆಲಸ ಸಿಕ್ಕಿದೆ. ಬೆಂಗಳೂರಿನಲ್ಲಿ. ಉಪಸಂಪಾದಕ. ಹೊಸ ವರ್ಷದ ಮೊದಲ ದಿನ ಹೊಸ ಕೆಲಸಕ್ಕೆ ಸೇರಿಕೊಳ್ಳಲಿದ್ದೇನೆ. ನಿಮ್ಮ ಪ್ರೀತಿ, ವಿಶ್ವಾಸ, ಜೊತೆಗೊಂದಿಷ್ಟು ಅನುಕಂಪವೂ ಇರಲಿ ಎನ್ನುವ ಆಸೆ.
ನಾನು ಮಾತ್ರ `ದಂಡಿಗೆ ಹೆದರಿಲ್ಲ, ದಾಳಿಗೆ ಹೆದರಿಲ್ಲ, ಇದ್ಯಾವ ಮಹಾ ಕೆಲಸ` ಎನ್ನುವ ರೀತಿಯಲ್ಲಿ ಊರಿನ ದಾರಿ ಹಿಡಿದಿದ್ದೆ. ಒಂದು ತಿಂಗಳು ಯಾರಿಗೂ ಹೇಳದೇ ಕೇಳದೆ ಎಲ್ಲಾದರೂ ಸುತ್ತಲು ಹೋಗಬೇಕೆಂದುಕೊಂಡಿದ್ದೆ. ಒಮ್ಮೆ ಹಿಮಾಲಯಕ್ಕೆ, ಟಿಬೆಟ್ಟಿಗೆ ಹೋಗಿ ಬರಬೇಕು ಎಂದು ಸಹೋದ್ಯೋಗಿ ಜಿತೇಂದ್ರನಿಗೂ ಹೇಳಿದ್ದೆ. ಮನೆಯಲ್ಲಿ ಯಾರಿಗೂ ನಾನು ಕೆಲಸಕ್ಕೆ ರಾಜೀನಾಮೆ ಸಲ್ಲಿಸಿರುವ ವಿಷಯ ಹೇಳಲಿಲ್ಲ. ಒಂದು ತಿಂಗಳು ರಜೆ ಹಾಕಿದ್ದೇನೆ ಎಂದಿದ್ದೆ. ಆದರೂ ತಿಂಗಳು ಮುಗಿಯುವುದರೊಳಗೆ ಹೊಸ ಕೆಲಸ ಹುಡುಕಿಕೊಳ್ಳಬೇಕಲ್ಲಪ್ಪಾ ಎನ್ನುವ ಭೀತಿ ಒಳಗೊಳಗೇ ಇಣುಕುತಿತ್ತು. ನಮ್ಮಪ್ಪನಿಗೆ ಮಾತ್ರ ಇವ ಇಷ್ಟು ದಿವಸ ಯಾವತ್ತೂ ರಜೆ ಹಾಕಿ ಊರಿಗೆ ಬಂದವನಲ್ಲ, ಏನಾದರೂ ಆಗಿರಬೇಕು ಎನ್ನುವ ಸಂಶಯ ಮೊದಲ ದಿನವೇ ಹಟ್ಟಿತ್ತು. ಕೇಳಿದಾಗೊಮ್ಮೆ ನಾನು ವಿಷಯ ಮರೆಸುತ್ತಿದ್ದೆ. ಆದರೆ ದೇಶ ಸುತ್ತಲು ಹೋಗುವ ನನ್ನ ಆಸೆ ಕೈಕೊಟ್ಟಿತ್ತು. ಮನೆಯಲ್ಲಿ ಒಂದಿಷ್ಟು ಕೆಲಸ ಇತ್ತು.
ಒಂದು ತಿಂಗಳು ನಾನು ಹುಟ್ಟಿ ಬೆಳೆದ ನಮ್ಮೂರನ್ನು ಹತ್ತಿರದಿಂದ ನೋಡಿದೆ. ನಮ್ಮೂರ ಅಡಿಕೆ ತೋಟದಲ್ಲಿ, ಹಸಿರು ತುಂಬಿದ ಗದ್ದೆಗಳಲ್ಲಿ, ಬೈಗಿನ ಬೆಳಗಿನಲ್ಲಿ, ಮುತ್ತುಗ ಅರಳಿದ ಕಾಡಿನ ದಾರಿಯಲ್ಲಿ ಕಳೆದುಹೋದ ಯಾವುದೋ ವಸ್ತುವನ್ನು ಹುಡುಕುವಂತೆ ನಾನು ಖುಷಿ ಖುಷಿಯಿಂದ ದಿನಗಳು ಕಳೆದೆ. ಒಂದು ತಿಂಗಳು ನನಗೆ ಅಪ್ಯಾಯಮಾನವಾಗಿತ್ತು. ನನ್ನ ಮನಸ್ಸಿನ ಹುಲ್ಲುಗಾವಲಿನಲ್ಲಿ ಬೆಳಕಿನ ಬೀಜಗಳು ಅರಳಿದ್ದವು. ಕಳೆದ ಏಳೆಂಟು ವರ್ಷದಿಂದ ನಾನು ಊರಲ್ಲಿರುವುದು ವರ್ಷದಲ್ಲಿ ಹದಿನೈದೋ, ಇಪ್ಪತ್ತೋ ದಿನ. ನಮ್ಮನೆಯ ಹಿತ್ತಲಿನ ಮಾವಿನ ಗಿಡದಲ್ಲಿ ಕಾಯಿ ಬಿಟ್ಟಿದೆಯಾ ಎನ್ನುವ ವಿಷಯವೇ ನನಗೆ ತಿಳಿಯುವುದಿಲ್ಲ, ಹೀಗಿರುವಲ್ಲಿ ಊರಿನ ಸಮಾಚಾರ ಹೇಗೆ ತಿಳಿಯಬೇಕು? ಆದರೆ ಈ ಒಂದು ತಿಂಗಳು, ನನಗೆ ಅಪರಿಚಿತ ಎನಿಸತೊಡಗಿದ್ದ ನನ್ನೂರು ನನಗೆ ಇನ್ನಷ್ಟು ಹತ್ತಿರವಾಯಿತು. ಜಗತ್ತಿನ ಯಾವುದೇ ಕೆಲಸ ಕೊಡುವ ತೃಪ್ತಿಗಿಂತ ಹೆಚ್ಚಿನ ಖುಷಿಯನ್ನೂ, ಸಂತೃಪ್ತಿಯನ್ನೂ ಅದು ನನಗೆ ನೀಡಿತ್ತು. ಅಸಲಿಗೆ ನಾನು ಕೆಲಸಕ್ಕೆ ರಾಜೀನಾಮೆ ಸಲ್ಲಿಸಿ ಊರಿಗೆ ಬಂದಿದ್ದೇನೆ ಎನ್ನುವುದು ನನಗೆ ಮರತೇ ಹೋದಂತಿತ್ತು.
ಕೆಲಸದ ವಿಷಯಕ್ಕೆ ಬರೋಣ. ಕಳೆದ ಒಂದು ವರ್ಷ ನಾನು ನೀವೆಲ್ಲರೂ ಓದಿರಬಹುದಾದ ಕೆಂಡಸಂಪಿಗೆಯಲ್ಲಿ ಉಪಸಂಪಾದಕನಾಗಿದ್ದೆ. ಕಳೆದ ವರ್ಷ ಹೀಗೆಯೇ ಚಳಿಯಿದ್ದ ಡಿಸೆಂಬರಿನ ಒಂದು ದಿನ ನಾನು ಮೈಸೂರಿಗೆ ಬಂದು ಈ ಕೆಲಸಕ್ಕೆ ಸೇರಿಕೊಂಡಿದ್ದೆ. ಮೈಸೂರಿನ ರಸ್ತೆಗಳನ್ನು ಸುತ್ತುತ್ತಾ ಹಾಯಾಗಿದ್ದೆ. ಇದ್ದಕ್ಕಿದಂತೆ ಒಂದು ದಿನ ನನಗೆ ಈ ಕೆಲಸ ಇನ್ನು ಸಾಕು ಅಂತ ಅನಿಸತೊಡಗಿತು. ಕಾರಣವೇನೂ ಇಲ್ಲ, ಹಾಗೆ ಸುಮ್ಮನೆ. ಇನ್ನು ಸಾಕು ಎಂಬ ಅನಿಸಿಕೆ ಗಟ್ಟಿಯಾಗತೊಡಗಿದಾಗ ಕೆಲಸಕ್ಕೆ ರಾಜೀನಾಮೆ ಸಲ್ಲಿಸಿ ಹೊರಟು ಹೋಗಿದ್ದೆ.
ಒಂದು ತಿಂಗಳು ಊರಿನಲ್ಲಿ ಕಳೆದು ಬಂದಿದ್ದೇನೆ. ಬ್ಲಾಗ್ ಕೂಡ ಅಪ್ ಡೇಟ್ ಮಾಡಲಾಗಲಿಲ್ಲ. ಮೇಲ್ ಗಳ ರಾಶಿಯೇ ತುಂಬಿದೆ. ಅಂದಹಾಗೆ ಒಂದು ಖುಷಿಯ ವಿಷಯವಿದೆ. ನಾನೀಗ ನಿರುದ್ಯೋಗಿಯಲ್ಲ, ಒಂದು ಹೊಸ ಕೆಲಸ ಸಿಕ್ಕಿದೆ. ಬೆಂಗಳೂರಿನಲ್ಲಿ. ಉಪಸಂಪಾದಕ. ಹೊಸ ವರ್ಷದ ಮೊದಲ ದಿನ ಹೊಸ ಕೆಲಸಕ್ಕೆ ಸೇರಿಕೊಳ್ಳಲಿದ್ದೇನೆ. ನಿಮ್ಮ ಪ್ರೀತಿ, ವಿಶ್ವಾಸ, ಜೊತೆಗೊಂದಿಷ್ಟು ಅನುಕಂಪವೂ ಇರಲಿ ಎನ್ನುವ ಆಸೆ.
Subscribe to:
Posts (Atom)